Haryana Results: ಬಿಜೆಪಿ-ಕಾಂಗ್ರೆಸ್ ಹಿಮ್ಮೆಟ್ಟಿಸಿದ ದೇಶದ ಶ್ರೀಮಂತ ಮಹಿಳೆ
ಬೆಂಗಳೂರು, ಅಕ್ಟೋಬರ್ 08: ದೇಶದ ಅತ್ಯಂತ ಶ್ರೀಮಂತೆ ಬಿಜೆಪಿ ಹಾಲಿ ಸಂಸದರೊಬ್ಬರ ತಾಯಿ ಸಾವಿತ್ರಿ ಜಿಂದಾಲ್ ಅವರು ಹರಿಯಾಣ ವಿಧಾನಸಭಾ ಚುನಾವಣೆ 2024ಯಲ್ಲಿ ಹಿಸಾರ್ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧಿಸಿ ಭರ್ಜರಿ ಜಯ ಗಳಿಸಿದ್ದಾರೆ. ಈ ಮೂಲಕ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಕ್ಕೆ ಸೋಲಿನ ಪೆಟ್ಟು ಕೊಟ್ಟಿದ್ದಾರೆ.
ಹಿಸಾರ್ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿದ್ದ 74 ವರ್ಷದ ಸಾವಿತ್ರಿ ಜಿಂದಾಲ್ ಅವರನ್ನು ಮತದಾರರು ಕೈ ಬಿಟ್ಟಿಲ್ಲ. ಅವರು ಒಟ್ಟು 49231 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ರಾಮ್ ನಿವಾಸ್ ರಾರಾ ಅವರನ್ನು ಸೋಲಿಸಿದ್ದಾರೆ. ಒಟ್ಟು 18921 ಮತಗಳನ್ನು ಪಡೆಯುವ ಮೂಲಕ ಅವರು ಎದುರಾಳಿ ಎರಡು ಪಕ್ಷದ ಅಭ್ಯರ್ಥಿಗಳಿಗೆ ಮಣ್ಣು ಮುಕ್ಕಿಸಿದ್ದಾರೆ.

ಒತ್ತಾಯದ ಮೇರೆಗೆ ಪಕ್ಷೇತರ ಸ್ಪರ್ಧೆ, ಗೆಲುವು
ಈ ಹಿಂದೆ ಅವರು ಇದೆ ಹಿಸಾರ್ ಕ್ಷೇತ್ರದಿಂದಲೇ ಎರಡು ಬಾರಿ ಅವರು ಶಾಸಕರಾಗಿ ಆಯ್ಕೆ ಆಗಿದ್ದಾರೆ. ಬಿಜೆಪಿ ಸೇರಿದ ಬಳಿಕ ಅವರು ಮತ್ತೆ ಟಿಕೆಟ್ ಬಯಸಿದ್ದರು. ಆದರೆ ಬಿಜೆಪಿಯು ಅವರಿಗೆ ಟಿಕೆಟ್ ನೀಡದೇ ಹಾಲಿ ಶಾಸಕ ಕಮಲ್ ಗುಪ್ತಾ ಅವರಿಗೆ ಸ್ಪರ್ಧೆಗೆ ಅವಕಾಶ ನೀಡಿತ್ತು. ಆದರೂ ಅವರು ಕಾಂಗ್ರೆಸ್ನತ್ತ ಮುಖ ಮಾಡದೇ ಆಪ್ತರು, ಜನರ ಒತ್ತಾಯದ ಮೇರೆಗೆ ಪಕ್ಷೇತರವಾಗಿ ಸ್ಪರ್ಧಿಸಿ ಇಂದು ಗೆಲುವಿನ ನಗೆ ಬೀರಿದ್ದಾರೆ.
ಅವರು ಪಕ್ಷೇತರ ಸ್ಪರ್ಧಿಸುತ್ತಿದ್ದಂತೆ ಅನೇಕರು ಅವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದರು. ಅವರು ಗೆದ್ದರೆ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ. ಅವರು ಬಿಜೆಪಿಯ ಬಿ- ಟೀಮ್ ಎಂದೆಲ್ಲ ಹಿಯಾಳಿಸಿದ್ದರು. ಇದೆಲ್ಲ ಆರೋಪ, ಅಂದಾಜುಗಳನ್ನು ತಳ್ಳಿ ಹಾಕಿದ ಅವರು, ನಾನು ಬಿಜೆಪಿ ಸೇರಲ್ಲ, ಶಾಸಕಿಯಾಗಿದ್ದುಕೊಂಡು ಜನರ ಅಭಿವೃದ್ಧಿ ಮಾಡುತ್ತೇನೆ ಎಂದು ತಿಳಿಸಿದ್ದರು.
ಬಿಜೆಪಿ ಸೇರುತ್ತಾರಾ ಸಾವಿತ್ರಿ ಜಿಂದಾಲ್?
ಇದೀಗ ಅವರು ಅಂದುಕೊಂಡಂತೆ ಚುನಾವಣೆಯಲ್ಲಿ ಗೆದಿದ್ದಾರೆ. ಇತ್ತ ಬಿಜೆಪಿಯು ತಮ್ಮ ಪಕ್ಷದೊಂದಿಗೆ ಸೇರ್ಪಡೆಗೆ ಆಹ್ವಾನ ನೀಡುವ ಸಾಧ್ಯತೆ ಇದೆ. ಸದ್ಯ ಈ ಕುರಿತು ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ.
ಪೋರ್ಬ್ಸ್ ಪಟ್ಟಿಯ ಪ್ರಕಾರ, ಉದ್ಯಮಿ ಓಂ ಪ್ರಕಾಶ್ ಜಿಂದಾಲ್ ಪತ್ನಿ ಸಾವಿತ್ರಿ ಜಿಂದಾಲ್ ಅವರು ಭಾರತದಲ್ಲಿಯೇ ಅತ್ಯಂತ ಶ್ರೀಮಂತ ಮಹಿಳೆ ಎಂದು ತಿಳಿಸಲಾಗಿದೆ. ಒಂದಷ್ಟು ರಾಜಕೀಯ ಅನುಭವ ಹೊಂದಿರುವ ಇವರು ಪತಿ ಪ್ರತಿನಿಧಿಸಿದ್ದ ಕ್ಷೇತ್ರವನ್ನೆ ಪ್ರತಿನಿಧಿಸುತ್ತಾರೆ ಬಂದಿದ್ದಾರೆ.
ಹರಿಯಾಣದಲ್ಲಿ ಒಟ್ಟು 90 ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಅಕ್ಟೋಬರ್ 5ರಂದು ಮತದಾನ ನಡೆದಿತ್ತು. ಇದೀಗ ಚುನಾವಣೆ ಆಯೋಗದಿಂದ ಅಧಿಕೃತ ಮಾಹಿತಿ ಹೊರಬಿದಿದೆ. ಅದರಲ್ಲಿ ಸಾವಿತ್ರಿ ಜಿಂದಾಲ್ ಗೆಲುವನ್ನು ಆಯೋಗ ಖಚಿತಪಡಿಸಿದೆ.
ಗೆಲುವಿನ ಬಗ್ಗೆ ಸಾವಿತ್ರಿ ಜಿಂದಾಲ್ ಪ್ರತಿಕ್ರಿಯೆ
ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿರುವ ಸಾವಿತ್ರಿ ಜಿಂದಾಲ್ ಅವರು ಸುದ್ದಿಸಂಸ್ಥೆ ಪಿಟಿಐಗೆ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಕುಟುಂಬದ ಸದಸ್ಯರು ಅಥವಾ ನಾನು ಸ್ಪರ್ಧಿಸಬೇಕೆಂದು ಹಿಸಾರ್ನ ಜನರು ಬಯಸಿದ್ದರು. ನನಗೆ ಗೆಲುವು ತಂದುಕೊಟ್ಟ ಮತದಾರರ ಧ್ವನಿಯಾಗಿ ವಿಧಾನಸಭೆಯಲ್ಲಿ ಕೆಲಸ ಮಾಡಲಿದ್ದೇನೆ ಎಂದು ಸಾವಿತ್ರಿ ಜಿಂದಾಲ್ ಹೇಳಿಕೆ ನೀಡಿದ್ದಾರೆ.












Click it and Unblock the Notifications