'ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ' ಯಾಕಾಗಿ?
ಬೆಂಗಳೂರು, ಆಗಸ್ಟ್, 02: ಸಾಮಾಜಿಕ ಹೋರಾಟಗಾರ ರವಿ ಕೃಷ್ಣಾ ರೆಡ್ಡಿ ನೇತೃತ್ವದಲ್ಲಿ 'ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ' ಆರಂಭವಾಗಿದೆ. ಸಮಾಜದಲ್ಲಿ ಪಿಡುಗಾಗಿ ಪರಿಣಮಿಸಿರುವ ಲಂಚ ಎಂಬ ಭೂತವನ್ನು ಹೊಡೆದೊಡಿಸಲು ವೇದಿಕೆ ಇನ್ನು ಮುಂದೆ ಕೆಲಸ ಮಾಡಲಿದೆ.
ಸರ್ಕಾರ ತಂದಿರುವ "ಸಕಾಲ ಕಾಯ್ದೆ"ಯು ಜನ ತಮ್ಮ ಕಾನೂನುಬದ್ಧ ಕೆಲಸವನ್ನು ನಿಗದಿತ ಅವಧಿಯೊಳಗೆ ಯಾವುದೇ ಲಂಚ ಕೊಡದೆ ಮಾಡಿಸಿಕೊಳ್ಳುವ ಅವಕಾಶವನ್ನು ಕೊಟ್ಟಿದೆ. ಆದರೆ ಇದರ ಬಗ್ಗೆ ವ್ಯಾಪಕ ಪ್ರಚಾರ ಇಲ್ಲದಿರುವುದರಿಂದ ಮತ್ತು ಭ್ರಷ್ಟ ಅಧಿಕಾರಿಗಳು ಇದನ್ನೂ ದುರುಪಯೋಗ ಪಡಿಸಿಕೊಳ್ಳುತ್ತಿರುವುದರಿಂದ ಈಗಲೂ ಬಹುತೇಕ ಜನ ಲಂಚ ಕೊಡದೆ ತಮ್ಮ ಕೆಲಸ ಮಾಡಿಸಿಕೊಳ್ಳಲಾಗುತ್ತಿಲ್ಲ. [ಆಪ್ ಸಭೆಗಳಲ್ಲಿ ರವಿ ಕೃಷ್ಣಾರೆಡ್ಡಿ ಏಕೆ ಕಾಣಿಸಿಕೊಳ್ಳುತ್ತಿಲ್ಲ?]

ಹಾಗೆಯೇ, "ಮಾಹಿತಿ ಹಕ್ಕು ಕಾಯ್ದೆ"ಯ ಮೂಲಕ ಯಾವುದೇ ಅಕ್ರಮ ಆದೇಶ, ಮಂಜೂರಾತಿ, ಇತ್ಯಾದಿಗಳನ್ನು ಹೊರತೆಗೆದು ಅಕ್ರಮ ಕೆಲಸ ಮಾಡಿಕೊಟ್ಟ ಮತ್ತು ಮಾಡಿಸಿಕೊಂಡವರ ಮೇಲೆ ಕಾನೂನುಕ್ರಮಕ್ಕೆ ಮುಂದಾಗಲು ಸಾಮಾಜಿಕ ಹಿತಾಸಕ್ತಿಯುಳ್ಳ ಕಾರ್ಯಕರ್ತರಿಗೆ ಇಂದು ಸಾಧ್ಯವಾಗಿದೆ.[ರವಿ ರೆಡ್ಡಿ ಲೋಕಸತ್ತಾ ಬಿಟ್ಟು ಏಕೆ ಆಪ್ ಸೇರಿದರು?]
ಈ ಎಲ್ಲದರ ಹಿನ್ನೆಲೆಯಲ್ಲಿ, ಸರ್ಕಾರಿ ಕಚೇರಿಗಳಲ್ಲಿಯ ಲಂಚ ಮತ್ತು ಭ್ರಷ್ಟಾಚಾರದ ವಿರುದ್ದ ಹೋರಾಡಲು ಮತ್ತು ಅದನ್ನು ಎದುರಿಸಲು ಸಾರ್ವಜನಿಕರಿಗೆ ಅಗತ್ಯವಾಗಿ ಬೇಕಾದ "ಸಕಾಲ" ಮತ್ತು "ಮಾಹಿತಿ ಹಕ್ಕು ಕಾಯ್ದೆ"ಯ ಬಗ್ಗೆ ಮಾಹಿತಿ, ತರಬೇತಿ, ಕಾರ್ಯಾಗಾರಗಳನ್ನು ಏರ್ಪಡಿಸಲು "ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ"ಯನ್ನು ಆರಂಭಿಸುತ್ತಿದ್ದೇವೆ ಎಂದು ರವಿ ಕೃಷ್ಣಾ ರೆಡ್ಡಿ ತಿಳಿಸಿದ್ದಾರೆ.
ವೇದಿಕೆಯ ಕಾರ್ಯದರ್ಶಿಯನ್ನಾಗಿ ಸಾಮಾಜಿಕ ಕಾರ್ಯಕರ್ತ ಎಮ್.ಎಸ್.ವೆಂಕಟೇಶ್ ಪ್ರಸಾದರನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರು ನಗರ ಸಮಿತಿಯ ಅಧ್ಯಕ್ಷರನ್ನಾಗಿ ಸಾಮಾಜಿಕ ಕಾರ್ಯಕರ್ತವಿ.ಆರ್.ಮರಾಠೆಯವರನ್ನು ಆಯ್ಕೆ ಮಾಡಲಾಗಿದೆ.
ಕೇಂದ್ರ ಮತ್ತು ಬೆಂಗಳೂರು ನಗರ ಸಮಿತಿಯ ಪೂರ್ಣ ವಿವರಗಳನ್ನು ಈ ಪತ್ರಿಕಾ ಟಿಪ್ಪಣಿಯ ಕೊನೆಯಲ್ಲಿ ನೀಡಲಾಗಿದೆ. ಮುಂದಿನ ಆರು ತಿಂಗಳಲ್ಲಿ ಸದಸ್ಯರಿಂದಲೇ ನೇರವಾಗಿ ಪ್ರಜಾಸತ್ತಾತ್ಮಕವಾಗಿ ಸಮಿತಿ ಸದಸ್ಯರ ಆಯ್ಕೆಯನ್ನು ಮಾಡಲು ನಿರ್ಧರಿಸಲಾಗಿದೆ.
ವೇದಿಕೆಯ ಮೊದಲ ಕಾರ್ಯಕ್ರಮ ಬೆಂಗಳೂರು ನಗರದ ಕೆಂಪೇಗೌಡ ರಸ್ತೆಯಲ್ಲಿರುವ ಬೆಂಗಳೂರು ಉತ್ತರ ಮತ್ತು ದಕ್ಷಿಣ ತಾಲ್ಲೂಕುಗಳ ತಹಸೀಲ್ದಾರ್ ಕಚೇರಿಗಳ ಆವರಣವಾಗಿರುವ "ಕಂದಾಯ ಭವನ"ದಲ್ಲಿ ಆಗಸ್ಟ್ 6, ಶನಿವಾರದಂದು "ಲಂಚಮುಕ್ತ ಕರ್ನಾಟಕ ಅಭಿಯಾನ"ದಿಂದ ಆರಂಭವಾಗಲಿದೆ.
"ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ"ಯ ಧ್ಯೇಯೋದ್ದೇಶಗಳು:
ಸರ್ಕಾರಿ ಕಚೇರಿಗಳಲ್ಲಿಯ ಲಂಚ ಮತ್ತು ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಮೂಡಿಸುವುದು "ಮಾಹಿತಿ ಹಕ್ಕು ಕಾಯ್ದೆ" ಮತ್ತು "ಸಕಾಲ ಕಾಯ್ದೆ"ಯ ಕುರಿತು ಮಾಹಿತಿ ಮತ್ತು ತರಬೇತಿ ಶಿಬಿರಗಳನ್ನು ಏರ್ಪಡಿಸುವುದು ಮುಖ್ಯ ಉದ್ದೇಶ.
ರಾಜ್ಯದ ಯಾವುದೇ ಭಾಗದ ಜನತೆ ಭ್ರಷ್ಟ ಅಧಿಕಾರಿಗಳು ತಮಗೆ ಲಂಚದ ಬೇಡಿಕೆ ಇಟ್ಟ ಸಂದರ್ಭದಲ್ಲಿ ನಮಗೆ ಕರೆ ಮಾಡಿ ಸೂಕ್ತ ಸಹಾಯ ಪಡೆಯಲು ಅನುವಾಗುವಂತೆ ಹೆಲ್ಪ್ಲೈನ್ (08884277730) ನಡೆಸುವುದು. ಸರ್ಕಾರಿ ಅಧಿಕಾರಿ ಮತ್ತು ಜನಪ್ರತಿನಿಧಿಗಳ ಲಂಚ ಮತ್ತು ಭ್ರಷ್ಟಾಚಾರದ ಬಗ್ಗೆ ನಮಗೆ ಲಭ್ಯವಾಗುವ ಮಾಹಿತಿಯನ್ನು ಭ್ರಷ್ಟಾಚಾರ ನಿಯಂತ್ರಣ ಸಂಸ್ಥೆಗಳಾದ "ಕರ್ನಾಟಕ ಲೋಕಾಯುಕ್ತ" ಮತ್ತು "ಭ್ರಷ್ಟಾಚಾರ ನಿಗ್ರಹ ದಳ" ಸಂಸ್ಥೆಗಳಿಗೆ ನೀಡಿ ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ಭ್ರಷ್ಟರ ವಿರುದ್ಧ ಸೂಕ್ತ ನ್ಯಾಯಾಲಯಗಳಲ್ಲಿ ಮೊಕದ್ದಮೆ ಹೂಡಿ ಕಾನೂನು ಹೋರಾಟ ಮಾಡುವುದನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತಿದೆ.
ನಾಡಿನ ನೈಸರ್ಗಿಕ ಸಂಪನ್ಮೂಲಗಳಾದ ಭೂಮಿ-ನೀರು-ಅರಣ್ಯ-ಖನಿಜಗಳ ಉಳಿವಿಗಾಗಿ ಮತ್ತು ರಕ್ಷಣೆಗಾಗಿ ಹೋರಾಡುವುದು ಮೂಲಭೂತ ಸೌಕರ್ಯಗಳ ಅನುಷ್ಠಾನಕ್ಕಾಗಿ ಮತ್ತು ಸ್ಥಳೀಯ ಕುಂದುಕೊರತೆಗಳ ವಿಚಾರಕ್ಕೆ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳೊಂದಿಗೆ ಪತ್ರವ್ಯವಹಾರ ಮತ್ತು ಹೋರಾಟ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿ ಯಾ ಸಂಘಟನೆಗಳ ಜೊತೆಗೂಡಿ ಜನರ ಹಿತಾಸಕ್ತಿಗಾಗಿ ಜಂಟಿ ಹೋರಾಟಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಿದೆ.[ರವಿಕೃಷ್ಣಾರೆಡ್ಡಿಯರ 'ಎದೆಯ ಕೂಗು ಮೀರಿ'ದ ಮಾತುಗಳು..]
"ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ" ಪದಾಧಿಕಾರಿಗಳ ಪಟ್ಟಿ:
ಕೇಂದ್ರ ಸಮಿತಿ:
ಅಧ್ಯಕ್ಷ: ರವಿ ಕೃಷ್ಣಾರೆಡ್ಡಿ
ಕಾರ್ಯದರ್ಶಿ: ಎಮ್.ಎಸ್.ವೆಂಕಟೇಶ್ ಪ್ರಸಾದ್
ಕಾರ್ಯಕಾರಿ ಸಮಿತಿ ಸದಸ್ಯರು: ಕುಸುಮ ಕೃಷ್ಣ, ಸುನಿಲ್ ಕುಮಾರ್, ಪೀಟರ್ ಸ್ಯಾಮ್ಸನ್, ಶಿವಕುಮಾರ್ ರಾಜನ್, ನರೇಂದ್ರ ಕುಮಾರ್, ಡಾ. ಸತೀಶ್ ಶೇಂದ್ರೆ, ಉದಯ ಸಿಂಹ, ಎನ್.ಮೂರ್ತಿ, ಎಂ.ಶ್ರೀನಿವಾಸ ನಾಯಕ
ಬೆಂಗಳೂರು ನಗರ ಸಮಿತಿ:
ಅಧ್ಯಕ್ಷ: ವಿಜಯ ರಾಘವ ಮರಾಠೆ
ಕಾರ್ಯದರ್ಶಿ: ಮಹೇಶ್ ಗುರುಸಿದ್ಧಯ್ಯ
ಕಾರ್ಯಕಾರಿ ಸಮಿತಿ ಸದಸ್ಯರು: ಎಡ್ವರ್ಡ್ ನಿಕ್ಸನ್, ಸತ್ಯಬೋಧ ಕುಲಕರ್ಣಿ, ಕೆ.ಎಸ್.ರಾಮಚಂದ್ರ, ರಮೇಶ್ ರಂಗಪ್ಪ, ಶಿವನಂಜೇಗೌಡ
"ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ" ಕಾರ್ಯಕ್ರಮಗಳ ಪಟ್ಟಿ
ದಿ: 13-08-2016, ಶನಿವಾರದಂದು, ಬೆಳಗ್ಗೆ 11 ಗಂಟೆಗೆ, ಬೆಂಗಳೂರು ಸ್ವಾತಂತ್ರ್ಯ ಉದ್ಯಾನವನದಲ್ಲಿರುವ ಸಭಾಂಗಣದಲ್ಲಿ "ಮಾಹಿತಿ ಹಕ್ಕು ಕಾಯ್ದೆ ಮತ್ತು ಸಕಾಲ ಕಾಯ್ದೆ"ದ ಬಗ್ಗೆ ವಿಚಾರಗೋಷ್ಟಿ ಮತ್ತು ಈ ಕಾಯ್ದೆಗಳ ಬಗ್ಗೆ ಹಲವಾರು ಪುಸ್ತಕಗಳನ್ನು ಬರೆದು ರಾಜ್ಯದಾದ್ಯಂತ ನೂರಾರು ತರಬೇತಿ ಶಿಬಿರಗಳನ್ನು ನಡೆಸಿಕೊಟ್ಟಿರುವ ಮಾಹಿತಿ ಹಕ್ಕು ಕಾಯ್ದೆಯ ತಜ್ಞ ಜೆ.ಎಮ್.ರಾಜಶೇಖರ್ ರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿಯವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಅದೇ ದಿನ ಮಧ್ಯಾಹ್ನ ಅದೇ ಸಭಾಂಗಣದಲ್ಲಿ ಮಧ್ಯಾಹ್ನ 2 ರಿಂದ 5 ಗಂಟೆಯವರೆಗೆ "ಮಾಹಿತಿ ಹಕ್ಕು ಕಾಯ್ದೆ" ಮತ್ತು "ಸಕಾಲ ಕಾಯ್ದೆ" ಬಗ್ಗೆ ಜೆ.ಎಮ್.ರಾಜಶೇಖರ್ ರವರಿಂದ ತರಬೇತಿ ಶಿಬಿರ ಏರ್ಪಡಿಸಲಾಗಿದೆ.
ಆಗಸ್ಟ್, 20, ಶನಿವಾರದಂದು, ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕು ಕಚೇರಿಯ ಆವರಣದಲ್ಲಿ "ಲಂಚಮುಕ್ತ ಕರ್ನಾಟಕ ಅಭಿಯಾನ"ವನ್ನು ಹಮ್ಮಿಕೊಳ್ಳಲಾಗಿದೆ.
ಆಗಸ್ಟ್,27 ಶನಿವಾರದಂದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕು ಕಚೇರಿಯ ಆವರಣದಲ್ಲಿ "ಲಂಚಮುಕ್ತ ಕರ್ನಾಟಕ ಅಭಿಯಾನ"ವನ್ನು ಹಮ್ಮಿಕೊಳ್ಳಲಾಗಿದೆ.
ಸೆಪ್ಟೆಂಬರ್. 09 ಶನಿವಾರದಂದು, ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕು ಕಚೇರಿಯ ಆವರಣದಲ್ಲಿ "ಲಂಚಮುಕ್ತ ಕರ್ನಾಟಕ ಅಭಿಯಾನ"ವನ್ನು ಹಮ್ಮಿಕೊಳ್ಳಲಾಗಿದೆ.












Click it and Unblock the Notifications