ಫೇಸ್ಬುಕ್ ನಿಂದನೆ, ಪೊಲೀಸ್ ನಿರ್ಲಕ್ಷ್ಯ, ಮಹಿಳೆ ಆತ್ಮಹತ್ಯೆ
ಕೊಚ್ಚಿ, ಜ.28: ಸಾಮಾಜಿಕ ಜಾಲ ತಾಣ ಫೇಸ್ ಬುಕ್ ದೆಸೆಯಿಂದ ಗೃಹಿಣಿಯೊಬ್ಬಳು ಪ್ರಾಣ ಕಳೆದುಕೊಂಡ ದಾರುಣ ಘಟನೆ ವರದಿಯಾಗಿದೆ. ಫೇಸ್ ಬುಕ್ ನಲ್ಲಿ ನನ್ನ ಮಾನ ಕಳೆದು ಹೋಗುತ್ತಿದೆ ದಯವಿಟ್ಟು ಕ್ರಮ ಜರುಗಿಸಿ ಎಂದು ಪೊಲೀಸರಿಗೆ ಮಹಿಳೆ ದೂರು ನೀಡಿದ್ದರು. ಅದರೆ, ತಿಂಗಳು ಕಳೆದರೂ ಕ್ರಮ ಜರುಗಿಸದಿದ್ದಾಗ ಬೇಸರಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
25 ವರ್ಷ ವಯಸ್ಸಿನ ವಿಜಿತಾ ಅವರು ಕೊಚ್ಚಿ ಸಮೀಪದ ಚಿತ್ತೂರಿನ ನಿವಾಸಿಯಾಗಿದ್ದು, ಫೇಸ್ ಬುಕ್ ನಲ್ಲಿ ಕಿರುಕುಳ ಅನುಭವಿಸಿದ್ದರು. ಇದರ ಬಗ್ಗೆ ಪೊಲೀಸರಿಗೆ ದೂರಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ವಿಳಂಬಗೊಳಿಸಿದ್ದರು. ಕೇರಳ ಹೈಕೋರ್ಟ್ ಕೂಡಾ ಇತ್ತೀಚೆಗೆ ಪ್ರಕರಣದ ಸ್ಥಿತಿ ಗತಿ ಬಗ್ಗೆ ಹೇಳಿಕೆ ನೀಡುವಂತೆ ಪೊಲೀಸರಿಗೆ ಸೂಚಿಸಿತ್ತು. ಆದರೆ, ಪೊಲೀಸರ ವಿಳಂಬ ನೀತಿ, ನಿರ್ಲಕ್ಷ್ಯದಿಂದ ಮನನೊಂದ ವಿಜಿತಾ ಅವರು ಪತಿ ಹಾಗೂ ಮಗುವನ್ನು ತೊರೆದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿಜಿತಾ ತನ್ನ ಪತಿ ವಿನುಕೇತನ್ ಜತೆ ಚೆರಾನೆಲ್ಲುರು ಪೊಲೀಸ್ ಠಾಣೆಗೆ ತೆರಳಿ ಡಿ.23, 2013ರಂದು ದೂರು ನೀಡಿದ್ದಾರೆ. ವಿಜಿತಾ ಅವರು ಅನೇಕ ಪುರುಷರ ಜತೆ ಸಂಬಂಧ ಹೊಂದಿದ್ದಾಳೆ ಎಂದು ಅವಾಚ್ಯ ಶಬ್ದಗಳಲ್ಲಿ ನಿಂದಿಸಿ ಫೇಸ್ ಬುಕ್ ನಲ್ಲಿ ರತೀಶ್ ಎಂಬ ವ್ಯಕ್ತಿ ಪೋಸ್ಟ್ ಮಾಡಿದ್ದ. ಅಂಬಳಪುಳದ ಮೋಹನನ್ ಎಂಬುವರ ಪುತ್ರ ರತೀಶ್ ವಿರುದ್ಧ ಕ್ರಮ ಜರುಗಿಸುವಂತೆ ಸಾಕ್ಷಿ ಸಮೇತ ವಿಜಿತಾ ದೂರು ನೀಡಿದ್ದರು.

ಮಾಹಿತಿ ಮತ್ತು ತಂತ್ರಜ್ಞಾನ ಕಾಯಿದೆ ಸೆಕ್ಷನ್ 66ಎ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವ ಉತ್ಸಾಹ ತೋರಿದ ಪೊಲೀಸರು ದೂರು ನೀಡಿದ ಮರುದಿನವೇ ಮಾತು ಬದಲಿಸಿದರು. ನಂತರ ವಿಜಿತಾ ಅವರು ನೇರ ಕೊಚ್ಚಿ ನಗರ ಪೊಲೀಸ್ ಆಯುಕ್ತ ಕೆ.ಜಿ ಜೇಮ್ಸ್ ಅವರಿಗೆ ದೂರು ನೀಡಿದ್ದಾರೆ. ಆದರೆ, ಅಲ್ಲೂ ನ್ಯಾಯ ಸಿಗಲಿಲ್ಲ.
ಕಳೆದ ಜ.16ರಂದು ಹೈಕೋರ್ಟ್ ನಲ್ಲಿ ವಿಜಿತಾ ಅರ್ಜಿ ಸಲ್ಲಿಸಿ ತನಗಾದ ಅನ್ಯಾಯದ ಬಗ್ಗೆ ವಿವರಿಸಿದ್ದಾರೆ. ಈ ಬಗ್ಗೆ ವಿವರಣೆ ಕೇಳಿದ ಹೈಕೋರ್ಟ್, ಚೆರಾನೆಲ್ಲೂರ್ ಪೊಲೀಸರಿಗೆ ಆರೋಪಿಯ ಹೇಳಿಕೆ ಪಡೆಯುವಂತೆ ಸೂಚಿಸಿದೆ. ಅದರೆ, ಪೊಲೀಸರು ಕೋರ್ಟ್ ಆದೇಶವನ್ನು ಧಿಕ್ಕರಿಸಿದ್ದಾರೆ.
ಈ ಪ್ರಕರಣವನ್ನು ಐಟಿ ಕಾಯ್ದೆ ಅಡಿಯಲ್ಲಿ ದಾಖಲಿಸಿಕೊಳ್ಳಲು ಸೂಕ್ತ ಆಧಾರ ಸಿಕ್ಕಿಲ್ಲ. ವಿಜಿತಾ ಕೋರಿಕೆ ಮೇರೆಗೆ ಚೆರಾನೆಲ್ಲೂರು ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ವಿಜಿತಾ ದೂರು ದಾಖಲಿಸುತ್ತಿದ್ದಂತೆ ಫೇಸ್ ಬುಕ್ ಕಾಮೆಂಟ್ ಗಳನ್ನು ಡೀಲಿಟ್ ಮಾಡಲಾಗಿದೆ. ವಿಜಿತಾ ಹೇಳಿಕೆಯಂತೆ ನೆರೆ ಮನೆಯ ಕುಸುಮಾ ಕುಮಾರಿ ಹಾಗೂ ವಿಜಿತಾ ತಂದೆಗೂ ಭೂ ವ್ಯಾಜ್ಯ ನಡೆಯುತ್ತಿದೆ. ಈ ಕಾರಣಕ್ಕೆ ಮಾನ ಹಾನಿ ಮಾಡಲು ನನ್ನ ವಿರುದ್ಧ ಅವಹೇಳನಾಕಾರಿ ಸಂದೇಶಗಳನ್ನು ಫೇಸ್ ಬುಕ್ ನಲ್ಲಿ ಹಾಕಲಾಗಿದೆ ಎಂದಿದ್ದಾರೆ.












Click it and Unblock the Notifications