ಮೋದಿ ಪಟ್ಟಾಭಿಷೇಕ: ಭದ್ರತೆ ಭಾರಿ ಭಾರಿಯಾಗಿದೆ
ನವದೆಹಲಿ, ಮೇ 23-ಸ್ವಾತಂತ್ರ್ಯಾನಂತರ ಹುಟ್ಟಿದ ಮೊದಲ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಇನ್ನೇನು ಮೂರು ದಿನಗಳಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮಧ್ಯೆ, D-day ಸೋಮವಾರಕ್ಕೆ ರಾಷ್ಟ್ರಪತಿ ಭವನದ ಮುಂದಿನ ಅಂಗಳ (fore court) ಶೃಂಗಾರಗೊಳ್ಳುತ್ತಿದೆ.
ಇದೇ ವೇಳೆ ದೆಹಲಿಯ ರಾಷ್ಟ್ರಪತಿ ಭವನದ ಸುತ್ತಮುತ್ತ ಅಭೂತಪೂರ್ವ ಭದ್ರತಾ ಏರ್ಪಾಡುಗಳನ್ನು ಮಾಡಲಾಗುತ್ತಿದೆ. ಈ ಭಾಗದಲ್ಲಿ ಇಂದಿನಿಂದಲೇ ಭದ್ರತೆ ಹಾಕಲಾಗುತ್ತಿದೆ. ಗಣರಾಜ್ಯೋತ್ಸವದಂದು ಕೈಗೊಳ್ಳಲಾಗುವುದಕ್ಕಿಂತ (Republic Day parade) ತುಸು ಹೆಚ್ಚೇ ಅನ್ನಿಸುವಷ್ಟು ಭದ್ರತೆ ಹಾಕಲಾಗುತ್ತಿದೆ.

ದೇಶದಲ್ಲಿ ಅತ್ಯಂತ ಹೆಚ್ಚು ಭದ್ರತೆಗೊಳಪಟ್ಟಿರುವ ರಾಜಕಾರಣಿಗಳ ಪೈಕಿ ನರೇಂದ್ರ ಮೋದಿ ಸಹ ಒಬ್ಬರು. ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್, ಅಫಘಾನಿಸ್ತಾನದ ಅಧ್ಯಕ್ಷ ಹಮೀದ್ ಖರ್ಜಾಯಿ ಮತ್ತು ಶ್ರೀಲಂಕಾದ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರನ್ನು ಸಮಾರಂಭಕ್ಕೆ ಆಹ್ವಾನಿಸಿದ ಬಳಿಕ ಭದ್ರತೆಯ ಬೆದರಿಕೆ ಹೆಚ್ಚಾಗಿದೆ.
ರಾಷ್ಟ್ರಪತಿ ಭವನದ ಸುತ್ತಮುತ್ತ ಮೂರು ಹಂತದ ಭದ್ರತೆ ಹಾಕಲಾಗುತ್ತಿದೆ. ಸುತ್ತಮುತ್ತಲ ರಸ್ತೆಗಳ ಮೇಲೆ ಭದ್ರತಾ ಸಿಬ್ಬಂದಿ ಇಂದಿನಿಂದಲೇ ಹದ್ದಿನಕಣ್ಣಿಟ್ಟಿದ್ದಾರೆ. ಸಮಾರಂಭವು ಸೋಮವಾರ ಸಂಜೆ 6 ಗಂಟೆಗೆ ಆರಂಭವಾಗಲಿದ್ದು, ಮಧ್ಯಾಹ್ನದಿಂದಲೇ ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗುವುದು. ಸುತ್ತಮುತ್ತ ಇರುವ ಕಚೇರಿಗಳು ಸೋಮವಾರ ಬಂದ್ ಆಗಲಿವೆ.
ವಾಯುಪಡೆ ಮತ್ತು ಸೇನಾಪಡೆಗಳು ಸಹ ಭದ್ರತೆಗೆ ನಿಯೋಜನೆಗೊಳ್ಳಲಿವೆ. ಆದರೆ ಹೆಚ್ಚಾಗಿ ದಿಲ್ಲಿ ಪೊಲೀಸರೇ ಭದ್ರತೆಯ ಉಸ್ತುವಾರಿ ಜವಾಬ್ದಾರಿ ಹೊರಲಿದ್ದಾರೆ. ಅರೆಸೈನಿಕ ಪಡೆಗಳೂ ಇವರಿಗೆ ಸಾಥ್ ನೀಡಲಿದ್ದಾರೆ. ವಾಯು ದಾಳಿಗೆ ಪ್ರತ್ಯುತ್ತರ ನೀಡಲು ಆಯಕಟ್ಟಿನ ಸ್ಥಳಗಳಲ್ಲಿ ವಾಯುಪಡೆ ಸನ್ನದ್ಧವಾಗಲಿದೆ.













Click it and Unblock the Notifications