ಮೇವು ಹಗರಣ: ಜೈಲಲ್ಲಿ ಸಗಣಿ ಎತ್ತಲಿರುವ ಲಾಲೂಪ್ರಸಾದ್
ರಾಂಚಿ (ಬಿಹಾರ), ಸೆ. 30: ಮೇವು ಹಗರಣಕ್ಕೆ ಸಂಬಂಧಿಸಿದಂತೆ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಸೇರಿದಂತೆ ಒಟ್ಟು 45 ಮಂದಿಯನ್ನು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಪ್ರವಾಸ್ ಕುಮಾರ್ ಸಿಂಗ್ ಅವರು ಇಂದು ಶಿಕ್ಷೆಗೆ ಗುರಿಪಡಿಸಿದ್ದಾರೆ. ಸದ್ಯಕ್ಕೆ ಲಾಲೂ ಬಿರ್ಸಾ ಮುಂಡಾ ಜೈಲಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಸದ್ಯಕ್ಕೆ ಕೋರ್ಟ್ ಬಂಧನದಲ್ಲಿರುವ 65 ವರ್ಷದ ಲಾಲು ಸೇರಿದಂತೆ ಎಲ್ಲ 45 ಮಂದಿ ತಪ್ಪಿತಸ್ಥರಿಗೆ ಇದೇ ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಲಾಗುವುದು. 7 ಮಂದಿಗೆ ಇಂದು ಜಾಮೀನು ದೊರೆತಿದೆ. ಆದರೆ ಲಾಲೂ ಮತ್ತು ಮತ್ತೊಬ್ಬ ಮಾಜಿ ಸಿಎಂ ಮಿಶ್ರಾ ಸೇರಿದಂತೆ 38 ಮಂದಿಗೆ ಶಿಕ್ಷೆಯಾಗುವುದು ಖಚಿತ.
ಪ್ರಕಟರಣ ಬೆಳಕಿಗೆ ಬಂದಿದ್ದೇ 17 ವರ್ಷಗಳ ಹಿಂದೆ. ಅದಕ್ಕೂ ಮುನ್ನ ಐದಾರು ವರ್ಷ ಕಾಲ ಈ ಅಕ್ರಮ ಸಾಂಗೋಪಾಂಗವಾಗಿ ನಡೆದುಬಂದಿತ್ತು. ಅಕ್ರಮದ ಪ್ರಮಾಣ 900 ಕೋಟಿ ರೂ ಮೊತ್ತದ್ದು. ಗಮನಿಸಿ ಇದು 20 ವರ್ಷಗಳ ಹಿಂದಿನ ಮೊತ್ತ. ಇಂದಿನ ಮೌಲ್ಯ ಎಷ್ಟಾಗಬಹುದೋ ನೀವೇ ಲೆಕ್ಕಹಾಕಿ.
ಇಂದಿನ ಮಹತ್ವದ ತೀರ್ಪಿನ ಬಗ್ಗೆ ಯಾರು ಏನಂದೆರು? ಮಹತ್ವದ ವಿಷಯಗಳೇನು? ಒಂದು ನೋಟ:

ಆಸ್ಪತ್ರೆಯಲ್ಲಿರುವ ಜಗನ್ನಾಥ್ ಮಿಶ್ರಾ
ಪಾಟ್ನಾ: ಬಿಹಾರದ ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಮಿಶ್ರಾ (76) ಮೆದುಳು ಪಾರ್ಶ್ವ ವಾಯುಗೆ (Brain stroke) ಗುರಿಯಾಗಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ಕು ದಿನಗಳ ಹಿಂದೆ ಬ್ರೈನ್ಸ್ಟ್ರೋಕ್ಗೆ ಗುರಿಯಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್ಕುಮಾರ್ ಇಂದು ಆಸ್ಪತ್ರೆಗೆ ಭೇಟಿ ನೀಡಿ ಹಿರಿಯ ರಾಜಕಾರಣಿಯ ಯೋಗಕ್ಷೇಮ ವಿಚಾರಿಸಿದರು. ಮೂರು ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ, ಒಮ್ಮೆ ಕೇಂದ್ರ ಸಚಿವರಾಗಿದ್ದ ಮಿಶ್ರಾ ನಂತರ ಕಾಂಗ್ರೆಸ್ ಬಿಟ್ಟು ಎನ್ಸಿಪಿ ಸೇರಿದ್ದರು. ಈಗ ಹಾಲಿ ಜೆಡಿಯುನಲ್ಲಿದ್ದಾರೆ.

CBI lawyer Arvind Kumar Singh
ಇಂದು ಜಾಮೀನು ಪಡೆದಿರುವ 7 ಮಂದಿಗೆ 3 ವರ್ಷಕ್ಕಿಂತ ಕಡಿಮೆ ಶಿಕ್ಷೆಯಾಗಲಿದೆ. ಲಾಲೂ ಸೇರಿದಂತೆ ಉಳಿದವರಿಗೆ ಕನಿಷ್ಠ 4 ವರ್ಷಕ್ಕಿಂತ ಹೆಚ್ಚು ಶಿಕ್ಷೆಯಾಗುವುದು ಖಚಿತ- CBI lawyer Arvind Kumar Singh.

ನಿರಾಶೆಗೊಂಡಿದ್ದೇನೆ-ಲಾಲೂ ಪ್ರಸಾದ್
'ತೀರ್ಪು ಕೇಳಿ ನಿರಾಶೆಗೊಂಡಿದ್ದೇನೆ. ಆದರೆ ಹತಾಶನಾಗಿಲ್ಲ. ಮುಂದೆ ಮೇಲ್ಮನವಿ ಸಲ್ಲಿಸುವೆ' ಎಂದಿದ್ದಾರೆ ಲಾಲೂ ಪ್ರಸಾದ್.

ಜೈಲಿನಲ್ಲಿ ಸಗಣಿ ಹಾಕಲಿರುವ ಲಾಲೂಜೀ
ಆದರೆ ಗಮನಿಸಿ, ಲಾಲೂ ಪ್ರಸಾದ್ ಈ ಹಿಂದೆ ವಿಚಾರಣೆ ಹಂತದಲ್ಲೇ ಹೈಕೋರ್ಟ್, ಸುಪ್ರೀಂಕೋರ್ಟಿಗೆಲ್ಲ ಮೇಲ್ಮನವಿ ಮಾಡಿಕೊಂಡಿದ್ದರು. ಆ ಕೋರ್ಟುಗಳು ಲಾಲೂರನ್ನು ಗದರಿಕೊಂಡು ತೆಪ್ಪಗೆ ವಿಚಾರಣೆಗೆ ಹಾಜರಾಗಿ ಎಂದು ಖಡಕ್ಕಾಗಿ ಹೇಳಿತ್ತು. ಹಾಗಾಗಿ ಇನ್ನು ಲಾಲು ಮತ್ತೆ ಮೇಲ್ಮನವಿ ಪ್ರಸ್ತಾಪ ಕೈಬಿಡುತ್ತಾರಾ ಕಾದು ನೊಡಬೇಕು.

ಸಿಬಿಐ ಜಡ್ಜ್ ಅನ್ನೇ ವಕ್ಕಲೆಬ್ಬಿಸುವ ಪ್ರಯತ್ನ
ಮಜಾ ಅಂದರೆ ಪಶುಗಳಂತೆ ಮೇವು ತಿಂದಿದ್ದ ಈ ಲಾಲೂ ಎಂಬ ಪುಣ್ಯಾತ್ಮ ಮೇಲ್ಮನವಿಗಳಿಗೆ ಕ್ಯಾರೆ ಅನ್ನದಿದ್ದಾಗ ಸಿಬಿಐ ಜಡ್ಜ್ ಅನ್ನೇ ವಕ್ಕಲೆಬ್ಬಿಸುವ ಪ್ರಯತ್ನವನ್ನೂ ಕೈಗೊಂಡಿದ್ದರು. ಅಂದಹಾಗೆ ನ್ಯಾಯಾಧೀಶರಾದ ಪ್ರವಾಸ್ ಕುಮಾರ್ ಸಿಂಗ್ ಅವರು ಬಿಹಾರದ ಹಾಲಿ ಸಚಿವರೊಬ್ಬರ ಸಂಬಂಧಿ.

ಆಡಳಿತಾರೂಢ JDUನ ಇಬ್ಬರು ಶಾಸಕರೂ
45 ಮಂದಿ ತಪ್ಪಿತಸ್ಥರ ಪೈಕಿ ಬಿಹಾರದ ಆಡಳಿತಾರೂಢ ಸಂಯುಕ್ತ ಜನತಾದಳದ ಇಬ್ಬರು ಶಾಸಕರೂ ಸೇರಿದಂತೆ 7 ಮಂದಿ ರಾಜಕಾರಣಿಗಳು ಇದ್ದಾರೆ. ಉಳಿದವರೆಲ್ಲಾ ಸರಕಾರಿ ಅಧಿಕಾರಿಗಳು.

Rajiv Pratap Rudy, ಬಿಜೆಪಿ ರಾಜಸಭಾ ಸದಸ್ಯ
ಲಾಲೂ ಪ್ರಸಾದ್ ಯಾದವ್ ವಿರುದ್ಧದ ಕೋರ್ಟ್ ತೀರ್ಪು ವಿಳಂಬವಾದರೂ ಸ್ವಾಗತಾರ್ಹ. ಇದು ಬಿಹಾರಕ್ಕೆ ಅರ್ಹ ನ್ಯಾಯ ಸಂದ ದಿನ. ಸುಗ್ರೀವಾಜ್ಞೆಯಿಂದ ಬಚಾವಾಗಲು ಲಾಲೂ ಕೊನೆಯ ಹಂತದಲ್ಲಿ ವಿಫಲ ಯತ್ನ ನಡೆಸಿದ್ದರು. - Rajiv Pratap Rudy, ಬಿಜೆಪಿ ರಾಜಸಭಾ ಸದಸ್ಯ.

ವಿಷಾದಿಸುವೆ- ದಿಗ್ವಿಜಯ್ ಸಿಂಗ್
ಲಾಲೂ ದೋಷಿಯಾಗಿರುವುದು ವಿಷಾದನೀಯ. ಇನ್ನೂ ಉಚ್ಛ ನ್ಯಾಯಾಲಯಗಳು ಇವೆ. ಮೇಲ್ಮನವಿ ಸಲ್ಲಿಸುತ್ತಾರೆ. ಅವರು ನಿರ್ದೋಷಿ ಎಂದು ಸಾಬೀರುಪಡಿಸುವುದು ಖಚಿತ- ಕಾಂಗ್ರೆಸ್ ವಕ್ತಾರ ದಿಗ್ವಿಜಯ್ ಸಿಂಗ್

ಲಾಲೂ ಬಚಾವಾಗಿಬಿಡುತ್ತಿದ್ದರು!
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಿಹಾರದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಬಿತ್ತು. ಲಾಲೂಗಂತೂ ಮಾಡಿದ್ದುಣ್ಣೋ ಮಹಾರಾಯ. ಅಂದಿನ ಸಿಬಿಐ ಅಧಿಕಾರಿ ಯುಎನ್ ಬಿಸ್ವಾಸ್ ಅವರಿಗೆ ನಮ್ಮ ಸಂಪೂರ್ಣ ಕೃತಜ್ಞತೆಗಳು ಮತ್ತು ಅಭಿನಂದನೆಗಳು. ಅಂದು ಅವರು ಕೇಸನ್ನು ಖಡಕ್ಕಾಗಿ ಸಲ್ಲಿಸದೇ ಹೋಗಿದ್ದರೆ ಇಂದು ಲಾಲೂ ಬಚಾವಾಗಿಬಿಡುತ್ತಿದ್ದರು - ಬಿಹಾರ ಬಿಜೆಪಿ ಅಧ್ಯಕ್ಷ ಸುಶೀಲ್ ಮೋದಿ.












Click it and Unblock the Notifications