ಮತ್ತೆ ಗಡಿ ವಿವಾದ ಉಲ್ಬಣ: ಮಹಾರಾಷ್ಟ್ರ ವಿಧಾನಸಭೆಯಲ್ಲಿ ರಾಜ್ಯದ ವಿರುದ್ಧ ಖಂಡನಾ ನಿರ್ಣಯ ಮಂಡನೆ
ಮುಂಬೈ, ಡಿ. 27: ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದ ಇನ್ನು ಕೊನೆಗೊಳ್ಳುವಂತೆ ಕಾಣಿಸುತ್ತಿಲ್ಲ, ಇತ್ತಿಚೆಗೆ ಕರ್ನಾಟಕ ರಾಜ್ಯದ ಹಿತಾಸಕ್ತಿಗಳನ್ನು ರಕ್ಷಿಸಲು ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಲಾಗಿತ್ತು. ಈಗ ಇದನ್ನು ವಿರೋಧಿಸಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಇಂತಹದ್ದೇ ನಿರ್ಣಯ ಮಂಡಿಸಲಾಗಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಕರ್ನಾಟಕದ "ಮರಾಠಿ ವಿರೋಧಿ" ನಿಲುವನ್ನು ಖಂಡಿಸಿ ನಿರ್ಣಯ ಮಂಡಿಸಿದ್ದು, ಸರ್ವಾನುಮತದಿಂದ ಅಂಗೀಕಾರವಾಗಿದೆ.
ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ್ದ ಸರ್ವಾನುಮತದ ನಿರ್ಣಯವು ಮಹಾರಾಷ್ಟ್ರವು ಸೃಷ್ಟಿಸಿದ ಗಡಿ ವಿವಾದವನ್ನು ಖಂಡಿಸಿದೆ. ನಿರ್ಣಯವನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಗಿತ್ತು.

ಮುಂದಿನ ವರ್ಷ ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಧ್ಯಪ್ರವೇಶದ ಹೊರತಾಗಿಯೂ ಬಿಜೆಪಿ ಆಡಳಿತವಿರುವ ಎರಡೂ ರಾಜ್ಯಗಳ ನಡುವಿನ ಸಂಘರ್ಷ ಮತ್ತಷ್ಟು ಉಲ್ಬಣಗೊಳ್ಳುತ್ತಿದೆ.
ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಮಂಡಿಸಲಾಗಿರುವ ನಿರ್ಣಯವು 865 ಮರಾಠಿ ಮಾತನಾಡುವ ಹಳ್ಳಿಗಳಿವೆ, ಈ ಹಳ್ಳಿಗಳ ಪ್ರತಿ ಇಂಚಿನನ್ನೂ ಮಹಾರಾಷ್ಟ್ರಕ್ಕೆ ತರಲಾಗುವುದು" ಎಂದು ಹೇಳಿದೆ. ಇದಕ್ಕಾಗಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಏನು ಬೇಕಾದರೂ ಮಾಡಲಿದೆ ಎಂದು ಹೇಳಿದೆ.
ಜೊತೆಗೆ 'ಬೆಳಗಾವಿ, ಕಾರವಾರ, ಬೀದರ್, ನಿಪಾಣಿ, ಭಾಲ್ಕಿಯ ಇಂಚಿಂಚೂ ಮಹಾರಾಷ್ಟ್ರದ ಭಾಗವಾಗಲಿದೆ' ಎಂದು ನಿರ್ಣಯ ಪ್ರತಿಪಾದಿಸುತ್ತದೆ.

ಮಹಾರಾಷ್ಟ್ರದ ನಿರ್ಣಯಕ್ಕೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು " ಇದರಿಂದ ಪ್ರಚೋದನೆಯಷ್ಟೇ ಹೊರತುಸಿ ಬೇರೇನೂ ಇಲ್ಲ" ಎಂದು ಹೇಳಿದ್ದಾರೆ.
ಮಹಾರಾಷ್ಟ್ರವು ಸೃಷ್ಟಿಸಿರುವ ಗಡಿ ವಿವಾದವನ್ನು ರಾಜ್ಯ ಗುರುವಾರ ಖಂಡಿಸಿತ್ತು.
"ಕರ್ನಾಟಕದ ನೆಲ, ಜಲ, ಭಾಷೆ ಮತ್ತು ಕನ್ನಡಿಗರ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಯಾವುದೇ ರಾಜಿ ಇಲ್ಲ, ಕರ್ನಾಟಕದ ಜನರು ಮತ್ತು ಸದಸ್ಯರ ಭಾವನೆಗಳು ಈ ವಿಷಯಗಳಲ್ಲಿ ಒಂದಾಗಿದೆ. ನಾವೆಲ್ಲರೂ ಒಗ್ಗಟ್ಟಿನಿಂದ ರಾಜ್ಯದ ಹಿತಾಸಕ್ತಿ ಕಾಪಾಡಲು ಸಾಂವಿಧಾನಿಕ ಮತ್ತು ಕಾನೂನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲು ಬದ್ಧರಾಗಿದ್ದೇವೆ. ಮಹಾರಾಷ್ಟ್ರದವರು ಅನಗತ್ಯವಾಗಿ ಸೃಷ್ಟಿಸಿರುವ ಗಡಿ ವಿವಾದಗಳನ್ನು ಖಂಡಿಸಿ, ಈ ಸದನವು ರಾಜ್ಯದ ಹಿತಾಸಕ್ತಿ ಕಾಪಾಡಲು ಬದ್ಧವಾಗಿದೆ ಎಂಬ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸುತ್ತದೆ" ಎಂದು ಬಸವರಾಜ ಬೊಮ್ಮಾಯಿ ಕಳೆದ ವಾರ ರಾಜ್ಯ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ್ದರು.
ಉದ್ಧವ್ ಠಾಕ್ರೆ ಅವರ ಶಿವಸೇನೆ ಬಣದ ನಾಯಕ ಸಂಜಯ್ ರಾವತ್ ಅವರು ಡಿಸೆಂಬರ್ 21 ರಂದು ಚೀನಾ ದೇಶದೊಳಗೆ ನುಗ್ಗಿದ ಹಾಗೆ ನಾವು ಕರ್ನಾಟಕ್ಕಕೆ ನುಗ್ಗುತ್ತೇವೆ ಎಂದು ಆಕ್ರಮಣಕಾರಿ ಹೇಳಿಕೆ ನೀಡಿದ ಮತ್ತಷ್ಟು ವಿವಾದ ಸೃಷ್ಟಿಸಿದ್ದರು.
ಈ ವರ್ಷದ ಜೂನ್ನಲ್ಲಿ ಅಧಿಕಾರದಿಂದ ಕೆಳಗಿಳಿದ ಉದ್ಧವ್ ಠಾಕ್ರೆ 'ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಿನ ಜಗಳಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿರ್ಧರಿಸುವವರೆಗೆ ಬೆಳಗಾವಿ, ಕಾರವಾರ ಮತ್ತು ನಿಪ್ಪಾಣಿಗಳನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ಘೋಷಿಸಬೇಕು ಎಂದು ಹೇಳಿದ್ದಾರೆ. ಜೊತೆಗೆ ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಕರ್ನಾಟಕದ ವಿರುದ್ಧ ಬಲವಾದ ನಿಲುವು ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.












Click it and Unblock the Notifications