Maharashtra Assembly Election 2024: ಎಂವಿಎ ಸೀಟು ಹಂಚಿಕೆಗೆ ಮಹಾವಿಘ್ನ
ಮುಂಬೈ, ಅಕ್ಟೋಬರ್ 19: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ-2024ರ ದಿನಾಂಕ ನಿಗದಿಯಾಗಿದೆ. ಅಕ್ಟೋಬರ್ 22ರಂದು ಚುನಾವಣಾ ಅಧಿಸೂಚನೆ ಹೊರಬೀಳಲಿದೆ. ಆದರೆ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಮಾತುಕತೆಗಳು ಇನ್ನೂ ಯಶಸ್ವಿಯಾಗಿಲ್ಲ. 288 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 20ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ.
ರಾಜ್ಯದಲ್ಲಿ ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳ ಮೈತ್ರಿಕೂಟ ಮಹಾವಿಕಾಸ್ ಅಘಾಡಿ (ಎಂವಿಎ) ಸೀಟು ಹಂಚಿಕೆ ಮಾಡಿಕೊಳ್ಳಲು ಪರದಾಡುತ್ತಿದೆ. ಉದ್ಧವ್ ಠಾಕ್ರೆ ನಿಲುವು ಕಾಂಗ್ರೆಸ್ ಪಕ್ಷಕ್ಕೆ ತಲೆನೋವಾಗಿದೆ. ಸೀಟು ಹಂಚಿಕೆಯಲ್ಲಿ ಯಾರಿಗೆ ಹೆಚ್ಚಿನ ಸ್ಥಾನ? ಎಂಬುದು ಈ ಜಟಾಪಟಿಗೆ ಕಾರಣ.

ಮೈತ್ರಿಕೂಟದ ಸೀಟು ಹಂಚಿಕೆ ಕುರಿತು ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಜೊತೆ ಮಾತುಕತೆ ನಡೆಸಲು ಉದ್ಧವ್ ಠಾಕ್ರೆ ನಿರಾಕರಿಸಿದ್ದಾರೆ. ಆದ್ದರಿಂದ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ ಸೀಟುಗಳ ಹಂಚಿಕೆ ಕಗ್ಗಂಟು ಇನ್ನಷ್ಟು ದಿನ ಮುಂದುವರೆಯಲಿದೆ.
ರಾಜ್ಯ ಉಸ್ತುವಾರಿ ಮುಂಬೈಗೆ: ಮೈತ್ರಿಕೂಟದ ಸೀಟು ಹಂಚಿಕೆ ಕುರಿತು ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಜೊತೆ ಮಾತುಕತೆ ನಡೆಸುವುದಿಲ್ಲ ಎಂದು ಉದ್ಧವ್ ಠಾಕ್ರೆ ಹೈಕಮಾಂಡ್ ನಾಯಕರಿಗೆ ಸಂದೇಶ ರವಾನೆ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಶನಿವಾರ ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿ ರಮೇಶ್ ಚೆನ್ನಿತ್ತಲ ಮುಂಬೈಗೆ ಆಗಮಿಸಿದ್ದು, ಉದ್ಧವ್ ಠಾಕ್ರೆ ಜೊತೆ ಮಾತುಕತೆ ನಡೆಸಲಿದ್ದಾರೆ.
ರಮೇಶ್ ಚೆನ್ನಿತ್ತಲ ಮಾತನಾಡಿ, "ನಾವು ಕೆಲವು ದಿನಗಳಲ್ಲಿ ಸೀಟು ಹಂಚಿಕೆ ಅಂತಿಮಗೊಳಿಸುತ್ತೇವೆ. ಯಾವುದೇ ಸಮಸ್ಯೆ ಇಲ್ಲ. ನಾನು ಉದ್ಧವ್ ಠಾಕ್ರೆ ಭೇಟಿಯಾಗಲಿದ್ದೇನೆ" ಎಂದು ಹೇಳಿದರು.
ಎಂವಿಎ ಮೈತ್ರಿಕೂಟದ ಸೀಟು ಹಂಚಿಕೆ ಕುರಿತು ಶಿವಸೇನೆ (ಉದ್ಧವ್ ಠಾಕ್ರೆ ಬಣ) ಶುಕ್ರವಾರ ಮತ್ತೊಂದು ಸುತ್ತಿನ ಸಭೆ ಸೇರಿತ್ತು. ಆದರೆ ಈ ಸಭೆಗೆ ರಾಜ್ಯದ ಕಾಂಗ್ರೆಸ್ ನಾಯಕರು ಗೈರಾಗಿದ್ದರು. ಇದು ಮೈತ್ರಿಕೂಟದಲ್ಲಿ ಎಲ್ಲವೂ ಸರಿ ಇಲ್ಲ? ಎಂಬ ಸಂದೇಶವನ್ನು ನೀಡುತ್ತಿದೆ.
"ಮೈತ್ರಿಕೂಟದಲ್ಲಿ ಹಲವಾರು ಪಕ್ಷಗಳಿವೆ. ಎಲ್ಲರೂ ಹೆಚ್ಚಿನ ಸೀಟುಗಳು ಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಆದರೆ ಯಾರೂ ಸಹ ಇನ್ನೂ ಒಮ್ಮತಕ್ಕೆ ಬಂದಿಲ್ಲ" ಎಂದು ಶಿವಸೇನೆ (ಉದ್ಧವ್ ಠಾಕ್ರೆ ಬಣ) ಹೇಳಿದ್ದಾರೆ.
ಸೀಟು ಹಂಚಿಕೆ ಕುರಿತು ನಾನಾ ಪಟೋಲೆಯೇ ತೀರ್ಮಾನ ಕೈಗೊಳ್ಳುವುದಾದರೆ ನಾವು ಮಾತುಕತೆಗೆ ಬರುವುದಿಲ್ಲ ಎಂದು ಶಿವಸೇನೆ (ಉದ್ಧವ್ ಠಾಕ್ರೆ ಬಣ) ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಸಂದೇಶ ರವಾನಿಸಿದೆ.
ಮೈತ್ರಿಕೂಟದಲ್ಲಿ ಇರುವುದು ಕೇವಲ ಕಾಂಗ್ರೆಸ್ ಪಕ್ಷವಲ್ಲ. ನಾನಾ ಪಟೋಲೆ ಅವರ ಪ್ರಸ್ತಾವನೆ ಸರಿಯಾಗಿಲ್ಲ. ನಾನು ದೊಡ್ಡ ನಾಯಕ ಎಂದು ಅವರೇ ಎಲ್ಲಾ ತೀರ್ಮಾನ ಮಾಡುವಂತಿಲ್ಲ. ಮೈತ್ರಿಧರ್ಮವನ್ನು ಎಲ್ಲರೂ ಒಪ್ಪಬೇಕು ಎಂದು ಶಿವಸೇನೆ ಹೇಳಿದೆ. ಕಾಂಗ್ರೆಸ್ ಪಕ್ಷದ ಕಡೆಯಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ಕಾಂಗ್ರೆಸ್ ಮತ್ತು ಶಿವಸೇನೆ ನಡುವೆ ಜಟಾಪಟಿಗೆ ಕಾರಣವಾಗಿರುವುದು ವಿದರ್ಭ ಪ್ರಾಂತ್ಯದ ಸೀಟು ಹಂಚಿಕೆ. ಇಲ್ಲಿ ಎರಡೂ ಪಕ್ಷಗಳು ಸಹ ಪ್ರಬಲವಾಗಿವೆ. ಇಬ್ಬರೂ ಸಹ ಹೆಚ್ಚಿನ ಸೀಟುಗಳನ್ನು ಕೇಳುತ್ತಿದ್ದಾರೆ. ಸೀಟು ಹಂಚಿಕೆ ವಿಚಾರದಲ್ಲಿ ಸದಾ ಗೊಂದಲ ಇರುತ್ತದೆ. ನಾನಾ ಪಟೋಲೆ ಮಾತುಕತೆ ನಡೆಸುವ ಶೈಲಿ ಬಗ್ಗೆ ಅವರ ಆಕ್ಷೇಪವಿದೆ. ಅದನ್ನು ಹೈಕಮಾಂಡ್ ಗಮನಕ್ಕೆ ತರಲಾಗಿದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.












Click it and Unblock the Notifications