Winter Session Day 1 Roundup; ಮೊದಲ ದಿನದ ಕಲಾಪದ ಮುಖ್ಯಾಂಶ
ನವದೆಹಲಿ, ನವೆಂಬರ್ 29; ಲೋಕಸಭೆಯ ಚಳಿಗಾಲದ ಮೊದಲ ದಿನದ ಅಧಿವೇಶ ಹಲವು ಕುತೂಹಕ್ಕೆ ಕಾರಣವಾಗಿತ್ತು. ಗದ್ದಲ, ಗಲಾಟೆಯ ನಡುವೆಯೇ ಸಂಸತ್ತಿನ ಮೊದಲ ದಿನದ ಕಲಾಪವನ್ನು ಮುಂದೂಡಲಾಯಿತು.
ಪ್ರತಿಪಕ್ಷಗಳ ಘೋಷಣೆಗಳ ನಡುವೆಯೇ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಯನ್ನು ಲೋಕಸಭೆ ಸೋಮವಾರ ಅಂಗೀಕರಿಸಿತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷದ ಹಲವಾರು ಸಂಸದರು ಚರ್ಚೆಯಿಲ್ಲದೆ ಮಸೂದೆಯನ್ನು ಅಂಗೀಕರಿಸಿರುವುದನ್ನು ಟೀಕಿಸಿದರು. ನಂತರ ರಾಜ್ಯಸಭೆಯಲ್ಲೂ ಮಸೂದೆ ಅಂಗೀಕಾರವಾಯಿತು.
"ಇತ್ತೀಚಿನ ಉಪಚುನಾವಣೆಗಳ ಫಲಿತಾಂಶಗಳನ್ನು ಪರಿಶೀಲಿಸಿದ ನಂತರ 5 ರಾಜ್ಯಗಳಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಮೂರು ಕೃಷಿ ಕಾನೂನುಗಳನ್ನು ಹಿಂಪಡೆದಿದೆ' ಎಂದು ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಈ ಕಾನೂನುಗಳ ವಿರುದ್ಧ ಆಂದೋಲನದ ಸಂದರ್ಭದಲ್ಲಿ ಒಂದು ವರ್ಷದಲ್ಲಿ 700 ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ ಬಗ್ಗೆಯೂ ವಿಷಯವನ್ನು ಪ್ರಸ್ತಾಪಿಸಿದರು.

ಸೋಮವಾರ ಮೊದಲ ದಿನದ ಕಲಾಪದಲ್ಲಿಯೇ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಯನ್ನು ಮಂಡಿಸಿ, ಅಂಗೀಕಾರ ಪಡೆಯಲಾಯಿತು. ಸಂಸತ್ ಸದಸ್ಯರು ಕೈಗಳನ್ನು ಎತ್ತಿ ಮಸೂದೆ ಅಂಗೀಕಾರ ನೀಡಲು ಒಪ್ಪಿಗೆ ಕೊಟ್ಟರು. ಈ ಮೂಲಕ ರೈತರು ಒಂದು ವರ್ಷದಿಂದ ಕಾನೂನುಗಳನ್ನು ವಿರೋಧಿಸಿ ನಡೆಸುತ್ತಿದ್ದ ಪ್ರತಿಭಟನೆಗೆ ಜಯ ಸಿಕ್ಕಿತು.
ಲೋಕಸಭೆಯುಲ್ಲಿ ಮಸೂದೆ ಮಂಡನೆ ಮಾಡಿದ ಕೆಲವೇ ನಿಮಿಷಗಳಲ್ಲಿ ಕಾನೂನುಗಳ ರದ್ದತಿ ಮಸೂದೆ 2021ಕ್ಕೆ ಅಂಗೀಕಾರ ದೊರೆಯಿತು. ರಾಜ್ಯಸಭೆಯು ಮಧ್ಯಾಹ್ನ ಸಭೆ ಸೇರಿದ ತಕ್ಷಣ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್ ಮಸೂದೆ ಮಂಡಿಸಿದರು. ಕಾಂಗ್ರೆಸ್ ಮತ್ತು ಟಿಎಂಸಿ ಸದಸ್ಯರ ಪ್ರತಿಭಟನೆಯ ನಡುವೆ ಸದನವು ಧ್ವನಿ ಮತದೊಂದಿಗೆ ಮಸೂದೆಗೆ ಅಂಗೀಕಾರ ನೀಡಿತು.
ಕಾಂಗ್ರೆಸ್ ಸದಸ್ಯ ರಾಹುಲ್ ಗಾಂಧಿ ಸಂಸತ್ ಹೊರಗೆ ಮಾತನಾಡಿ, "ಈ ಹಿಂದೆ ಸರ್ಕಾರವು ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಎಂದು ನಾವು ಹೇಳಿದ್ದೆವು ಮತ್ತು ಇಂದು ಈ ಕಾನೂನುಗಳನ್ನು ರದ್ದುಗೊಳಿಸಲಾಗಿದೆ. ಇದು ದುರದೃಷ್ಟಕರವಾಗಿದೆ. ಚರ್ಚೆ ನಡೆಸದೆ ಕಾನೂನು ರದ್ದುಗೊಳಿಸಲಾಗಿದೆ, ಈ ಸರ್ಕಾರ ಚರ್ಚೆ ನಡೆಸಲು ಹೆದರುತ್ತಿದೆ" ಎಂದು ಹೇಳಿದರು.
ಶಶಿ ತರೂರ್ ಟ್ವೀಟ್ ವಿವಾದ; ಕಾಂಗ್ರೆಸ್ ಸಂಸದ ಶಶಿ ತರೂರ್ ಮಾಡಿದ ಒಂದು ಟ್ವೀಟ್ ವಿವಾದಕ್ಕೆ ಕಾರಣವಾಯಿತು. ಕೆಲಸ ಮಾಡಲು ಸಂಸತ್ ಆಕರ್ಷಕ ಸ್ಥಳವಲ್ಲ ಎಂದು ಹೇಳಿದವರು ಯಾರು?, ಸಂಸತ್ ಭವನದಲ್ಲಿ 6 ಮಂದಿ ಮಹಿಳಾ ಸದಸ್ಯರ ಜೊತೆ ಬೆಳಗ್ಗೆ ತೆಗೆಸಿಕೊಂಡ ಚಿತ್ರವಿದು" ಎಂದು ಅವರು ಟ್ವೀಟ್ ಮಾಡಿದ್ದರು.
ಈ ಸೆಲ್ಫಿ ವಿವಾದಕ್ಕೆ ಕಾರಣವಾಗಿತ್ತು ಬಳಿಕ ಮತ್ತೊಂದು ಟ್ವೀಟ್ ಮಾಡಿದ್ದ ಅವರು, "ಈ ಸೆಲ್ಫಿ ನಡೆದಿದ್ದು ಒಂದೊಳ್ಳೆ ಭಾವನೆಯಲ್ಲಿ. ಅದೂ ಮಹಿಳಾ ಸಂಸದರ ಇಚ್ಛೆಯೊಂದಿಗೆ. ಅವರ ಹೇಳಿದಂತೆಯೇ ನಾನು ಫೋಟೋವನ್ನು ಟ್ವಿಟರ್ಗೆ ಹಾಕಿದೆ. ಇದರಿಂದ ಕೆಲ ಮಂದಿ ಮನನೊಂದಿದ್ದಾರೆ. ಅದಕ್ಕಾಗಿ ಕ್ಷಮೆ ಕೋರುತ್ತೇನೆ. ನಮ್ಮ ಕೆಲಸದ ಸ್ಥಳ ಸೌಹಾರ್ದದಿಂದ ಕೂಡಿದೆ ಎಂಬುದನ್ನು ಬಿಂಬಿಸುವ ಚಿತ್ರದಲ್ಲಿ ನಾನೂ ಸೇರಿದ್ದಕ್ಕೆ ನನಗೆ ಖುಷಿಯಿದೆ ಅಷ್ಟೇ" ಎಂದು ಶಶಿ ತರೂರ್ ಹೇಳಿದ್ದಾರೆ.
12 ಸಂಸತ್ ಸದಸ್ಯರು ಅಮಾನತು; ರಾಜ್ಯಸಭೆಯಲ್ಲಿ ಮೊದಲ ದಿನದ ಕಲಾಪದಲ್ಲಿಯೇ ಗದ್ದಲ ಎಬ್ಬಿಸಿದ 12 ಸಂಸತ್ ಸದಸ್ಯರನ್ನು ಅಮಾನತು ಮಾಡಲಾಗಿದೆ.












Click it and Unblock the Notifications