Chandrayaan-3: ಚಂದ್ರನ ಕಕ್ಷೆಗೆ ‘ಚಂದ್ರಯಾನ-3’ ಎಂಟ್ರಿಗೆ ಮುಹೂರ್ತ ಫಿಕ್ಸ್!
ಶತಕೋಟಿ ಭಾರತೀಯರ ಎದೆಯಲ್ಲಿ ಢವಢವ ಶುರುವಾಗಿದೆ. ಜೊತೆಗೆ ಕುತೂಹಲ ಕೂಡ ಹೆಚ್ಚಾಗಿದೆ. ಇದಕ್ಕೆ ಕಾರಣ ಭಾರತದ ಹೆಮ್ಮೆಯ ಯೋಜನೆ 'ಚಂದ್ರಯಾನ-3'. ಇಷ್ಟು ದಿನ ಭೂಮಿಯ ಕಕ್ಷೆಯಲ್ಲೇ ಸುತ್ತಾಡುತ್ತಿದ್ದ ಚಂದ್ರಯಾನ-3 ಬಾಹ್ಯಾಕಾಶ ನೌಕೆ, ಇಂದು ಮಧ್ಯರಾತ್ರಿ ಚಂದ್ರನ ಅಂಗಳಕ್ಕೆ ಪಾದಾರ್ಪಣೆ ಮಾಡುತ್ತಿದೆ. ಹಾಗಾದರೆ ಇಸ್ರೋ ವಿಜ್ಞಾನಿ ಬಳಗ ಇದಕ್ಕಾಗಿ ನಡೆಸಿರುವ ಸಿದ್ಧತೆ ಹೇಗಿದೆ? ಬನ್ನಿ ತಿಳಿಯೋಣ.
ಅಂದಹಾಗೆ ಚಂದ್ರಯಾನ-3 ಬಾಹ್ಯಾಕಾಶ ನೌಕೆ ಇಂದು ರಾತ್ರಿ ಟ್ರಾನ್ಸ್ ಲೂನಾರ್ ಇಂಜೆಕ್ಷನ್ ನಡೆಸಲು ಸಜ್ಜಾಗಿದೆ. ಇದಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಂದರೆ ನಮ್ಮ ಇಸ್ರೋ ಸಕಲ ಸಿದ್ಧತೆ ನಡೆಸಿದೆ. ಬಾಹ್ಯಾಕಾಶ ನೌಕೆ ಸುಮಾರು 15 ದಿನ ಕಾಲ ಬಾಹ್ಯಾಕಾಶ ನಿರ್ವಾತದಲ್ಲಿ ಹಾರುತ್ತಿದೆ. ಇಸ್ರೋ ಈ ನಿರ್ಣಾಯಕ ಪ್ರಕ್ರಿಯೆಯನ್ನು ಆಗಸ್ಟ್ 1ರ ಮಧ್ಯರಾತ್ರಿ 12 ಗಂಟೆಯಿಂದ 1 ಗಂಟೆ ತನಕ ನಡೆಸಲಿದೆ. ಸುಮಾರು 28ರಿಂದ 31 ನಿಮಿಷ ಈ ಪ್ರಕ್ರಿಯೆ ನಡೆಯುವ ನಿರೀಕ್ಷೆ ಇದೆ. ಬಾಹ್ಯಾಕಾಶ ನೌಕೆ ಪ್ರೊಪಲ್ಷನ್ ಮಾಡ್ಯೂಲ್ನ ಎಂಜಿನ್ ವೇಗ ಹೆಚ್ಚಿಸುವ ಮೂಲಕ ಈ ಪ್ರಕ್ರಿಯೆಯನ್ನ ನಡೆಸಲಾಗುತ್ತದೆ.

'ಟ್ರಾನ್ಸ್ ಲೂನಾರ್ ಇಂಜೆಕ್ಷನ್' ಅಂದ್ರೆ ಏನು?
ಅಂದಹಾಗೆ TLI ಅಥವಾ ಟ್ರಾನ್ಸ್ ಲೂನಾರ್ ಇಂಜೆಕ್ಷನ್ ಅಂದರೆ ಕಕ್ಷೆ ಬದಲಿಸುವ ಪ್ರಕ್ರಿಯೆ ಎಂದು ಅರ್ಥ. ಇದು ಬಾಹ್ಯಾಕಾಶ ನೌಕೆಯನ್ನು ಚಂದ್ರನ ಹಾದಿಗೆ ಕಳುಹಿಸಲು ಬೆನ್ನೆಲುಬು ಎನ್ನಬಹುದು. ಪ್ರಕ್ರಿಯೆಯನ್ನ ರಾಸಾಯನಿಕ ರಾಕೆಟ್ ಇಂಜಿನ್ನಿಂದ ನಿರ್ವಹಿಸಲಾಗುತ್ತದೆ. ಈ ಮೂಲಕ ಬಾಹ್ಯಾಕಾಶ ನೌಕೆ ವೇಗವನ್ನ ಹೆಚ್ಚಿಸಲಾಗುತ್ತೆ. ಹಾಗೇ ಹೆಚ್ಚಿದ ವೇಗ ಅದರ ಕಕ್ಷೆಯನ್ನ ಕಡಿಮೆ ವೃತ್ತಾಕಾರದ ಭೂ ಕಕ್ಷೆಯಿಂದ, ಹೆಚ್ಚು ಹತ್ತಿರದ ಕಕ್ಷೆಗೆ ಬದಲಾಯಿಸಲು ಸಹಾಯ ಮಾಡುತ್ತದೆ. ಇದನ್ನ ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ಚಂದ್ರನ ಹತ್ತಿರ ತಲುಪುವ ಪ್ರಮುಖ ಪ್ರಕ್ರಿಯೆ ಇದಾಗಿರುತ್ತದೆ.
ಇತಿಹಾಸ ನಿರ್ಮಿಸಲಿದೆ ಭಾರತದ ಇಸ್ರೋ!
ಅಷ್ಟಕ್ಕೂ ಇತರ ದೇಶಗಳಿಗೆ ಹೋಲಿಕೆ ಮಾಡಿದರೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಭಾರತವು 'ಚಂದ್ರಯಾನ-3' ಯೋಜನೆ ಕೈಗೊಂಡಿದೆ. ಚಂದ್ರಯಾನ-3 ಮಿಷನ್ನ ಒಟ್ಟು ವೆಚ್ಚ 615 ಕೋಟಿ ರೂಪಾಯಿ. ಇದು ಚಂದ್ರಯಾನ-2ರ ವೆಚ್ಚಕ್ಕಿಂತಲು ಕಡಿಮೆ ಎನ್ನಬಹುದು. ಜುಲೈ 14ರ ಮಧ್ಯಾಹ್ನ 2:35ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಭಾರತದ ಚಂದ್ರಯಾನ-3 ಲಾಂಚ್ ಆಗಿತ್ತು. 3900 ಕೆಜೆ ತೂಕದ ಬಾಹ್ಯಾಕಾಶ ನೌಕೆ & ರೋವರ್ನ್ನು ಹೊತ್ತ ರಾಕೆಟ್ ಬಾಹ್ಯಾಕಾಶ ತಲುಪಿ ಈಗಾಗಲೇ ತನ್ನ ಗುರಿ ಕಡೆಗೆ ಪ್ರಯಾಣ ಬೆಳೆಸಿದೆ. ಈಗ ಟ್ರಾನ್ಸ್ಲೂನಾರ್ ಇಂಜೆಕ್ಷನ್ ಆಗಸ್ಟ್ 1 ರಂದು ಮಧ್ಯರಾತ್ರಿ 12 & ಬೆಳಗ್ಗೆ 1 ಗಂಟೆ ನಡುವೆ ನಡೆಸಲು ಯೋಜಿಸಲಾಗಿದೆ.

ಯೋಜನೆಯ ಪ್ರಮುಖ ಉದ್ದೇಶ ಏನು?
ಚಂದ್ರನ ಸೂಕ್ಷ್ಮ ಅಧ್ಯಯನ ನಡೆಸಲು ಭಾರತ ಈ ಯೋಜನೆ ಕೈಗೊಂಡಿದೆ. ಚಂದ್ರನ ದಕ್ಷಿಣ ಧ್ರುವ ತಲುಪುವುದು ಇಸ್ರೋ ಮೊದಲ ಗುರಿ, ಹೀಗಾಗಿ ಚಂದ್ರನ ದಕ್ಷಿಣ ಧ್ರುವ ತಲುಪೋದಕ್ಕೆ ಬಾಹ್ಯಾಕಾಶ ನೌಕೆಗೆ ಅಗತ್ಯವಿರುವ ನೂಕುಬಲ ನೀಡಲಾಗಿದೆ. ಹಾಗೇ ಪ್ರತಿ ಪ್ರಕ್ರಿಯೆಗಳಲ್ಲೂ ಇಸ್ರೋ ಯಶಸ್ವಿಯಾಗಿದೆ. ಇದಕ್ಕಿಂತಲೂ ಮಹತ್ವದ ಕೆಲಸ ಏನೆಂದರೆ ಚಂದ್ರನ ಮೇಲೆ ನೀರು ಹುಡುಕುವ ಕೆಲಸ. ಸಾವಿರಾರು ವರ್ಷದಿಂದ ಮಾನವನ ಕುತೂಹಲದ ಕೇಂದ್ರ ಚಂದ್ರ. ಇದೇ ಕಾರಣಕ್ಕೆ ಮಹತ್ವದ ಯೋಜನೆ ಕೈಗೆತ್ತಿಕೊಂಡಿತ್ತು ಭಾರತ.

ಇಂದು ಮಧ್ಯರಾತ್ರಿ ಮತ್ತೊಂದು ಅಮೋಘ ಸಮಯಕ್ಕೆ ಭಾರತೀಯ ಬಾಹ್ಯಾಕಾಶ ಲೋಕ ಸಜ್ಜಾಗಿದೆ. ಚಂದ್ರನಿಗೆ ಮತ್ತಷ್ಟು ಸಮೀಪ ತೆರಳಲು ಪ್ರಮುಖ ಪ್ರಕ್ರಿಯೆ ಜರುಗಲಿದೆ. ಆ ನಂತರ ಸಲೀಸಾಗಿ ಚಂದ್ರನ ಬಳಿ ತೆರಳಲಿರುವ 'ಚಂದ್ರಯಾನ-3' ನೌಕೆ ಆಗಸ್ಟ್ 23ರಂದು ಚಂದ್ರನ ಮೇಲೆ ರೋವರ್ ಲ್ಯಾಂಡ್ ಮಾಡಲಿದೆ. ಈ ಮೂಲಕ ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ಸುವರ್ಣಯುಗ ಆರಂಭವಾಗಲಿದೆ. ಇದಕ್ಕಾಗಿ ಇಸ್ರೋ ವಿಜ್ಞಾನಿಗಳ ಬಳಗ ಹಗಲು-ರಾತ್ರಿ ಲೆಕ್ಕಿಸದೆ ಕಾರ್ಯನಿರ್ವಹಿಸುತ್ತಿದೆ.












Click it and Unblock the Notifications