ಎಸ್ಸಿ, ಎಸ್ಟಿಗಳಿಗೆ ಬಡ್ತಿಯಲ್ಲಿ ಮೀಸಲಾತಿ: ಸುಪ್ರೀಂಕೋರ್ಟ್ ಅನುಮತಿ
ನವದೆಹಲಿ, ಜೂನ್ 5: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸರ್ಕಾರಿ ನೌಕರರಿಗೆ ಕಾನೂನಿಗೆ ಅನುಗುಣವಾಗಿ ಮೀಸಲಾತಿಯಡಿ ಬಡ್ತಿ ನೀಡಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿದೆ.
ಸುಪ್ರೀಂಕೋರ್ಟ್ ತನ್ನ ಸಾಂವಿಧಾನಿಕ ಪೀಠ ಈ ಸಂಬಂಧ ಮುಂದಿನ ಆದೇಶ ನೀಡುವವರೆಗೂ ಇದು ಅನ್ವಯವಾಗಲಿದೆ ಎಂದು ಅದು ಹೇಳಿದೆ. ಆದರೆ, ಯಾವ ಕಾನೂನಿಗೆ ಅನುಗುಣವಾಗಿ ಕೇಂದ್ರ ಸರ್ಕಾರ ಬಡ್ತಿ ನೀಡಬೇಕು ಎಂಬ ಬಗ್ಗೆ ಅದು ಸ್ಪಷ್ಟಪಡಿಸಿಲ್ಲ.
ಎಲ್ಲ ಸರ್ಕಾರಿ ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರಿಗೆ ಮೀಸಲಾತಿ ಅಡಿ ಬಡ್ತಿ ನೀಡುವ ಸಲುವಾಗಿ ಕೇಂದ್ರ ಸರ್ಕಾರ 1997ರ ಆಗಸ್ಟ್ 13ರಂದು ಹೊರಡಿಸಿದ್ದ ಅಧಿಸೂಚನೆಯನ್ನು ದೆಹಲಿ ಹೈಕೋರ್ಟ್ ರದ್ದುಗೊಳಿಸಿತ್ತು.

ಇದನ್ನು ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿತ್ತು. ನ್ಯಾಯಮೂರ್ತಿಗಳಾದ ಆದರ್ಶ ಕುಮಾರ್ ಗೋಯೆಲ್ ಮತ್ತು ಅಶೋಕ್ ಭೂಷನ್ ಅವರನ್ನು ಒಳಗೊಂಡ ರಜಾ ಪೀಠವು ಕೇಂದ್ರ ಸರ್ಕಾರದ ಉದ್ದೇಶಕ್ಕೆ ಸಹಮತ ವ್ಯಕ್ತಪಡಿಸಿದೆ.
ಅರ್ಹತೆ ಇಲ್ಲದೆ ಎಸ್ಸಿ ಎಸ್ಟಿಗಳ ಪರವಾಗಿ ಬಡ್ತಿಯಲ್ಲಿ ಮೀಸಲಾತಿಯನ್ನು ಕುರುಡಾಗಿ ಒದಗಿಸಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಕಳೆದ ವರ್ಷ ಸರ್ಕಾರದ ಅಧಿಸೂಚನೆಯನ್ನು ತಿರಸ್ಕರಿಸಿತ್ತು.
ಬಡ್ತಿಯಲ್ಲಿನ ಮೀಸಲಾತಿಯ ಪರವಾಗಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಆದರೆ, ಕೆಲವು ಷರತ್ತುಗಳನ್ನು ಸಹ ಅದು ಮುಂದಿಟ್ಟಿದೆ. ಕೋಟಾ ಮಾರ್ಗದರ್ಶಿಗೆ ಅನುಗುಣವಾಗಿ ಉದ್ಯೋಗಿಯ ಹಿನ್ನೆಲೆ, ಆತನ ದಕ್ಷತೆಗೆ ಅನುಗುಣವಾಗಿ ಬಡ್ತಿ ನೀಡುವಂತೆ ಸೂಚಿಸಿದೆ ಎಂದು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.












Click it and Unblock the Notifications