Cyclone Dana: ಡಾನಾ ಚಂಡಮಾರುತ ಅಬ್ಬರ; 10 ಲಕ್ಷ ಮಂದಿ ಸ್ಥಳಾಂತರ
ಗುರುವಾರ ರಾತ್ರಿ ವೇಳೆಗೆ ಡಾನಾ ಚಂಡಮಾರುತ ಒಡಿಶಾದ ಭಿತಾರ್ಕಾನಿಕಾ ಮತ್ತು ಧಮ್ರಾ ಅಪ್ಪಳಿಸಲಿದ್ದು, ಮುಂಜಾಗ್ರತಾ ಕ್ರಮವಾಗಿ ಈಗಾಗಲೇ 4 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ತ್ವರಿತವಾಗಿ ಸ್ಥಳಾಂತರ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದು ಜೀವ ಹಾನಿಯಾಗದಂತೆ ನೋಡಿಕೊಳ್ಳಲು ಎಲ್ಲಾ ಎಚ್ಚರಿಕೆ ವಹಿಸಲಾಗುತ್ತಿದೆ.
ಎಂತಹುದೇ ಪರಿಸ್ಥಿತಿ ಬಂದರೂ ಅದನ್ನು ಎದುರಿಸಲು ರಾಜ್ಯ ಸರ್ಕಾರ ಸಿದ್ಧವಾಗಿದ್ದು, ಜನರು ಯಾವುದೇ ಕಾರಣಕ್ಕೂ ಭಯಪಡಬಾರದು ಎಂದು ಮುಖ್ಯಮಂತ್ರು ಮೋಹನ್ ಚರಣ್ ಮಾಝಿ ಮನವಿ ಮಾಡಿದ್ದಾರೆ. ನಿಮ್ಮ ಸುರಕ್ಷತೆ ನಮ್ಮ ಆದ್ಯತೆ, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುತ್ತಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ರಾಜ್ಯದ 14 ಜಿಲ್ಲೆಗಳಲ್ಲಿ ಸುಮಾರು 3,000 ಕ್ಕೂ ಹೆಚ್ಚು ಹಳ್ಳಿಗಳನ್ನು ಗುರುತಿಸಲಾಗಿದೆ. ಈ ಸ್ಥಳಗಳಲ್ಲಿ ಹೆಚ್ಚಿನ ಹಾನಿಯುಂಟಾಗುವ ಸಾಧ್ಯತೆ ಇದೆ. ಮೊದಲನೆಯದಾಗಿ ಕರಾವಳಿ ಭಾಗದಲ್ಲಿ ಚಂಡಮಾರು ಅಪ್ಪಳಿಸುವ ಕಾರಣ, ಅಲ್ಲಿನ ಜನರನ್ನು ಸ್ಥಳಾಂತರ ಮಾಡಲಾಗುತ್ತಿದೆ. ಚಂಡಮಾರುತ ಅಪ್ಪಳಿಸುವ ಮುನ್ನ ಸುಮಾರು 10,60,336 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುವ ಸಾಧ್ಯತೆ ಇದೆ ಎಂದು ಒಡಿಶಾ ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಸುರೇಶ್ ಪೂಜಾರಿ ಹೇಳಿದ್ದಾರೆ.
ಈ ಜಿಲ್ಲೆಗಳಿಗೆ ಹೆಚ್ಚು ಹಾನಿ ಸಾಧ್ಯತೆ
ಜಗತ್ಸಿಂಗ್ಪುರ್, ಕೇಂದ್ರಪಾರಾ, ಭದ್ರಕ್ ಮತ್ತು ಬಾಲಸೋರ್ ಜಿಲ್ಲೆಗಳಲ್ಲಿ ಚಂಡಮಾರುತದ ಪ್ರಭಾವ ತೀವ್ರವಾಗಿರಲಿದೆ ಎಂದು ಹೇಳಲಾಗಿದೆ. ಗಂಟೆಗೆ 100-120 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಗುರುವಾರ ಮತ್ತು ಶುಕ್ರವಾರ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಪರಿಸ್ಥಿತಿಯನ್ನು ಅವಲೋಕಿಸಲು ಒಡಿಶಾ ಸರ್ಕಾರ ತಂಡಗಳನ್ನು ರಚನೆ ಮಾಡಿದೆ. ಹಿರಿಯ ಐಎಎಸ್ ಅಧಿಕಾರಿಗಳು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ಒಂಬತ್ತು ಜಿಲ್ಲೆಗಳಲ್ಲಿ ಪರಿಹಾರ ಮತ್ತು ರಕ್ಷಣಾ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಒಂಬತ್ತು ಸಚಿವರಿಗೆ ಜವಾಬ್ದಾರಿ ವಹಿಸಲಾಗಿದೆ.
ಚಂಡಮಾರುತ ಪರಿಣಾಮ ಸುಂದರಬನ್ಸ್ ನಂತರದ ಎರಡನೇ ಅತಿದೊಡ್ಡ ಮ್ಯಾಂಗ್ರೋವ್ ಪರಿಸರ ವ್ಯವಸ್ಥೆಯಾದ ಭಿತರ್ಕನಿಕಾ ಸಮೀಪವಿರುವ ರಾಜನಗರ ಮ್ಯಾಂಗ್ರೋವ್ ವನ್ಯಜೀವಿ ವಿಭಾಗದ ಡಿಎಫ್ಒ ಸುದರ್ಶನ್ ಗೋಪಿನಾಥ್ ಜಾಧವ್ ಮಾತನಾಡಿ, ನೀರಿನ ಮಟ್ಟ ಹೆಚ್ಚಾದರೆ, ಮೊಸಳೆಗಳು ಜನವಸತಿ ಪ್ರದೇಶಗಳಿಗೆ ಹೋಗುವ ಸಾಧ್ಯತೆ ಇದ್ದು, ಜನವಸತಿಯಲ್ಲಿ ಹಾವುಗಳು, ಮೊಸಳೆಗಳ ರಕ್ಷಣೆ ಮಾಡಲು ಏಳು ಜನರನ್ನು ಹೊಂದಿರುವ ಎರಡು ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ.
ಭಾರಿ ಮಳೆಯ ಕಾರಣ ಗುರುವಾರ ಮತ್ತು ಶುಕ್ರವಾರ ಹೈಕೋರ್ಟ್ ಕೂಡ ಮುಚ್ಚಲಾಗಿದ್ದು, ನವೆಂಬರ್ 30 ಮತ್ತು ಡಿಸೆಂಬರ್ 7 ರಂದು ಕೆಲಸ ಮಾಡುವುದಾಗಿ ಘೋಷಿಸಿದೆ. ಅಕ್ಟೋಬರ್ 27ರಂದು ನಡೆಯಬೇಕಿದ್ದ ಒಡಿಶಾ ನಾಗರಿಕ ಸೇವಾ ಪರೀಕ್ಷೆಯ ಪೂರ್ವಭಾವಿ ಪರೀಕ್ಷೆಯನ್ನು ಕೂಡ ಮುಂದೂಡಲಾಗಿದೆ.












Click it and Unblock the Notifications