ಸೇನೆ ಸೇರಲಿದ್ದಾರೆ ಪುಲ್ವಾಮಾ ದಾಳಿಯ ಹುತಾತ್ಮ ಯೋಧನ ಪತ್ನಿ: ಸ್ಫೂರ್ತಿದಾಯಕ ಕಥೆ
ಡೆಹ್ರಾಡೂನ್, ಫೆಬ್ರವರಿ 20: ಒಂದು ವರ್ಷದ ಹಿಂದೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಗೆ ಬಲಿಯಾದ ಯೋಧರಲ್ಲಿ ಉತ್ತರಾಖಂಡದ ಡೆಹ್ರಾಡೂನ್ನ ಮೇಜರ್ ವಿಭೂತಿ ಧೌಂಡಿಯಾಲ್ ಒಬ್ಬರು. ಫೆ. 14ರಂದು ನಡೆದಿದ್ದ ಭೀಕರ ದಾಳಿಯಲ್ಲಿ ಹುತಾತ್ಮರಾಗಿದ್ದ ವಿಭೂತಿ ಅವರ ಪತ್ನಿ ನಿಖಿತಾ ಧೌಂಡಿಯಾಲ್, ಆಘಾತ ತಾಳಲಾರದೆ ಕಂಗಾಲಾಗಿದ್ದರು. ಆದರೆ, ಪತಿಯ ಸಾವು ಅವರ ಮಾನಸಿಕ ಸ್ಥೈರ್ಯವನ್ನು ಸಾಯಿಸಿರಲಿಲ್ಲ. ಬದಲಾಗಿ ಅವರು ಒಂದು ವರ್ಷದ ಅವಧಿಯಲ್ಲಿ ಇನ್ನಷ್ಟು ದೃಢರಾಗಿದ್ದಾರೆ. ಪತಿಯ ಸಾವಿನ ಪ್ರತೀಕಾರ ತೀರಿಸಿಕೊಳ್ಳಲು ಸೇನಾ ಸಮವಸ್ತ್ರವನ್ನೂ ತೊಡಲಿದ್ದಾರೆ.
ಪತಿಯನ್ನು ಕಳೆದುಕೊಂಡ ನಿಖಿತಾ, ಧೃತಿಗೆಡದೆ ಪತಿಯ ಹಾದಿಯಲ್ಲಿಯೇ ಹೆಜ್ಜೆ ಹಾಕಲು ಸನ್ನದ್ಧರಾಗಿದ್ದಾರೆ. ಅವರ ಧೈರ್ಯ ಮತ್ತು ಮನೋಸ್ಥೈರ್ಯದ ಕಥೆ ಸ್ಫೂರ್ತಿದಾಯಕವಾಗಿದೆ.
ಮೇಜರ್ ವಿಭೂತಿ ಅವರು ಹುತಾತ್ಮರಾದ ನಂತರ ಸೇನೆಯನ್ನು ಸೇರಲು ಅಗತ್ಯವಿರುವ ಎಲ್ಲ ಪರೀಕ್ಷೆಗಳಲ್ಲಿಯೂ ನಿಖಿತಾ ಉತ್ತೀರ್ಣರಾಗಿದ್ದಾರೆ. ಡೆಹ್ರಾಡೂನ್ನ ನಿವಾಸಿಯಾಗಿರುವ ಅವರು ಭಾರತೀಯ ಸೇನೆಯನ್ನು ಸೇರಿಕೊಳ್ಳಲು ಸಕಲ ಸಿದ್ಧತೆ ನಡೆಸಿದ್ದಾರೆ. ಪತಿಯ ದೇಶಪ್ರೇಮದ ಪ್ರೇರಣೆ ಮತ್ತು ಸೇನೆಯ ಮಾರ್ಗದರ್ಶನವನ್ನು ಪಡೆದ ನಿಖಿತಾ, ತಮ್ಮ ಹಾದಿಯನ್ನು ತಾವೇ ನಿರ್ಮಿಸಿಕೊಂಡಿದ್ದಾರೆ.

ಸತತ ಪರಿಶ್ರಮದ ಫಲ
ಇದೆಲ್ಲವೂ ಹಂತಹಂತವಾಗಿ ನಡೆದಿದೆಯೇ ಹೊರತು, ಒಂದು ದಿನ ಬೆಳಗಾಗುವುದರೊಳಗೆ ಆಗಿರುವುದಲ್ಲ ಎನ್ನುತ್ತಾರೆ ನಿಖಿತಾ. ಸೇನೆಯನ್ನು ಸೇರುವ ಅವರ ಹಂಬಲಕ್ಕೆ ಅವರ ಕುಟುಂಬದ ಉತ್ತೇಜನ ಮತ್ತು ಸಹಕಾರವೂ ಅವರಿಗೆ ಧೈರ್ಯ ನೀಡಿದೆ. ಪತಿಯನ್ನು ಕಳೆದುಕೊಂಡ ಬಳಿಕ ದೃಢ ಸಂಕಲ್ಪ ಮಾಡಿದ ನಿಖಿತಾ, ಕಠಿಣ ಪರಿಶ್ರಮವಹಿಸಿ ಸೇನೆಯ ಎಲ್ಲಾ ಪರೀಕ್ಷೆಗಳನ್ನೂ ಯಶಸ್ವಿಯಾಗಿ ಪೂರೈಸಿದ್ದಾರೆ.

ಎಂದೂ ಸೋಲೊಪ್ಪಿಕೊಳ್ಳಬಾರದು
'ಜೀವನದಲ್ಲಿ ಯಾರೂ ಸೋಲನ್ನು ಒಪ್ಪಿಕೊಳ್ಳಬಾರದು. ಸೋತರೂ ಅದರಿಂದ ಕಲಿಯುವುದು ಸಾಕಷ್ಟಿದೆ. ಸ್ವಾವಲಂಬಿಯಾದಾಗ ಮಾತ್ರ ವ್ಯಕ್ತಿ ಕಲಿಯಲು ಸಾಧ್ಯ. ನನ್ನ ಹುತಾತ್ಮ ಪತಿಯ ನೆನಪು ನನಗೆ ಯಾವಾಗಲೂ ಸ್ಫೂರ್ತಿಯಾಗಿರುತ್ತದೆ ಮತ್ತು ಹಾಗೆಯೇ ಪ್ರೇರಣೆ ನೀಡುತ್ತಲೇ ಇರುತ್ತದೆ' ಎಂದು ನಿಖಿತಾ ಹೇಳುತ್ತಾರೆ.

ಪತಿಯ ನೆನಪೇ ಧೈರ್ಯ
ಪತಿ ವಿಭೂತಿ ನೆನಪುಗಳು ನಿಖಿತಾ ಅವರನ್ನು ಕುಗ್ಗಿಸಿಲ್ಲ. ಬದಲು ಆ ನೆನಪುಗಳಲ್ಲಿಯೇ ಅವರನ್ನು ಧೈರ್ಯ ತುಂಬಿಕೊಂಡಿದ್ದಾರೆ. ಪತಿಯನ್ನು ಕಳೆದುಕೊಂಡ ನೋವನ್ನು ಅವರು ಕರ್ತವ್ಯ ನಿರ್ವಹಿಸಿದ ಸೇನೆಯಲ್ಲಿಯೇ ಕೆಲಸ ಮಾಡುವ ಮೂಲಕ ಮರೆಯುವ ಮತ್ತು ದೇಶಸೇವೆ ಪವಿತ್ರ ಕಾರ್ಯದಲ್ಲಿ ತೊಡಗಿಕೊಳ್ಳುವ ಅಚಲ ನಿರ್ಧಾರ ಅವರದು. ತಾಯ್ನಾಡನ್ನು ರಕ್ಷಿಸಲು ಮೇಜರ್ ವಿಭೂತಿ ಅವರು ತಮ್ಮ ಪ್ರಾಣ ತ್ಯಾಗ ಮಾಡಿದ್ದರು. ಈಗ ಅವರ ಪತ್ನಿಯೂ ತಾಯ್ನಾಡಿನ ರಕ್ಷಣೆಯ ಕಾರ್ಯಕ್ಕೆ ಸಿದ್ಧರಾಗಿ ನಿಂತಿದ್ದಾರೆ.

ಸಾವಿರಾರು ಮಂದಿ ಅಶ್ರುತರ್ಪಣ
2019ರ ಫೆ.14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೇಜರ್ ವಿಭೂತಿ ಧೌಂಡಿಯಾಲ್ ಹುತಾತ್ಮರಾಗಿದ್ದರು. ಫೆ. 19ರಂದು ಡೆಹ್ರಾಡೂನ್ನಲ್ಲಿ ವಿಭೂತಿ ಅವರ ನಿವಾಸದಲ್ಲಿ ನೆರೆದಿದ್ದ ಸಾವಿರಾರು ಮಂದಿ ಮೃತದೇಹಕ್ಕೆ ಅಂತಿಮ ನಮನ ಸಲ್ಲಿಸಿದ್ದರು. ಹರಿದ್ವಾರದಲ್ಲಿ ಅಂತಿಮ ಸಂಸ್ಕಾರ ನಡೆದಿತ್ತು. ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಕೂಡ ವಿಭೂತಿ ಅವರ ಶವಪೆಟ್ಟಿಗೆಯ ಮೆರವಣಿಗೆ ವೇಳೆ ಅದಕ್ಕೆ ಹೆಗಲು ನೀಡಿದ್ದರು.
-
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications