ವೃಂದಾವನದಲ್ಲಿ ಹಣದ ಮಳೆ, ಮೂಕವಿಸ್ಮಿತರಾದ ಭಕ್ತರು!
ವೃಂದಾವನ(ಉತ್ತರಪ್ರದೇಶ), ಜುಲೈ,21 : ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟರೆ ಇರುತ್ತಾ? ಮಂಗನ ರೀತಿ ಆಡ್ಬೇಡಾ...ಅಂತ ಮಂಗಗಳನ್ನ ನೆಪಮಾಡಿಕೊಂಡು ನಾವು ಯಾರಿಗಾದರೂ ಬೈದೇ ಇರ್ತೇವೆ. ಮಂಗ ಯಾವಾಗಲೂ ಹುಡುಗಾಟ, ತರ್ಲೆ ಮಾಡ್ತಾ ದೇವಾಲಯದಲ್ಲೋ, ದಾರಿಯಲ್ಲೋ ನಾನಾ ಅವಾಂತರಗಳನ್ನು ಸೃಷ್ಟಿಸಿ ಜನರಿಗೆ ದಿಗಿಲು ಹುಟ್ಟಿಸಿರುತ್ತೆ.
ಮಂಗ ಮತ್ತೆ ಏನು ಮಾಡ್ತು ಅಂತಾ ಕೇಳ್ತಿದ್ದೀರಾ? ಮಂಗನ ತರಲೆ ಅವಾಂತರದಿಂದ ವೃಂದಾವನ ಬಳಿಯ ಬಾಂಕೆ ಬಿಹಾರಿ ದೇವಾಲಯದಲ್ಲಿ ಶನಿವಾರ ಮುಂಗಾರು ಮಳೆ ಬದಲು 500ರೂ ನೋಟುಗಳ ಮಳೆ ಸುರಿಯಿತು. ಕ್ಷಣಕಾಲ ಆಶ್ಚರ್ಯಚಕಿತರಾಗಿ, ಮೂಕವಿಸ್ಮಿತರಾಗಿ ನಿಂತಿದ್ದ ಭಕ್ತಾದಿಗಳು ಬಳಿಕ ಬಿದ್ದ ಹಣವನ್ನು ಆರಿಸಿಕೊಳ್ಳತೊಡಗಿದರು.[ನಾಯಿ, ಮಂಗ ಕಚ್ಚಿದರೆ ಎರಡು ಲಕ್ಷ ಪರಿಹಾರ ಸಿಗುತ್ತೆ!]
ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಅಂತಾರಲ್ಲ ಇದೇ ಅಲ್ವ? ಹ್ಞೂ...ಹೌದು ರೀ..ಹೇಮಾವತಿ ಸೋನ್ಕರ್ ಎಂಬ 50 ವರ್ಷದ ಮಹಿಳೆ ಮತ್ತು ಕುಟುಂಬದವರು ಆಗ್ರಾ, ಮಥುರಾ ವೃಂದಾವನಕ್ಕೆ ಪ್ರವಾಸದ ನಿಮಿತ್ತ ಆಗಮಿಸಿದ್ದರು. ಆಕೆ ವೃಂದಾವನದ ಬಾಂಕೆ ಬಿಹಾರಿ ದೇವಾಲಯಕ್ಕೆ ಬರುವಾಗ 1.5ಲಕ್ಷ ಹಣವನ್ನು ತಮ್ಮ ಜೊತೆ ತಂದಿದ್ದರು.
ಮಹಿಳೆ ಮೇಲೆ ಗಕ್ಕನೆ ಜಿಗಿದ ಮಂಗ ಬ್ಯಾಗ್ ಕಿತ್ತು ಕೊಂಡು ಕ್ಷಣಾರ್ಧದಲ್ಲಿ ಮರ ಏರಿತು. ಬಳಿಕ ನೋಡು ನೋಡುತ್ತಲೇ ಬ್ಯಾಗಿನಲ್ಲಿದ್ದ 500ರೂ ನೋಟುಗಳನ್ನು ಮರದ ಮೇಲಿಂದ ಎಸೆಯಲಾರಂಭಿಸಿತು. ಎಲ್ಲಾ ಪ್ರದೇಶಗಳ ವೀಕ್ಷಣೆ ಬಳಿಕ ವೃಂದಾವನ ಬಿಹಾರಿ ದೇವಾಲಯಕ್ಕೆ ತೆರಳಿ ಜುಲೈ 19 ಭಾನುವಾರ ನವದೆಹಲಿಯಿಂದ ಮುಂಬೈ ತಲುಪುವ ಯೋಜನೆ ಹಾಕಿಕೊಂಡಿದ್ದರು.[ಕೋಲಾರದಲ್ಲಿ ಸತ್ತ ಕೋತಿಗಳಿಗಾಗಿ ದೇವಾಲಯ ನಿರ್ಮಾಣ]
ವೃಂದಾವನ ಸುತ್ತಮುತ್ತ ಪ್ರದೇಶಗಳಾದ ಗೋಕುಲ, ಬರ್ಸಾನ್, ಗೋವರ್ಧನ್ ಮತ್ತು ರಾಧಾ ಕುಂಧ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸುಮಾರು 10,000ಕ್ಕೂ ಹೆಚ್ಚು ಮಂಗಗಳಿದ್ದು, ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಭಕ್ತಾಧಿಗಳು ದೂರಿದ್ದಾರೆ. ಹಾಗಾಗಿ ಮಥುರಾ ಪ್ರದೇಶದ ಎಂಪಿ ಹೇಮಾಮಾಲಿನಿ ಮಂಗಗಳ ಸಂತತಿ ಹರಣ ಚಿಕಿತ್ಸೆ ಬಗ್ಗೆ ಅನುಮತಿ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಬಾಂಕೆ ಬಿಹಾರಿ ದೇವಾಲಯ ಎಲ್ಲಿದೆ?
ಇದು ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿನ ವೃಂದಾವನ ಎಂಬ ಪ್ರದೇಶದಲ್ಲಿದೆ. ಇದನ್ನು ಸ್ವಾಮಿ ಹರಿದಾಸರು 1862 ರಲ್ಲಿ ತಮ್ಮ ಗುರು ಥಾನ್ ಸೇನ್ ಅವರ ನೆನಪಿಗಾಗಿ ನಿರ್ಮಿಸಿದ್ದರು.