ದಿಲ್ಲಿಗೆ ಮರಳಿದ ಮೋದಿ, ಸಂಪುಟ ರಚನೆ ಕಸರತ್ತು ಜೋರು
ನವದೆಹಲಿ, ಮೇ 23- ಅತ್ತ ಗುಜರಾತಿನಲ್ಲಿ ಆನಂದಿಬೆನ್ ಪಟೇಲ್ ಅವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಪ್ರತಿಷ್ಠಾಪಿಸಿ, ಗುಜರಾತಿಗೆ ಗುಡ್ ಬೈ ಹೇಳಿದ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರ ರಾಜಧಾನಿಗೆ ವಾಪಸಾಗಿದ್ದಾರೆ.
ದೆಹಲಿಗೆ ಮರಳುತ್ತಿದ್ದಂತೆ ಪ್ರಧಾನಿ ಕಚೇರಿ ತಲುಪಿಕೊಂಡ ಮೋದಿ, D-day ಸೋಮವಾರಕ್ಕೆ ತಯಾರಿ ನಡೆಸಿದ್ದಾರೆ. ಮುಖ್ಯವಾಗಿ ಸಂಪುಟ ರಚನೆ ಕಾರ್ಯವನ್ನು ಸುಸೂತ್ರವಾಗಿ ಪೂರ್ಣಗೊಳಿಸುವ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ ಎಂದು ತಿಳಿದುಬಂದಿದೆ. ಜತೆಗೆ, ಸೋಮವಾರ ತಾವು ಪ್ರಮಾಣ ವಚನ ಸ್ವೀಕಾರಕ್ಕೆ ಯಾರೆಲ್ಲಾ ಸಾಕ್ಷೀಭೂತರಾಗಬೇಕು ಎಂಬುದರ ಬಗ್ಗೆಯೂ ನರೇಂದ್ರ ಮೋದಿ ಅವರು ಪ್ರಧಾನಿ ಕಚೇರಿಯ ಜತೆ ಮಾತುಕತೆಯಲ್ಲಿ ತೊಡಗಿದ್ದಾರೆ.

ಈ ಮಧ್ಯೆ, ಅರುಣ್ ಜೇಟ್ಲಿ ಅವರಿಗೆ ಹಣಕಾಸು ಖಾತೆ, ರಾಜನಾಥ್ ಸಿಂಗ್ ಅವರಿಗೆ ಗೃಹ ಖಾತೆ, ಸುಷ್ಮಾಗೆ ರಕ್ಷಣೆ ಅಥವಾ ವಿದೇಶಾಂಗ ಖಾತೆ ಹೊಣೆ ವಹಿಸುವ ಸಾಧ್ಯತೆಯಿದೆ. ಇನ್ನು, ವಿಕೆ ಸಿಂಗ್ ಅವರಿಗೆ ರಕ್ಷಣಾ ಖಾತೆ ರಾಜ್ಯ ಸಚಿವ, ಮುರಳಿ ಮನೋಹರ ಜೋಶಿಗೆ ಸ್ಪೀಕರ್ ಸ್ಥಾನವನ್ನು, ಎಲ್ ಕೆ ಅಡ್ವಾಣಿ ಅವರಿಗೆ ಎನ್ಡಿಎ ಅಧ್ಯಕ್ಷ ಸ್ಥಾನವನ್ನೂ ನೀಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹಾಗೆಯೇ, ಮಿತ್ರ ಕೂಟದ ರಾಮವಿಲಾಸ ಪಾಸ್ವಾನ್ ಅವರನ್ನು ಆರೋಗ್ಯ ಅಥವಾ ಕೃಷಿ ಸಚಿವರನ್ನಾಗಿ ನೇಮಿಸುವ ಸಾಧ್ಯತೆಯಿದೆ. ಇದಾದ ಬಳಿಕ ಜುಲೈ ಮೊದಲ ವಾರದಲ್ಲಿ ಪ್ರಧಾನಿ ಮೋದಿ ಅವರು ಪೂರ್ಣ ಪ್ರಮಾಣದ ಬಜೆಟ್ ಮಂಡಿಸುವ ಅಂದಾಜಿದೆ.













Click it and Unblock the Notifications