ಜನಸಂಖ್ಯಾ ನಿಯಂತ್ರಣ ಮಸೂದೆ ಮಂಡಿಸಲಿದ್ದೇನೆ: ಸಂಸದ ರವಿ ಕಿಶನ್
ನವದೆಹಲಿ,ಜುಲೈ.23: ಲೋಕಸಭೆಯಲ್ಲಿ ಜನಸಂಖ್ಯೆ ನಿಯಂತ್ರಣ ಕುರಿತ ಖಾಸಗಿ ಮಸೂದೆಯನ್ನು ಮಂಡಿಸಲಿದ್ದೇನೆ ಎಂದು ನಟ ಹಾಗೂ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ರವಿ ಕಿಶನ್ ಹೇಳಿದ್ದಾರೆ.
ಜನಸಂಖ್ಯೆ ನಿಯಂತ್ರಣ ಮಸೂದೆಯನ್ನು ತಂದಾಗ ಮಾತ್ರ ನಾವು ವಿಶ್ವ ಗುರುವಾಗಲು ಸಾಧ್ಯ. ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತರುವುದು ಬಹಳ ಮುಖ್ಯ . ಜನಸಂಖ್ಯೆ ಏರುತ್ತಿದ್ದು, ನಾವು ಜನಸಂಖ್ಯಾ ಸ್ಫೋಟದ ಕಡೆಗೆ ಹೋಗುತ್ತಿದ್ದೇವೆ. ನಾನು ಮಸೂದೆಯನ್ನು ಮಂಡಿಸಲು ಮತ್ತು ಅದನ್ನು ತರಲು ಅವಕಾಶ ನೀಡಬೇಕೆಂದು ನಾನು ವಿರೋಧ ಪಕ್ಷವನ್ನು ವಿನಂತಿಸುತ್ತೇನೆ ಎಂದು ರವಿ ಕಿಶನ್ ತಿಳಿಸಿದರು.
ಖಾಸಗಿ ಸದಸ್ಯರ ಮಸೂದೆಯನ್ನು ಸಚಿವರಲ್ಲದೆ ಸಂಸದರು ಮಂಡಿಸುತ್ತಾರೆ. ಆದರೆ ಸರ್ಕಾರದ ಬೆಂಬಲವಿಲ್ಲದೆ ಮಸೂದೆ ಕಾನೂನಾಗುವ ಸಾಧ್ಯತೆ ಕಡಿಮೆ. 1970 ರಿಂದ ಯಾವುದೇ ಖಾಸಗಿ ಸದಸ್ಯರ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಗಿಲ್ಲ. ಮುಂದಿನ ವರ್ಷದ ವೇಳೆಗೆ ಭಾರತವು ಚೀನಾವನ್ನು ಮೀರಿಸಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಹೊರಹೊಮ್ಮಬಹುದು ಎಂದು ವಿಶ್ವಸಂಸ್ಥೆಯು ಅಂದಾಜು ಮಾಡಿದ ಮರುದಿನ ಜನಸಂಖ್ಯೆ ನಿಯಂತ್ರಣದ ಮಸೂದೆ ಬಗ್ಗೆ ಧ್ವನಿ ಕೇಳಿಬಂದಿದೆ.
ಸರ್ಕಾರಿ ಉದ್ಯೋಗ, ಸೌಲಭ್ಯ ಸಿಗಲ್ಲ
ಪ್ರಸ್ತಾವಿತ ಮಸೂದೆಯು ದಂಪತಿ ಎರಡಕ್ಕಿಂತ ಹೆಚ್ಚು ಮಕ್ಕಳಿಗೆ ಜನ್ಮ ನೀಡುವುದನ್ನು ತಡೆಯುವ ಗುರಿಯನ್ನು ಹೊಂದಿದೆ. ಎರಡಕ್ಕಿಂತ ಹೆಚ್ಚು ಮಕ್ಕಳ ಪಾಲಿಸಿಯನ್ನು ಹೊಂದಿರುವ ದಂಪತಿ ಸರ್ಕಾರಿ ಉದ್ಯೋಗಗಳು ಮತ್ತು ಸರ್ಕಾರವು ಒದಗಿಸುವ ವಿವಿಧ ಸೌಲಭ್ಯಗಳಿಗೆ ಅನರ್ಹರಾಗುತ್ತಾರೆ ಎಂದು ಅದು ಹೇಳುತ್ತದೆ. ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಸೇರಿದಂತೆ ಹಲವು ಬಿಜೆಪಿ ನಾಯಕರು ಭಾರತದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ತಡೆಯಲು ಕಾನೂನುಗಳನ್ನು ತರಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದಾಗ್ಯೂ, ಕೇಂದ್ರ ಆರೋಗ್ಯ ಸಚಿವಾಲಯವು ಈ ವಾರದ ಆರಂಭದಲ್ಲಿ ಅಂತಹ ಯಾವುದೇ ಪ್ರಸ್ತಾಪವನ್ನು ಪರಿಗಣಿಸುತ್ತಿಲ್ಲ ಎಂದು ಹೇಳಿದೆ.
ಕಲಾಪ ನಡೆಸಲು ಸಾಧ್ಯವಾದರೆ ಅವಕಾಶ
ಉತ್ತರ ಪ್ರದೇಶದ ಗೋರಖ್ಪುರ ಕ್ಷೇತ್ರದ ಸಂಸದರಾಗಿರುವ ಕಿಶನ್ ಅವರಿಗೆ ನಾಲ್ವರು ಮಕ್ಕಳಿದ್ದಾರೆ. ಅವರಲ್ಲಿ ಮೂವರು ಪುತ್ರಿಯರು ಮತ್ತು ಒಬ್ಬ ಪುತ್ರ ಇದ್ದಾರೆ. ಸಂಸತ್ತಿನ ಈ ವರ್ಷದ ಮುಂಗಾರು ಅಧಿವೇಶನದ ಆರಂಭದಿಂದ ನಿರಂತರವಾಗಿ ಮುಂದೂಡಲ್ಪಟ್ಟ ಲೋಕಸಭೆ ಕಲಾಪವನ್ನು ನಡೆಸಲು ಸಾಧ್ಯವಾದರೆ ಮಾತ್ರ ರವಿ ಕಿಶನ್ ಅವರ ಖಾಸಗಿ ಸದಸ್ಯರ ಮಸೂದೆಯನ್ನು ಮಂಡಿಸಲು ಅವಕಾಶ ಸಿಗಲಿದೆ. ಪ್ರತಿಪಕ್ಷಗಳು ದಿನಬಳಕೆಯ ಕೆಲವು ವಸ್ತುಗಳ ಮೇಲೆ ವಿಧಿಸಿರುವ ಹಣದುಬ್ಬರ ಮತ್ತು ಜಿಎಸ್ಟಿ ಕುರಿತು ಚರ್ಚೆಗೆ ಒತ್ತಾಯಿಸುತ್ತಿವೆ.
2 ಮಕ್ಕಳಿಗೆ ಇಳಿಕೆ ಕಂಡ ಫಲವತ್ತತೆ ದರ
ವಿಶ್ವಸಂಸ್ಥೆಯ ಇತ್ತೀಚಿನ ವರದಿಯ ಪ್ರಕಾರ ಮುಂದಿನ ವರ್ಷ ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಹೊರಹೊಮ್ಮಲಿದೆ ಎಂದು ಅಂದಾಜಿಸಲಾಗಿದೆ. ವರ್ಲ್ಡ್ ಪಾಪ್ಯುಲೇಶನ್ ಪ್ರಾಸ್ಪೆಕ್ಟ್ಸ್ 2022 ಸಹ ಭಾರತದ ಒಟ್ಟು ಫಲವತ್ತತೆ ದರವು (ಟಿಎಫ್ಆರ್) 1950ರಲ್ಲಿ ಪ್ರತಿ ಮಹಿಳೆಗೆ 5 ಮಕ್ಕಳಿಂದ 2020ರಲ್ಲಿ 2 ಮಕ್ಕಳಿಗೆ ಇಳಿದಿದೆ ಎಂದು ಎತ್ತಿ ತೋರಿಸಿದೆ.
ಶೇಕಡಾ 56.5ಕ್ಕೆ ಗರ್ಭನಿರೋಧಕ ಬಳಕೆ ಏರಿಕೆ
ಆರೋಗ್ಯ ರಾಜ್ಯ ಸಚಿವ ಭಾರತಿ ಪ್ರವೀಣ್ ಪವಾರ್ ಅವರು, 2045ರ ವೇಳೆಗೆ ಜನಸಂಖ್ಯೆಯನ್ನು ಸ್ಥಿರಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಜನಸಂಖ್ಯೆಯ ಬೆಳವಣಿಗೆಯನ್ನು ನಿಯಂತ್ರಿಸುವಲ್ಲಿ ಅದರ ಪ್ರಯತ್ನಗಳು ಯಶಸ್ವಿಯಾಗಿದೆ. ಎನ್ಎಫ್ಎಚ್ಎಸ್ 5ರ ಪ್ರಕಾರ, ಆಧುನಿಕ ಗರ್ಭನಿರೋಧಕ ಬಳಕೆಯು ಶೇಕಡಾ 56.5ಕ್ಕೆ ಹೆಚ್ಚಿದೆ. ಕುಟುಂಬ ಯೋಜನೆಯ ಅಗತ್ಯತೆ ಕೇವಲ 9.4 ಶೇಕಡಾ ಮಾತ್ರವೇ ಆಗಿದೆ. ಜನಗಣತಿಯ ಮಾದರಿ ನೋಂದಣಿ ವ್ಯವಸ್ಥೆಯ ಪ್ರಕಾರ, ಕಚ್ಚಾ ಜನನ ದರ (ಸಿಬಿಆರ್) 2019ರಲ್ಲಿ 1,000 ಜನರಿಗೆ 19.7ಕ್ಕೆ ಇಳಿದಿದೆ ಎಂದು ಅವರು ಹೇಳಿದರು.
ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 18 ರಂದು ಪ್ರಾರಂಭವಾಯಿತು ಮತ್ತು ಆಗಸ್ಟ್ 12 ರವರೆಗೆ ಮುಂದುವರಿಯುತ್ತದೆ.