ಬಿಜೆಪಿ ಮೋದಿಯ ಭೀತಿ ನಿಮ್ಮನ್ನು ಆವರಿಸಿದೆಯಾ?
ನವದೆಹಲಿ, ಜ.28- ಎಐಸಿಸಿ ಉಪಾಧ್ಯಕ್ಷ, ಮುಂಬರುವ ಲೋಕಸಭೆ ಚುನಾವಣೆಗಾಗಿ ಪಕ್ಷದ ಸಾರಥ್ಯ ಹೊತ್ತಿರುವ ರಾಹುಲ್ ಗಾಂಧಿ ಅವರು 'ಟೈಮ್ಸ್ ನೌ' ಆಂಗ್ಲ ವಾಹಿನಿಗೆ ನಿನ್ನೆ ಸೋಮವಾರ ರಾತ್ರಿ ಸುಮಾರು ಒಂದೂವರೆ ಗಂಟೆ ಕಾಲದ ಸುದೀರ್ಘ ಸಂದರ್ಶನ ನೀಡಿದ್ದಾರೆ.
'ನಿಮ್ಮನ್ನು ಸಂಕಷ್ಟಕ್ಕೆ ದೂಡುವ ಅಥವಾ ಕಠಿಣ ಪ್ರಶ್ನೆಗಳನ್ನು ಎದುರಿಸುವುದು ಬೇಡವೆಂದು ಕಳೆದೊಂದು ದಶಕದಲ್ಲಿ ನೀವು ಮುಖಾಮುಖಿ ಸಂದರ್ಶನ ನೀಡಿಲ್ಲ ಎಂಬುದು ನನ್ನ ಅನಿಸಿಕೆ' ಎಂದು ಕೇಳೀದ್ದಕ್ಕೆ ಅಂಥಾದ್ದೇನಿಲ್ಲ. ಅನೇಕ ಬಾರಿ ಔಪಚಾರಿಕವಾಗಿ/ಅನೌಪಚಾರಿಕವಾಗಿ ಮಾಧ್ಯಮಗಳೊಂದಿಗೆ ಮಾತನಾಡಿರುವೆ. ಮುಖ್ಯವಾಗಿ ನಾನು ಪಕ್ಷದ ಆಂತರಿಕ ವೇದಿಕೆಯಲ್ಲಿ ಮಾತನಾಡುವುದರತ್ತ ಗಮನ ಹರಿಸಿದ್ದೇನೆ. ಅಲ್ಲೇ ನನ್ನ ಗಮನವೆಲ್ಲ ಎಂದು ರಾಹುಲ್ ಗಾಂಧಿ ಉತ್ತರಿಸಿದ್ದಾರೆ.
ಪ್ರಶ್ನೋತ್ತರದ ನೇರ ಪಾಠ ಇಲ್ಲಿದೆ:

ನರೇಂದ್ರ ಮೋದಿಯ ಭೀತಿ ನಿಮ್ಮನ್ನು ಕಾಡುತ್ತಿದೆಯಾ?
1. ನರೇಂದ್ರ ಮೋದಿಯ ಭೀತಿ ನಿಮ್ಮನ್ನು ಕಾಡುತ್ತಿದೆಯಾ?
ಉ: ನನ್ನ ತಂದೆ, ಅಜ್ಜಿ ಸಾವಿಗೀಡಾಗುವುದನ್ನು ಕಂಡಿರುವೆ. ನನಗ್ಯಾವುದರ ಬಗ್ಗೆಯೂ ಭಯವಿಲ್ಲ.

ಪ್ರಧಾನಿ ಸ್ಥಾನಕ್ಕೆ ಸ್ಪರ್ಧಿಸಲು ಮುಕ್ತರಾಗಿದ್ದೀರಾ, ಇಲ್ವಾ
ಮೊದಲನೆಯದಾಗಿ, ನೀವು ಪ್ರಧಾನಿ ಸ್ಥಾನಕ್ಕೆ ಸ್ಪರ್ಧಿಸಲು ಮುಕ್ತರಾಗಿದ್ದೀರಾ, ಇಲ್ವಾ ಎಂಬುದನ್ನು ಸ್ಪಷ್ಟಪಡಿಸಿ. ಅಥವಾ ಸ್ಪರ್ಧೆ ಕಠಿಣವಾಗಿದೆ ಎಂದು ಅವಾಯ್ಡ್ ಮಾಡುತ್ತಿದ್ದೀರಾ?
ಉ: ನೋಡಿ, AICC ಸಮಾವೇಶದಲ್ಲಿ ಈ ಬಗ್ಗೆಯೇ ನಾನು ಮಾತನಾಡಿದ್ದೇನೆ. ಮೂಲತಃ ಇಲ್ಲಿರುವ ವಿಷಯವೆಂದರೆ ಈ ದೇಶದ ಪ್ರಧಾನಿಯನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ ಎಂಬುದನ್ನು ಅರಿಯಬೇಕು. ಸಂಸದರು ಪ್ರಧಾನಿಯನ್ನು ಆರಿಸುತ್ತಾರೆ. ನಮ್ಮ (ಪ್ರಜಾತಂತ್ರ) ವ್ಯವಸ್ಥೆ ಸಂಸದರನ್ನು ಆಯ್ಕೆ ಮಾಡುತ್ತದೆ. ಮುಂದೆ ಸಂಸದರು ಪ್ರಧಾನಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ನಾನು ಇದನ್ನೇ ಸಮಾವೇಶದಲ್ಲಿ ಸ್ಪಷ್ಟವಾಗಿ ಹೇಳಿದ್ದೇನೆ. ಕಾಂಗ್ರೆಸ್ ಪಕ್ಷ ನನ್ನನ್ನೇ ಆರಿಸುತ್ತದೆಯೆಂದಾದರೆ ಮತ್ತು ಪಕ್ಷಕ್ಕಾಗಿ ಏನು ಬೇಕಾದರೂ ಮಾಡಿ ಎಂದು ಕೇಳಿದರೆ ಅದನ್ನು ಮಾಡಲು ನಾನು ಸಿದ್ಧ. ಪ್ರಧಾನಿ ನೇಮಕ ಪ್ರಕ್ರಿಯೆಯನ್ನು ಗೌರವಿಸಬೇಕು. ಚುನಾವಣೆಗೆ ಮುನ್ನ ಪ್ರಧಾನಿಯ ಹೆಸರನ್ನು ಘೋಷಿಸುವುದು, ಸಂಸತ್ತಿನಲ್ಲಿ ಸದಸ್ಯರನ್ನು ಕೇಳದೆಯೇ ಪ್ರಧಾನಿಯ ಹೆಸರನ್ನು ಪ್ರಕಟಿಸುವುದನ್ನು ವಾಸ್ತವವಾಗಿ ಸಂವಿಧಾನದಲ್ಲಿ ಬರೆದಿಟ್ಟಿಲ್ಲ.

ಹಿಂದಿನ ಪ್ರಧಾನಿಯೇ ಮತ್ತೆ ಆರಿಸಿಬಂದಿದ್ದರು
2009ರಲ್ಲಿ ತಾವು ಹೀಗೇ ಮಾಡಿದ್ದಿರಿ?
ಉ: ಇಲ್ಲ. ಇಲ್ಲ
ಪ್ರ: ಹೌದು ಸ್ವಾಮಿ ನೀವು ಹಾಗೆಯೇ ಮಾಡಿದ್ದಿರಿ?
ನೋಡಿ ಆಗ ಹಿಂದಿನ ಪ್ರಧಾನಿಯೇ ಮತ್ತೆ ಆರಿಸಿಬಂದಿದ್ದರು. ಆದರೂ ಅವರು ಮತ್ತೆ ಸಂಸತ್ತಿಗೆ ಹೋದರು. ಅಲ್ಲಿ ಹಿಂದಿನ ಪ್ರಧಾನಿಯೇ ಮುಂದುವರಿಯಬೇಕು ಎಂದು ನಿರ್ಧರಿಸಿದರು. ಹಾಗಾಗಿ ಅವರೇ ಮುಂದುವರಿದರು.
ಪ್ರ: ನೋಡಿ ರಾಹುಲ್ ಈ ಪ್ರಶ್ನೆಯನ್ನು ನಾವು ಕೆದಕಿ ನೋಡಬೇಕಾಗುತ್ತದೆ. ಕಾಂಗ್ರೆಸ್ ಸಂದರು ರಾಹುಲ್ ಗಾಂಧಿಯನ್ನಲ್ಲದೆ ಮತ್ಯಾರನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯ?
ಉ: ಅದು ಅವರಿಗೆ ಸರಿಯೆನಿಸಬಹುದಾದ ವಿಚಾರ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾವು ಗೌರವಿಸಬೇಕು. ಪ್ರಜಾಪ್ರಭುತ್ವ ಅಂದ್ರೆ ಇಷ್ಟಾನುಸಾರ ನಿರ್ಧಾರಗಳನ್ನು ತೆಗೆದುಕೊಳ್ಳುವುದಲ್ಲ. ನಿರ್ಧಾರಗಳನ್ನು ಹಂಚಿಕೊಳ್ಳಬೇಕು; ವ್ಯವಸ್ಥೆಯನ್ನು ನಾಶ ಪಡಿಸುವುದಲ್ಲ. (ಮತ್ತದೇ ಸಂವಿಧಾನ ವ್ಯವಸ್ಥೆ/ ಪ್ರಕ್ರಿಯೆಯ ಉಲ್ಲೇಖ. ಆ ವ್ಯವಸ್ಥೆಯನ್ನು ನಾನು ಗೌರವಿಸುತ್ತೇನೆ ಎಂಬ ಉತ್ತರ ರಾಹುಲರಿಂದ).

ಆರ್ನಬ್ ಗೇ ಮರುಪ್ರಶ್ನೆ, ನೀವೇಕೆ ಪತ್ರಕರ್ತರಾದಿರಿ?
ನರೇಂದ್ರ ಮೋದಿ ಎದುರು ಮುಖಾಮುಖಿಯಾಗುವುದನ್ನು ಅವಾಯ್ಡ್ ಮಾಡುತ್ತಿದ್ದೀರಾ? ಒಟ್ಟಾರೆಯಾಗಿ ಎಲ್ಲ ಅಂದಾಜುಗಳ ಪ್ರಕಾರ ಮುಂಬರುವ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯದಲ್ಲ ಎಂಬುದು ವ್ಯಕ್ತವಾಗುತ್ತಿದೆ. ಇದರಿಂದ ಎಲ್ಲಿ ಸೋತು ಹೋಗುತ್ತೇನೋ ಎಂದು ಭಯವಾಗುತ್ತಿದೆಯಾ? ಅಥವಾ ರಾಹುಲ್ ಗಾಂಧಿ ಈ ಸವಾಲನ್ನು ಅಧಿಕೃತವಾಗಿ ಸ್ವೀಕರಿಸದಿದ್ದರೆ ಸೋಲುವ ಭೀತಿ ಕಾಡುತ್ತಿದೆ. ಹಾಗಾಗಿ ಮೋದಿ ಎದುರಾಬದುರು ಸ್ಪರ್ಧಿಸಲು ಇಚ್ಛಿಸುತ್ತಿಲ್ಲ ಎಂಬ ಸಂದೇಶ ರವಾನೆಯಾಗುತ್ತದೆ. ನೀವು ಇದಕ್ಕೆ ಉತ್ತರಿಸಲೇಬೇಕು.
ಉ: ಇದಕ್ಕೆ ಉತ್ತರ ಬೇಕೆಂದರೆ ರಾಹುಲ್ ಗಾಂಧಿ ಯಾರು ಎಂಬುದನ್ನು ಮೊದಲು ನೀವು ಸ್ವಲ್ಪ ಅರ್ಥ ಮಾಡಿಕೊಳ್ಳಬೇಕು. ರಾಹುಲ್ ಗಾಂಧಿ ಪರಿಸ್ಥಿತಿ ಹೇಗಿದೆ ಎಂಬುದನ್ನು ಅರಿಯಬೇಕು. ಅದನ್ನು ನೀವು ಅಧ್ಯಯನ ಮಾಡಿದರೆ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿಕೊಳ್ಳಲು ರಾಹುಲ್ ಗಾಂಧಿಗೆ ಭಯ ಇದೆಯಾ, ಇಲ್ವಾ ಎಂಬುದು ನಿಮಗೇ ತಿಳಿಯುತ್ತದೆ. (ಇದಕ್ಕೆ ಸಂದರ್ಶಕ ಆರ್ನಬ್ ಗೋಸ್ವಾಮಿಗೇ ಮರುಪ್ರಶ್ನೆ... ನೀವೇಕೆ ಪತ್ರಕರ್ತರಾದಿರಿ? ತಾಳ್ಮೆಯಿಂದ ಉತ್ತರ. ಕೊನೆಗೆ ನನ್ನ ಪ್ರಶ್ನೆಗೆ ಉತ್ತರ ಕೊಡಿ.. ನೀವು ಮೋದಿ ವಿರುದ್ಧ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದೀರಿ, ಅಲ್ವಾ?)

ಮೋದಿ ಬಗೆಗಿನ ಪ್ರಶ್ನೆಗೆ ನಾನು ಕುರುಡಾಗಿದ್ದೇನೆ.
ಮತ್ತೆ ಸಂದರ್ಶಕ ಆರ್ನಬ್ ಗೇ ಪ್ರಶ್ನೆ... ನೀವೇಕೆ/ಹೇಗೆ ಪತ್ರಕರ್ತರಾದಿರಿ? ಇದಕ್ಕೆ ಉತ್ತರವಾಗಿ ನಾನು ಅರೆಬರೆ ಪತ್ರಕರ್ತನಾಗಲು ಬಯಸಲಿಲ್ಲ. ಪೂರ್ಣ ಪ್ರಮಾಣದ ಪತ್ರಕರ್ತನಾಗಿದ್ದೇನೆ. ಅದೆಲ್ಲಾ ಇರಲಿ ನೀವು ಅರ್ಧಂಬರ್ಧ ಪಕ್ಷವನ್ನು ಮುನ್ನಡೆಸಕು ಸಾಧ್ಯವಿಲ್ಲ. ದಿನಾ ಬೆಳಗಾದರೆ ಮೋದಿ ನಿಮಗೆ ಸವಾಲು ಎಸೆಯುತ್ತಿದ್ದಾರೆ. ಅದಕ್ಕೆ ಉತ್ತರ ಕೊಡಿ ಸಾಕು.
ಮತ್ತೆ ಹಿಂದಡಿಯಿಟ್ಟ ರಾಹುಲ್, ನಾನು ಹೇಗೆ ಹುಟ್ಟಿ ಬೆಳೆದೆ. ಯಾವ ಪರಿಸ್ಥಿತಿ/ ಪರಿಸರದಲ್ಲಿ ನಾನು ಬೆಳೆದೆ ಎಂದೆಲ್ಲಾ ಹೇಳುತ್ತಾ ಅಪ್ಪ ಸತ್ತ ಬಗ್ಗೆ, ಅಜ್ಜಿ ಹತ್ಯೆಗೀಡಾದ ಬಗ್ಗೆ, ಅಜ್ಜಿ ಜೈಲಿಗೆ ಹೋದ ವಿಷಯಗಳತ್ತಲೇ ಗಿರಕಿ ಹೊಡೆದ ರಾಹುಲ್ ಗಾಂಧಿ ಆ ದುರಂತ/ಆಘಾತಗಳನ್ನೆಲ್ಲಾ ಒಬ್ಬ ಬಾಲಕನಾಗಿ ನಾನು ಕಣ್ಣಾರೆ ನೋಡುತ್ತಾ ಬೆಳೆದ ಎಂದರೇ ಹೊರತು ಮೋದಿ ಸವಾಲಿನ ಬಗ್ಗೆ ನೇರ ಉತ್ತರವಂತೂ ನೀಡಲಿಲ್ಲ.
ಅರ್ಜುನನಂತೆ ನಾನು ನನ್ನ ಗುರಿಯ ಮೇಲೆ ಕಣ್ಣಿಟ್ಟಿದ್ದೇನೆ. ನೀವು ಮೋದಿಯ ಬಗ್ಗೆ ಕೇಳಿದರೂ ನಾನು ಅದರತ್ತ ಗಮನಹರಿಸುವುದಿಲ್ಲ. ಅದಕ್ಕೆಲ್ಲಾ ನಾನು ಕುರುಡಾಗಿದ್ದೇನೆ. ದೇಶದ ಪ್ರಜಾ ವ್ಯವಸ್ಥೆ ಬಗ್ಗೆ ಮಾತ್ರ ನನ್ನ ಗಮನ! ಇದೇ ವ್ಯವಸ್ಥೆಯಿಂದಾಗಿ ನನ್ನ ಅತ್ಯಾಪ್ತರು ಸಾವಿಗೀಡಾಗುವುದನ್ನು ಕಂಡೆ. ಈ ವ್ಯವಸ್ಥೆಯು ಅನುಕ್ಷಣವೂ ಜನರನ್ನು ಸಂಕಷ್ಟಕ್ಕೆ ದೂಡುತ್ತಿದೆ. ಹಾಗಾಗಿ ನಾನು ಮೋದಿ ವಿರುದ್ಧ ಸೋಲುತ್ತೇನಾ ಎಂಬುದಲ್ಲ. ಈ ದೇಶದಲ್ಲಿ ಅಪಾರವಾದ ಶಕ್ತಿಯಿದೆ. ಆದರೆ ಆ ಕೋಟ್ಯಂತರ ಯುವ ಶಕ್ತಿ ಬಳಕೆಯಾಗುತ್ತಿಲ್ಲ. ಆ ಯುವಶಕ್ತಿಗೆ ನನ್ನ ಶಕ್ತಿ ಧಾರೆಯೆರೆಯುವೆ.

ಎರಡೂ ಪಕ್ಷಗಳ ಫಿಲಾಸಫಿ ವಿಭಿನ್ನವಾಗಿವೆ
ಅದೆಲ್ಲಾ ಒತ್ತಟ್ಟಿಗಿರಲಿ. ನನಗೂ ಅದರ ಬಗ್ಗೆ ಅನುಕಂಪವಿದೆ. ಆದರೆ ನನ್ನ ಪ್ರಶ್ನೆಯೆಂದರೆ ಮೋದಿ ನಿಮ್ಮನ್ನು ಶೆಹಜಾದ್ ಎಂದು ಸಂಭೋಧಿಸುತ್ತಾರೆ. ಅದರ ಬಗ್ಗೆ ನೀವು ಏನು ಹೇಳುತ್ತೀರಿ? ಮೋದಿ ಬಗ್ಗೆ ನಿಮಗೇನನ್ನಿಸುತ್ತದೆ? ಮೋದಿ ವಿರುದ್ಧ ಸೋಲುತ್ತೇನೆ ಎಂಬ ಭೀತಿ ಆವರಿಸಿದೆಯಾ, ನಿಮಗೆ? ದಯವಿಟ್ಟು ನೇರವಾಗಿ ಉತ್ತರಿಸಿ. ನನ್ನ ಪ್ರಶ್ನೆಯನ್ನು ಅವಾಯ್ಡ್ ಮಾಡಬೇಡಿ.
ಇಲ್ಲ ಇಲ್ಲ. ನನಗನ್ನಿಸುತ್ತುವಂತೆ ನಾವು ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುತ್ತೇವೆ. ಇನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿ ಬಗ್ಗೆ ಹೇಳಬೇಕೆಂದರೆ ಅಧಿಕಾರವನ್ನು ಒಬ್ಬರ ಕೈಯಲ್ಲೇ ಹಿಡಿದಿಡಬೇಕು ಎಂದು ಬಿಜೆಪಿ ಬಯಸುತ್ತದೆ. ಆದರೆ ವ್ಯವಸ್ಥೆಯನ್ನು ಮುಕ್ತವಾಗಿಡಬೇಕು ಎಂಬುದು ನನ್ನ ಉದ್ದೇಶ. ನನಗೆ RTIನಲ್ಲಿ ನಂಬಿಕೆಯಿದೆ. ಜನತೆಯ ಕೈಗೆ ಅಧಿಕಾರ ನೀಡಬೇಕು ಎಂಬುದರಲ್ಲಿ ನನಗೆ ನಂಬಿಕೆಯಿದೆ. ಎರಡೂ ಪಕ್ಷಗಳ ಫಿಲಾಸಫಿಗಳು ಮೂಲಭೂತವಾಗಿ ವಿಭಿನ್ನವಾಗಿವೆ.












Click it and Unblock the Notifications