ಗಣಿಗಾರಿಕೆ ಲಂಚ: ಮಾಜಿ ಸಿಎಂ ಮೇಲೆ ಎಫ್ಐಆರ್
ಪಣಜಿ, ಜು.5: ಗಣಿಗಾರಿಕೆ ಗುತ್ತಿಗೆಗಾಗಿ ಪರವಾನಿಗೆ ನೀಡಲು 6 ಕೋಟಿ ರು ಲಂಚ ಸ್ವೀಕರಿಸಿದ್ದ ಆರೋಪದ ಮೇಲೆ ಗೋವಾದ ಮಾಜಿ ಮುಖ್ಯಮಂತ್ರಿ ಪ್ರತಾಪ್ ಸಿಂಗ್ ರಾಣೆ ಹಾಗೂ ಅವರ ಪುತ್ರ ಪ್ರಸ್ತುತ ರಾಜ್ಯದ ಶಾಸಕ ವಿಶ್ವಜಿತ್ನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಎಫ್ಐಆರ್ ಹಾಕಲಾಗಿದೆ.
ಮೂರು ವರ್ಷಗಳ ಹಿಂದೆ ಲಂಚ ಸ್ವೀಕರಿಸಿದ್ದ ಆರೋಪದಲ್ಲಿ ರಾಣೆ ಹಾಗೂ ಪುತ್ರನ ವಿರುದ್ಧ ಎಸ್ಐಟಿ ಪ್ರಕರಣ ದಾಖಲಿಸಿಕೊಂಡಿದೆ.ವಿಚಾರಣೆಗಾಗಿ ಏಜೆನ್ಸಿ ಇಬ್ಬರಿಗೂ ಸಮನ್ಸ್ ಜಾರಿಗೊಳಿಸುವ ಸಾಧ್ಯತೆ ಇದೆ. ಇದೀಗ ರಾಣೆ ಗೋವಾ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದಾರೆ.
ರಾಣೆ ಹಾಗೂ ವಿಶ್ವಜಿತ್ ಲಂಚ ಸ್ವೀಕರಿಸಿದ್ದಾಗಿ ದಾಹೇಜ್ ಮಿನರಲ್ಸ್ನ ಅಧ್ಯಕ್ಷ ಬಾಲ್ಚಂದ್ರ ನಾಯ್ಕ್ ಆರೋಪಿಸಿದ್ದರು. ಆದರೆ ಆರೋಪವನ್ನು ರಾಣೆ ತಳ್ಳಿಹಾಕಿದ್ದು, ನಾಯ್ಕನನ್ನು ತಾನು ಭೇಟಿ ಮಾಡಿರಲೇ ಇಲ್ಲ ಎಂದಿದ್ದಾರೆ.

ಸದ್ಯಕ್ಕೆ ನಾವು ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆ ಸಂಗ್ರಹಣೆಯಲ್ಲಿ ತೊಡಗಿದ್ದೇವೆ.ಆರೋಪಿಗಳ ಮೇಲೆ ಎಫ್ಐಆರ್ ದಾಖಲಿಸಲಾಗಿದೆ ತನಿಖೆ ಮುಂದುವರೆದಿದೆ ಎಂದು ವಿಶೇಷ ತನಿಖಾ ದಳದ ಡಿಐಜಿ ಆಫ್ ಪೊಲೀಸ್ ಕೆಕೆ ವ್ಯಾಸ್ ಅವರು ಪಿಟಿಐಗೆ ಹೇಳಿದ್ದಾರೆ.
ಆರೋಪಿಗಳ ವಿಚಾರಣೆ ನಡೆಸಲು ಸ್ಪೀಕರ್ ಅವರ ಅನುಮತಿ ಕೇಳಲಾಗಿದ್ದು, ಅನುಮತಿ ಸಿಕ್ಕ ಮೇಲೆ ವಿಚಾರಣೆ ಕೈಗೊಳ್ಳುವ ಸಾಧ್ಯತೆಯಿದೆ. ಮಾಜಿ ಮುಖ್ಯಮಂತ್ರಿ ರಾಣೆ ಅವರ ಮೇಲೆ ಐಪಿಸಿ ಸೆಕ್ಷನ್ 384,120 ಬಿ, ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೆಕ್ಷನ್ 13(1) (d) ಹಾಗೂ 13(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.












Click it and Unblock the Notifications