ಚಂಡಮಾರುತ ದುರ್ಬಲವಾದರೂ ಈ ರಾಜ್ಯಗಳಲ್ಲಿ ಅ.3ರವರೆಗೂ ಭಾರೀ ಮಳೆ
ನವದೆಹಲಿ, ಸೆಪ್ಟೆಂಬರ್ 29: ಕಳೆದ ಶನಿವಾರ ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾದ ಗುಲಾಬ್ ಚಂಡಮಾರುತ ಮಹಾರಾಷ್ಟ್ರಕ್ಕೆ ಅಪ್ಪಳಿಸಿದ ನಂತರ ಬುಧವಾರ ಕ್ರಮೇಣ ದುರ್ಬಲಗೊಳ್ಳಲಿದೆ. ಇದಾಗ್ಯೂ ಚಂಡಮಾರುತದ ಪ್ರಭಾವದಿಂದ ಅಕ್ಟೋಬರ್ 3ರವರೆಗೂ ಕೆಲವು ರಾಜ್ಯಗಳಲ್ಲಿ ಭಾರೀ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ವಾಯವ್ಯ ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತದ ಪ್ರಭಾವ ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ ಮುಂದುವರೆದಿದೆ. ಪೂರ್ವ ಮೇದಿನಿಪುರ, ಪಶ್ಚಿಮ ಮೇದಿನಿಪುರ ಹಾಗೂ ಸೌತ್ 24 ಪರಗಣ ಒಳಗೊಂಡಂತೆ ದಕ್ಷಿಣ ಬಂಗಾಳದಲ್ಲಿ ಭಾರೀ ಮಳೆ ಎಚ್ಚರಿಕೆಯ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಹವಾಮಾನ ಇಲಾಖೆ ಬುಲೆಟಿನ್ ಪ್ರಕಾರ, ವಿದರ್ಭಾ ಮೇಲಿನ ಚಂಡಮಾರುತ ಪ್ರಭಾವ ಬುಧವಾರ ತಗ್ಗಲಿದ್ದು, ಮಾರುತಗಳು ವಾಯವ್ಯ ದಿಕ್ಕಿಗೆ ಚಲಿಸುತ್ತವೆ ಮತ್ತು ಮುಂದಿನ 24 ಗಂಟೆಗಳಲ್ಲಿ ಕ್ರಮೇಣ ದುರ್ಬಲಗೊಳ್ಳುತ್ತವೆ. ಮುಂದೆ ಓದಿ...

ಗುರುವಾರ ಅಪ್ಪಳಿಸಲಿದೆ 'ಶಾಹೀನ್' ಚಂಡಮಾರುತ
ಅಪರೂಪದ ಹವಾಮಾನ ಬದಲಾವಣೆಯಲ್ಲಿ, ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾದ ಗುಲಾಬ್ ಚಂಡಮಾರುತ ಗುರುವಾರದ ವೇಳೆಗೆ 'ಶಾಹೀನ್' ಚಂಡಮಾರುತವಾಗಿ ಮರುಹುಟ್ಟು ಪಡೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಗುಲಾಬ್ ಚಂಡಮಾರುತ ದುರ್ಬಲವಾದ ಬೆನ್ನಲ್ಲೇ ಸೆ.30ರಂದು ದೇಶದ ಕರಾವಳಿಗೆ ಮತ್ತೊಂದು ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದ್ದು, ಈ ಚಂಡಮಾರುತಕ್ಕೆ 'ಶಾಹೀನ್' ಎಂಬ ಹೆಸರು ನೀಡಲಾಗಿದೆ.

ಮಹಾರಾಷ್ಟ್ರದಲ್ಲಿ 'ಗುಲಾಬ್' ಆರ್ಭಟ
ಅರಬ್ಬೀ ಸಮುದ್ರ ಹಾಗೂ ನೆರೆಯ ಗುಜರಾತ್ ಕರಾವಳಿ ಪ್ರದೇಶಗಳಲ್ಲಿ ಸೆಪ್ಟೆಂಬರ್ 30ರ ವೇಳೆಗೆ ಶಾಹೀನ್ ಚಂಡಮಾರುತ ಸೃಷ್ಟಿಯಾಗಲಿದೆ ಎಂದು ಇಲಾಖೆ ತಿಳಿಸಿದೆ. ಒಡಿಶಾ, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳದಲ್ಲಿ ಆರ್ಭಟಿಸಿದ್ದ ಗುಲಾಬ್ ಚಂಡಮಾರುತ, ಮಹಾರಾಷ್ಟ್ರ ಮತ್ತು ಗುಜರಾತ್ ಕರಾವಳಿ ತೀರಕ್ಕೆ ಹೋಗುತ್ತಿದ್ದಂತೆ ದುರ್ಬಲಗೊಳ್ಳಲಿದೆ. ಸೆ.30ರಂದು ಮತ್ತೆ ಪ್ರಬಲ ಚಂಡಮಾರುತವಾಗಿ ಮರುಹುಟ್ಟು ಪಡೆಯಲಿದೆ. ಇದರ ಪ್ರಭಾವದಲ್ಲಿ ದೇಶದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಸೂಚನೆ ನೀಡಿದೆ.
ಗುಲಾಬ್ ಚಂಡಮಾರುತ ಪ್ರಭಾವದಿಂದ ಮಹಾರಾಷ್ಟ್ರದಲ್ಲಿ 17 ಮಂದಿ ಸಾವನ್ನಪ್ಪಿರುವ ವರದಿಯಾಗಿದೆ.

ಸೆಪ್ಟೆಂಬರ್ 30ರಿಂದ ಮಳೆ ಹೆಚ್ಚು
ಗುಜರಾತ್ನಲ್ಲಿ ಸೆಪ್ಟೆಂಬರ್ 29ರಂದು ಭಾರೀ ಮಳೆಯಾಗಲಿದೆ. ಪಶ್ಚಿಮ ಬಂಗಾಳ, ಒಡಿಶಾ, ಜಾರ್ಖಂಡ್, ಉತ್ತರ-ಮಧ್ಯ ಮಹಾರಾಷ್ಟ್ರ ಹಾಗೂ ಕೊಂಕಣದಲ್ಲಿ ಕೂಡ ಬುಧವಾರ ಅಧಿಕ ಮಳೆಯಾಗಲಿದೆ. ಸೆಪ್ಟೆಂಬರ್ 29ರಂದು ಆರಂಭವಾಗಿ ಮಹಾರಾಷ್ಟ್ರದಲ್ಲಿ ಅಧಿಕ ಮಳೆ ಬೀಳಲಿದೆ. ಸೌರಾಷ್ಟ್ರ, ಕಚ್, ಗುಜರಾತ್, ಒಡಿಶಾ, ಪಶ್ಚಿಮ ಬಂಗಾಳದಲ್ಲಿ ಸೆಪ್ಟೆಂಬರ್ 30ರಿಂದ ಮತ್ತೆ ಮಳೆ ಬಿರುಸುಪಡೆಯಲಿದೆ ಎಂದು ತಿಳಿಸಿದೆ.
ದಮನ್, ಡಿಯು, ದಾದ್ರಾ, ನಗರ್ ಹವೇಲಿಯಲ್ಲಿ ಅಧಿಕ ಮಳೆಯಾಗುವ ಸಾಧ್ಯತೆಯಿರುವುದಾಗಿ ತಿಳಿಸಿದೆ.
ಗುಜರಾತ್ನ ಅಮ್ರೇಲಿ, ಭಾವನಗರ, ರಾಜ್ಕೋಟ್, ಜಮ್ನಾಗರ, ಆನಂದ, ಭರೂಚ್ ಪ್ರದೇಶಗಳಲ್ಲಿ ಮುಂದಿನ ಎರಡು ದಿನಗಳಲ್ಲಿ ಭಾರೀ ಮಳೆಯಾಗಲಿರುವುದಾಗಿ ತಿಳಿಸಿದೆ.

ಅಕ್ಟೋಬರ್ 3ರವರೆಗೂ ಮಳೆ ಮುಂದುವರಿಕೆ
ಚಂಡಮಾರುತ ಪ್ರಭಾವದಿಂದಾಗಿ ಅಕ್ಟೋಬರ್ 3ರವರೆಗೂ ಕೆಲವು ರಾಜ್ಯಗಳಲ್ಲಿ ಮಳೆ ಮುಂದುವರೆಯುವುದಾಗಿ ತಿಳಿಸಿದೆ. ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ಸೆಪ್ಟೆಂಬರ್ 30ರಿಂದ ಆರಂಭಗೊಂಡು ಅಕ್ಟೋಬರ್ 2ರವರೆಗೂ ಅಧಿಕ ಮಳೆಯಾಗಲಿದೆ ಎಂದು ತಿಳಿಸಿದೆ. ಗುರುವಾರದಿಂದ ಆರಂಭಗೊಂಡು ಭಾನುವಾರದವರೆಗೂ ಬಿಹಾರದಲ್ಲಿ ಕೂಡ ಭಾರಿ ಮಳೆಯಾಗಲಿದೆ. ಅಕ್ಟೋಬರ್ 1 ಹಾಗೂ 2ರಂದು ಹೆಚ್ಚಿನ ಮಳೆಯಾಗುವ ಸಾಧ್ಯತೆಯಿರುವುದಾಗಿ ತಿಳಿಸಿದೆ.
ಗುಜರಾತ್ನಲ್ಲಿ ಈಗಾಗಲೇ ವಾರ್ಷಿಕವಾಗಿ ವಾಡಿಕೆಯಲ್ಲಿ 90% ಮಳೆಯನ್ನು ಪಡೆದುಕೊಂಡಿದೆ. ಮಳೆ ಪ್ರಮಾಣ ಅಧಿಕವಾಗಲಿದೆ ಎಂದು ಹೇಳಿದೆ.












Click it and Unblock the Notifications