'ದ್ರಾವಿಡ' ವಿವಾದ; ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಿ ಎಂದ ತಮಿಳುನಾಡು ಸಿಎಂ ಸ್ಟಾಲಿನ್
ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲ ಆರ್.ಎನ್. ರವಿ ನಡುವೆ ಆಗಾಗ್ಗೆ ಏನಾದರೂ ವಿವಾದ ಉಂಟಾಗುತ್ತಲೇ ಇರುತ್ತದೆ. ಈಗ ದ್ರಾವಿಡ ಪದ ಕೈಬಿಟ್ಟದ್ದು ವಿವಾದ ಸೃಷ್ಟಿಸಿದ್ದು, ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಿ ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ. ರಾಜ್ಯಪಾಲ ಆರ್.ಎನ್. ರವಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ತಮಿಳು ಗೀತೆ ಹಾಡುವ ಸಂದರ್ಭದಲ್ಲಿ ದ್ರಾವಿಡ ಸಾಲನ್ನು ಕೈಬಿಟ್ಟ ನಂತರ ಈ ವಿವಾದ ಭುಗಿಲೆದ್ದಿದೆ.
ರಾಜ್ಯಪಾಲ ಆರ್.ಎನ್. ರವಿ ರಾಷ್ಟ್ರೀಯ ಏಕತೆಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದು, ಉದ್ದೇಶಪೂರ್ವಕವಾಗಿಯೇ ದ್ರಾವಿಡ ಪದವನ್ನು ಕೈಬಿಟ್ಟಿದ್ದಾರೆ ಎಂದು ಹೇಳಿದ್ದಾರೆ. ಚೆನ್ನೈನಲ್ಲಿ ನಡೆದ ದೂರದರ್ಶನ ಸುವರ್ಣ ಮಹೋತ್ಸವ ಆಚರಣೆ ಸಂದರ್ಭದಲ್ಲಿ ಹಿಂದಿ ಮಾಸವನ್ನು ಆಚರಿಸುವ ಕೇಂದ್ರ ನಿರ್ಧಾರಕ್ಕೆ ತಮಿಳುನಾಡು ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ ಭಾಷೆಯನ್ನು ಆಚರಿಸುವ ಮೂಲಕ ಇತರೆ ಭಾಷೆಗಳನ್ನು ಕೇಂದ್ರ ಸರ್ಕಾರ ಕೀಳಾಗಿ ಕಾಣುತ್ತಿದೆ ಎಂದು ಸ್ಟಾಲಿನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿ ಸರ್ಕಾರಿ ಕಾರ್ಯಕ್ರಮ ಆರಂಭಿಸುವ ಮುನ್ನ ತಮಿಳು ಗೀತೆಯನ್ನು ಹಾಡಲಾಗುತ್ತದೆ. ತಮಿಳ್ ತಾಯಿ ವಜ್ತು ಗೀತೆಯಲ್ಲಿ ಬರುವ ದ್ರಾವಿಡ ಪದವು ದಕ್ಷಿಣ ರಾಜ್ಯಗಳ ಜನಾಂಗೀಯ ಗುರುತನ್ನು ಸೂಚಿಸುತ್ತದೆ. ದೂರದರ್ಶನ ತಂಡವು ಈ ನಾಡಗೀತೆಯನ್ನು ಹಾಡುವಾಗ ಅದರಲ್ಲಿದ್ದ ದ್ರಾವಿಡ ಪದವಿರುವ ಸಾಲನ್ನು ಕೈಬಿಡಲಾಗಿತ್ತು. ತಾವು ಮಾಡಿದ ತಪ್ಪಿಗೆ ದೂರದರ್ಶನ ಕ್ಷಮೆ ಯಾಚಿಸಿದೆ.
ರಾಜ್ಯಪಾಲರಾಗಲು ಅವರು ಅನರ್ಹ
ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಅಧ್ಯಕ್ಷರೂ ಆಗಿರುವ ತಮಿಳು ನಾಡು ಸ್ಟಾಲಿನ್ ರಾಜ್ಯಪಾಲರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲರ ಹುದ್ದೆಯಲ್ಲಿರುವ ರವಿ ಅನರ್ಹರಾಗಿದ್ದಾರೆ, ರಾಷ್ಟ್ರಗೀತೆಯಲ್ಲಿ ಕೂಡ ದ್ರಾವಿಡ ಪದವಿದ್ದು ಅದನ್ನು ಕೂಡ ಬಿಡುವಂತೆ ಕೇಳುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ತಮಿಳು ಗೀತೆಯಲ್ಲಿ ದ್ರಾವಿಡ ಪದವನ್ನು ಬಿಟ್ಟಿರುವುದು ರಾಜ್ಯದ ಕಾನೂನನ್ನು ಉಲ್ಲಂಘಿಸದಂತೆ. ರಾಜ್ಯಪಾಲರು ಹಿಂದಿಯನ್ನು ಆಚರಿಸುವ ನೆಪದಲ್ಲಿ, ರಾಷ್ಟ್ರೀಯ ಏಕತೆಯನ್ನು ಮತ್ತು ಅನೇಕ ಜನಾಂಗಗಳನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
"ದ್ರಾವಿಡರನ್ನು ಕಂಡರೆ ಅಸಹನೆ ಹೊಂದಿರುವ ರಾಜ್ಯಪಾಲರು, ರಾಷ್ಟ್ರಗೀತೆಯಲ್ಲಿರುವ ದ್ರಾವಿಡ ಪದವನ್ನು ಕೈಬಿಡಲು ಕೇಳುತ್ತಾರೆಯೇ? ಉದ್ದೇಶಪೂರ್ವಕವಾಗಿಯೇ ಅವರು ತಮಿಳುನಾಡು ಮತ್ತು ಇಲ್ಲಿನ ಜನರ ಭಾವನೆಗಳನ್ನು ಅವಮಾನಿಸಿದ್ದು, ಕೇಂದ್ರ ಸರ್ಕಾರ ಕೂಡಲೇ ಅವರನ್ನು ವಾಪಸ್ ಕರೆಸಿಕೊಳ್ಳಬೇಕು" ಎಂದು ಒತ್ತಾಯಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಜ್ಯಪಾಲ ರವಿ, ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂದು ಹೇಳಿದ್ದಾರೆ. "ಗೌರವಾನ್ವಿತ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ನನ್ನ ವಿರುದ್ಧ ಜನಾಂಗೀಯ ನಿಂದನೆ ಆರೋಪದ ಟ್ವೀಟ್ ಮಾಡಿದ್ದಾರೆ. ತಮಿಳ್ ತಾಯಿ ವಾಜತ್ತುಗೆ ಅಗೌರವ ತೋರುತ್ತಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ನಾನು ಪೂರ್ಣ ತಮಿಜ್ ತಾಯಿ ವಾಜ್ತುವನ್ನು ಪಠಿಸುತ್ತೇನೆ ಎಂದು ಅವರಿಗೆ ಚೆನ್ನಾಗಿ ತಿಳಿದಿದೆ. ಪ್ರತಿ ಕಾರ್ಯವನ್ನು ಗೌರವದಿಂದ, ಹೆಮ್ಮೆ ಮತ್ತು ನಿಖರತೆಯಿಂದ ಮಾಡಿ," ಪೋಸ್ಟ್ ಹಂಚಿಕೊಂಡಿದ್ದಾರೆ.












Click it and Unblock the Notifications