ಬಿಜೆಪಿ ಗೆಲುವು ಮೋದಿ ಅಲೆಯಿಂದಲ್ಲ : ಆರೆಸ್ಸೆಸ್
ನವದೆಹಲಿ, ಆ.11: ಭಾರತದಲ್ಲಿರುವ ಎಲ್ಲಾ ನಿವಾಸಿಗಳು ಹಿಂದೂತ್ವದ ಮೂಲಕ ತಮ್ಮ ಸಾಂಸ್ಕೃತಿಕ ಗುರುತಾಗಿಸಿಕೊಳ್ಳಬೇಕು. ಹಿಂದೂತ್ವ ಎಂದರೆ ಅದೊಂದು ಜೀವನಶೈಲಿ ಅಷ್ಟೇ ಎಂದು ಹೇಳಿಕೆ ನೀಡಿದ್ದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಈಗ ಮೋದಿ ಹೆಸರು ಹೇಳದೆ ಮೋದಿ ವಿರುದ್ಧವೇ ಹೇಳಿಕೆ ನೀಡಿದ್ದಾರೆ.
ಕೇಂದ್ರದಲ್ಲಿ ಎನ್ಡಿಎ ಸರ್ಕಾರದ ಪ್ರತಿಷ್ಠಾಪನೆಯ ಹಿಂದಿರುವುದು ದೇಶದ ಜನತೆಯ ಗೆಲುವೇ ಹೊರತು ಯಾವೊಬ್ಬ ವ್ಯಕ್ತಿ ಅಥವಾ ಪಕ್ಷದ್ದಲ್ಲ. ಈ ಗೆಲುವು ದೇಶದ ಜನತೆಗೇ ಸಲ್ಲುತ್ತದೆ. ಏಕೆಂದರೆ ಜನ ಬದಲಾವಣೆ ಬಯಸಿದ್ದರು. ಈ ಗೆಲುವು ಯಾವುದೇ ಒಬ್ಬ ನಿರ್ದಿಷ್ಟ ನಾಯಕನಿಗೆ ಸಲ್ಲುವ ಅಗತ್ಯವಿಲ್ಲ. ನರೇಂದ್ರ ಮೋದಿ ಅವರ ಅಲೆ ಎಲ್ಲೆಡೆ ಇತ್ತು ಹೀಗಾಗಿ ಜನ ಬಿಜೆಪಿಗೆ ಮತ ಹಾಕಿದರು ಎಂದರೆ ನಾನು ಒಪ್ಪುವುದಿಲ್ಲ ಎಂದು ಭಾಗ್ವತ್ ಹೇಳಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು ನರೇಂದ್ರ ಮೋದಿ ಅಲೆಯಿಂದಲೇ ಎಂಬ ಹೇಳಿಕೆಗಳಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗ್ವತ್ ಈ ರೀತಿ ತಿರುಗೇಟು ನೀಡಿದ್ದಾರೆ.

ಒರಿಸ್ಸಾ ರಾಜಧಾನಿ ಭುವನೇಶ್ವರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಭಾಗ್ವತ್ ಯಾರ ಹೆಸರನ್ನೂ ಹೇಳದೆ, ಚುನಾವಣೆಯಲ್ಲಿ ಗೆದ್ದು, ಅಧಿಕಾರದ ಚುಕ್ಕಾಣಿ ಹಿಡಿದಿರುವುದಕ್ಕೆ ನರೇಂದ್ರ ಮೋದಿ ಅಥವಾ ಬಿಜೆಪಿ ಕಾರಣವೇ ಅಲ್ಲ ಎಂದು ಹೇಳಿದರು.
ಆರ್ಎಸ್ಎಸ್ ಬಿಜೆಪಿಯ ಸೂತ್ರಧಾರ ಎನ್ನುವುದನ್ನು ಮರೆಯುವಂತಿಲ್ಲ. ಈ ಮೊದಲೂ ಬಿಜೆಪಿಯಿತ್ತು. ನಾಯಕರಿದ್ದರು. ಆದರೆ ಜನ ತಮಗೆ ಬೇಕಾದ ಸರ್ಕಾರವನ್ನು ಉಳಿಸಿಕೊಂಡಿದ್ದರು. ಈಗ ಬದಲಾವಣೆ ಬಯಸಿ ಸರ್ಕಾರ ಬದಲಿಸಿದರು. ಹಾಗಾಗಿ ಇದು ಜನರ ಸರ್ಕಾರ, ಜನರ ಗೆಲುವು ಅಷ್ಟೆ.
ಭಾನುವಾರ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ನಾಯಕ ಅಮಿತ್ ಷಾ , ಗೃಹ ಸಚಿವ ರಾಜನಾಥ್ ಸಿಂಗ್ ಅವರು ಪರಸ್ಪರ ಹೊಗಳುತ್ತಾ ಈ ಬಾರಿಯ ಗೆಲುವಿಗೆ ತಾವೇ ಕಾರಣ ಎಂಬಂತೆ ಬಿಂಬಿಸಿದ್ದರು.
ಈ ಗೆಲುವಿಗಾಗಿ ನರೇಂದ್ರ ಮೋದಿ, ಅಮಿತ್ ಷಾ ಮುಂತಾದ ನಾಯಕರು ಒಬ್ಬರ ಬೆನ್ನನ್ನು ಒಬ್ಬರು ತಟ್ಟುವುದು ಬೇಡ ಎಂದು ಭಾಗ್ವತ್ ಬಿಜೆಪಿ ನಾಯಕರಿಗೆ ಬಿಸಿ ಮುಟ್ಟಿಸಿದ್ದಾರೆ.
ದೇಶದ ರಕ್ಷಣೆ ಮತ್ತು ಭದ್ರತೆ ವಿಷಯದಲ್ಲಿ ಆರ್ಎಸ್ಎಸ್ ಯಾವತ್ತು ರಾಜಿ ಮಾಡಿಕೊಳ್ಳುವುದಿಲ್ಲ. ಸಂಘಕ್ಕೆ ಬೆನ್ನೆಲುಬಾಗಿ ನಿಲ್ಲುವವರು ಜನತೆಯೇ (ಮತದಾರರು) ಹೊರತು ಪಕ್ಷವಾಗಲೀ, ಸರ್ಕಾರವಾಗಲಿ ಅಲ್ಲ. ಏಕೆಂದರೆ ಮತದಾರರೇ ಇಲ್ಲಿ ಪ್ರಭುಗಳು. ಮತದಾರನೇ ಒಡೆಯ ಎಂದು ಭಾಗ್ವತ್ ಒತ್ತಿ ಹೇಳಿದರು.
ಹಿಂದೂತ್ವದ ಬಗ್ಗೆ ಭಾಗ್ವತ್ ನೀಡಿರುವ ಹೇಳಿಕೆಯನ್ನು ಕಾಂಗ್ರೆಸ್ ತಿರಸ್ಕರಿಸಿ ಭಾರತ ವಿವಿಧತೆಯಲ್ಲಿ ಏಕತೆಯನ್ನು ಕಾಣುವ ದೇಶ. ವೈವಿಧ್ಯಮಯ ಧರ್ಮ, ಮತ, ಪಂಥಗಳನ್ನು ನಾವು ಇಲ್ಲಿ ಕಾಣಬಹುದು ಎಂದಿದೆ. ಶಿವಸೇನೆ ಮಾತ್ರ ಮೋಹನ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದೆ.












Click it and Unblock the Notifications