Mallikarjun Kharge speech: ಸುಳ್ಳು, ವಂಚನೆಯ ರಾಜಕಾರಣವನ್ನು ದೇಶ ನೋಡುತ್ತಿದೆ: ಖರ್ಗೆ
ನವದೆಹಲಿ, ಅಕ್ಟೋಬರ್ 26: ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅಧಿಕಾರ ಬುಧವಾರ ಅಧಿಕಾರ ಸ್ವೀಕರಿಸಿದರು. ಕಾಂಗ್ರೆಸ್ನ ನಿರ್ಗಮಿತ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಖರ್ಗೆ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು ನಿರ್ಗಮಿತ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಧನ್ಯವಾದ ತಿಳಿಸಿದರು.
'ಪಕ್ಷದ ಹುದ್ದೆಗಳಲ್ಲಿ ಶೇ 50ರಷ್ಟು ಮೀಸಲಾತಿಯನ್ನು 50ಕ್ಕಿಂತ ಕಡಿಮೆ ವಯಸ್ಸಿನವರಿಗೆ ನೀಡಲಾಗುವುದು. ರಾಜಸ್ಥಾನದ ಉದಯಪುರದಲ್ಲಿ ನಡೆದ ಚಿಂತನ ಶಿಬಿರದಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಿಮ್ಮೆಲ್ಲರ ಬೆಂಬಲದೊಂದಿಗೆ ನಾವು ಅದನ್ನು ಮುಂದುವರಿಸುತ್ತೇವೆ' ಎಂದು ಖರ್ಗೆ ಹೇಳಿದರು.
ಇದೇ ವೇಳೆ, ನಿರ್ಗಮಿತ ಅಧ್ಯಕ್ಷೆಯನ್ನು ಸ್ಮರಿಸಿದ ಖರ್ಗೆ, ಸೋನಿಯಾ ಅವರು ರೂಢಿಸಿಕೊಂಡಿರುವ ರಾಜಕಾರಣ ಅನುಸರಿಸಲು ಯೋಗ್ಯವಾಗಿದೆ ಎಂದು ಪ್ರತಿಪಾದಿಸಿದರು.

'ಜನವರಿ 15, 1998 ರಂದು ಬೆಂಗಳೂರಿನಲ್ಲಿ ಸೋನಿಯಾ ಗಾಂಧಿ ಅವರು ಮೊದಲ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದರು. ಆ ವೇಳೆ, ತಮ್ಮ ಮೊದಲ ರಾಜಕೀಯ ಪಾಠವನ್ನು ಕರ್ನಾಟಕದಿಂದಲೇ ತೆಗೆದುಕೊಳ್ಳುವುದಾಗಿ ಅವರು ಹೇಳಿದ್ದರು. ಇದು ನನಗೆ ಹೆಮ್ಮೆಯ ವಿಚಾರವಾಗಿತ್ತು. ಸ್ವಹಿತಾಸಕ್ತಿ ಹಾಗೂ ಅಧಿಕಾರಕ್ಕಾಗಿ ಅವರೆಂದೂ ರಾಜಕೀಯ ಮಾಡಲಿಲ್ಲ. ಸೋನಿಯಾ ಅವರು ಮಾಡಿದ ತ್ಯಾಗ ದೊಡ್ಡದು' ಎಂದು ಖರ್ಗೆ ಸ್ಮರಿಸಿದರು.
'ನಮ್ಮ ದೇಶವೀಗ ಸುಳ್ಳು ಮತ್ತು ವಂಚನೆಯ ರಾಜಕಾರಣವನ್ನು ನೋಡುತ್ತಿದೆ. ಭಾರತವನ್ನು ವಿಭಜಿಸಲು ಬಿಜೆಪಿ ಮತ್ತು ಆರ್ಎಸ್ಎಸ್ ಯತ್ನಿಸುತ್ತಿವೆ. ಕಾಂಗ್ರೆಸ್ ಸ್ಥಾಪಿಸಿದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬದಲಾಯಿಸುವ ಅಪಾಯಕಾರಿ ಯೋಚನೆಗಳು ಮುನ್ನೆಲೆಗೆ ಬರುತ್ತಿವೆ. ಆದರೆ, ಕಾಂಗ್ರೆಸ್ನ ಸಿದ್ಧಾಂತವು ಭಾರತದ ಸಂವಿಧಾನವನ್ನು ಆಧರಿಸಿದೆ. ಆ ಸಂವಿಧಾನವನ್ನು ನಾವು ಉಳಿಸಿಕೊಳ್ಳಬೇಕಿದೆ' ಎಂದು ಅವರು ಹೇಳಿದರು.
ನಾನು ಕೆಳ ಹಂತದ ಕಾಂಗ್ರೆಸ್ ಕಾರ್ಯಕರ್ತನಾಗಿ ಬೆಳೆದು ಬಂದಿದ್ದೇನೆ. ಕೂಲಿಕಾರನ ಮಗನಾದ ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿದ್ದಕ್ಕೆ ನಿಮ್ಮೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸಾಗುತ್ತಿರುವ ರಾಹುಲ್ ಗಾಂಧಿ ಅವರ 'ಭಾರತ್ ಜೋಡೊ ಯಾತ್ರೆ' ಒಂದು ಐತಿಹಾಸಿಕ ನಡೆ ಎಂದು ಖರ್ಗೆ ಬಣ್ಣಿಸಿದರು.
ರಾಹುಲ್ ಗಾಂಧಿ ಅವರು ನೇರವಾಗಿ ಜನರೊಂದಿಗೆ ಮಾತನಾಡುತ್ತಿದ್ದಾರೆ. ಭಾರತವನ್ನು ಜೋಡಿಸಲು ಬಯಸುವ ಜನರನ್ನು ಒಟ್ಟುಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಕೋಮುವಾದದ ಆಧಾರದ ಮೇಲೆ ವಿಂಗಡಿಸಲಾಗಿರುವ ದೇಶವನ್ನು ಮತ್ತೆ ಒಂದಾಗಿಸುತ್ತಿದ್ದಾರೆ. ಈ ಕಾರ್ಯಸೂಚಿಯನ್ನು ಮುಂದಕ್ಕೆ ಕೊಂಡೊಯ್ಯುವುದು ನನ್ನ ಕರ್ತವ್ಯ ಎಂದು ಖರ್ಗೆ ನುಡಿದರು.
'ಒಮ್ಮತ ಹಾಗೂ ಸಮಾಲೋಚನೆ' ತಮ್ಮ ನಾಯಕತ್ವದ ತಂತ್ರವೆಂದು ಖರ್ಗೆ ಬಿಂಬಿಸಿದರು.
ಕಾಂಗ್ರೆಸ್ನ ಮುಂದೆ ಹಲವು ಸವಾಲುಗಳಿವೆ. ಅವುಗಳನ್ನು ಎದುರಿಸಲು ಪ್ರತಿ ಕಾರ್ಯಕರ್ತನಿಂದ ಬೆಂಬಲವನ್ನು ಕೇಳ ಬಯಸುತ್ತೇನೆ. ಕಾಂಗ್ರೆಸ್ನ ಹಿಂದಿನ ಅಧ್ಯಕ್ಷರನ್ನು ನೆನಪಿಸಿಕೊಳ್ಳುತ್ತೇನೆ ಎಂದು ಹೇಳಿದರು.
ಅಧಿಕಾರ ಸ್ವೀಕಾರಕ್ಕೂ ಮುನ್ನ ಮಹಾತ್ಮ ಗಾಂಧಿ, ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ ಸ್ಮಾರಕಗಳಿಗೆ ಖರ್ಗೆ ಭೇಟಿ ನೀಡಿದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿವಾಸಕ್ಕೂ ಖರ್ಗೆ ಭೇಟಿ ಕೊಟ್ಟರು.
ಜಗಜೀವನ್ ರಾಮ್ ನಂತರ ಕಾಂಗ್ರೆಸ್ನ ಎರಡನೇ ದಲಿತ ಅಧ್ಯಕ್ಷರೆಂಬ ಖ್ಯಾತಿಗೆ ಮಲ್ಲಿಕಾರ್ಜುನ ಖರ್ಗೆ ಒಳಗಾಗಿದ್ದಾರೆ.
ಖರ್ಗೆ ಅವರ ಅಧಿಕಾರ ಸ್ವೀಕಾರ ಸಮಾರಂಭ ದೆಹಲಿಯ ಎಐಸಿಸಿ ಕಚೇರಿಯಲ್ಲಿ ನಡೆಯಿತು. ಪಕ್ಷದ ಪ್ರಮುಖ ನಾಯಕರಾದ ರಾಹುಲ್ ಗಾಂಧಿ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋಟ್, ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಜೈ ರಾಮ್ ರಮೇಶ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಕಾಂಗ್ರೆಸ್ನ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ ಮಿಸ್ತ್ರಿ ಅವರು ಖರ್ಗೆ ಅವರಿಗೆ ಪ್ರಮಾಣ ಪತ್ರವನ್ನು ಹಸ್ತಾಂತರಿಸಿದರು.












Click it and Unblock the Notifications