ಫೆ.19ಕ್ಕೆ ಶಿವರಾತ್ರಿ ನವ ಜೋತಿರ್ಲಿಂಗ ವಿಶೇಷ ಎಕ್ಸ್ ಪ್ರೆಸ್
ಚೆನ್ನೈ, ಜನವರಿ 08: ರಾಮಾಯಣ ಕಾಲದ ಪುರಾಣ ಪ್ರಸಿದ್ಧ ನಗರಗಳನ್ನು ಸಂಪರ್ಕಿಸುವ, ಶ್ರೀರಾಮಚಂದ್ರ ಸಾಗಿದ ಮಾರ್ಗದಲ್ಲಿ ಸಂಚರಿಸುವ ವಿಶೇಷ ರೈಲು ರಾಮಾಯಣ ಎಕ್ಸ್ ಪ್ರೆಸ್ ಸಂಚಾರಕ್ಕೆ ಚಾಲನೆ ನೀಡಿದ ಭಾರತೀಯ ರೈಲ್ವೆ ಈಗ ಮಹಾಶಿವರಾತ್ರಿಗಾಗಿ ವಿಶೇಷ ಎರಡು ರೈಲುಗಳನ್ನು ಪರಿಚಯಿಸುತ್ತಿದೆ.
ಎರಡು ಭಾರತ್ ದರ್ಶನ್ ವಿಶೇಷ ಪ್ರವಾಸಿ ರೈಲುಗಳು ತಿರುನೆಲ್ವೇಲಿಯಿಂದ ಚಲಿಸಲಿದೆ ಎಂದು ಐಆರ್ ಸಿಟಿಸಿ ಪ್ರಕಟಿಸಿದೆ. ಈ ಜೋತಿರ್ ಲಿಂಗ ವಿಶೇಷ ರೈಲು ಪ್ರಯಾಣದ ದರ 15,320 ರು ಪ್ರತಿ ವ್ಯಕ್ತಿಗೆ ಹಾಗೂ ರಾಮಾಯಣ ಯಾತ್ರಾ 15, 990ರು ವೆಚ್ಚವಾಗಲಿದೆ.
13 ದಿನಗಳ ಕಾಲ ಮಹಾಶಿವರಾತ್ರಿ ನವ ಜ್ಯೋತಿರ್ ಲಿಂಗ ವಿಶೇಷ ಎಕ್ಸ್ ಪ್ರೆಸ್ ಫೆಬ್ರವರಿ 19 ರಂದು ತಿರುನಲ್ವೇಲಿಯಿಂದ ಹೊರಡಲಿದೆ. 14 ದಿನಗಳ ರಾಮಾಯಣ ಯಾತ್ರಾ ವಿಶೇಷ ಎಕ್ಸ್ ಪ್ರೆಸ್ ಮಾರ್ಚ್ 05ರಂದು ಹೊರಡಲಿದೆ ಎಂದು ಐಆರ್ ಸಿಟಿಸಿ ದಕ್ಷಿಣ ವಲಯದ ಜಂಟಿ ಪ್ರಧಾನ ವ್ಯವಸ್ಥಾಪಕ ಪಿ ಸ್ಯಾಮ್ ಜೋಸೆಫ್ ಹೇಳಿದರು.

ರಾಮಾಯಣ ಯಾತ್ರೆ: ಮಧುರೈ, ಹಂಪಿ, ನಾಸಿಕ್, ಚಿತ್ರಕೂಟ ಧಮ್, ದರ್ಭಾಂಗ, ಸಿತಾಮರ್ಹಿ, ಜನಕ್ ಪುರಿ(ನೇಪಾಳ), ಅಯೋಧ್ಯಾ, ನಂದಿಗ್ರಾಮ, ಅಲಹಾಬಾದ್, ಶ್ರೀಂಗವೆರ್ ಪುರ್, ರಾಮೇಶ್ವರಂ, ದೇವಿಪಟ್ಟಣಂ, ತಿರುಪಳನಿ. ದೆಹಲಿಯ ಸಫ್ದರ್ಜಂಗ್ ರೈಲ್ವೆ ನಿಲ್ದಾಣ, ತಮಿಳುನಾಡಿನ ಮಧುರೈನಿಂದ ಏಕಕಾಲಕ್ಕೆ ಚಾಲನೆ ಸಿಗಲಿದೆ.
ಶ್ರೀ ರಾಮಾಯಣ ಯಾತ್ರಾ-ಶ್ರೀಲಂಕಾ ಯಾತ್ರೆ ವಿಶೇಷ ರೈಲಿನಲ್ಲಿ 800 ಮಂದಿ ಸಂಚರಿಸಬಹುದು. ದೆಹಲಿಯಿಂದ ಹೊರಟ ರೈಲು ಅಯೋಧ್ಯದಲ್ಲಿ ಮೊದಲಿಗೆ ತಲುಪಲಿದೆ. ಹನುಮನ್ ಗರ್ಹಿ ರಾಮ್ ಕೋಟ್ ಹಾಗೂ ಕನಕ್ ಭವನ್ ದೇಗುಲ ದರ್ಶಿಸಬಹುದು.
ಶ್ರೀಲಂಕಾದಿಂದ ಪ್ರಯಾಣಿಸುವವರಿಗೆ ಪ್ರತ್ಯೇಕ ಶುಲ್ಕ ಟಿಕೆಟ್ ಇರುತ್ತದೆ. ಶ್ರೀಲಂಕಾದಿಂದ ಪ್ರಯಾಣ ಆರಂಭಿಸಲು ಬಯಸುವವರು ಚೆನ್ನೈನಿಂದ ಕೊಲಂಬೋಗೆ ವಿಮಾನದಲ್ಲಿ ಪ್ರಯಾಣಿಸಿ ನಂತರ ರಾಮಾಯಣ ಯಾತ್ರಾ ಪ್ಯಾಕೇಜ್ ಪಡೆಯಬಹುದು.
ಇದಲ್ಲದೆ, ಪ್ರತಿ ಬುಧವಾರ ಶಿರಡಿಗೆ ಚೆನ್ನೈಯಿಂದ ವಿಶೇಷ ರೈಲು ಹೊರಡಲಿದೆ. 1999ರಿಂದ ಆರಂಭವಾದ ಭಾರತ್ ದರ್ಶನ್ ಪ್ರವಾಸಿ ರೈಲುಗಳು ಇಲ್ಲಿ ತನಕ 370 ವಿಶೇಷ ಪ್ಯಾಕೇಜ್ ರೈಲುಗಳನ್ನು ಕಂಡಿದೆ.












Click it and Unblock the Notifications