ಬದಲಾವಣೆ ಮಾಡದಿರಲು ಕೃಷಿ ಕಾಯ್ದೆ ಧಾರ್ಮಿಕ ಗ್ರಂಥವೇ?; ಅಬ್ದುಲ್ಲಾ
ನವದೆಹಲಿ, ಫೆಬ್ರುವರಿ 10: ಕೇಂದ್ರ ಸರ್ಕಾರ ಪರಿಚಯಿಸಿರುವ ಮೂರು ಕೃಷಿ ಕಾಯ್ದೆಗಳು, ಬದಲಾವಣೆ ಮಾಡಲು ಸಾಧ್ಯವಾಗದ ಧಾರ್ಮಿಕ ಗ್ರಂಥಗಳೇನಲ್ಲ ಎಂದಿರುವ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ಹೋರಾಟ ನಡೆಸುತ್ತಿರುವ ರೈತರೊಂದಿಗೆ ಮಾತುಕತೆ ನಡೆಸಿ, ಸರ್ಕಾರ ಶೀಘ್ರವೇ ಒಂದು ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಮಂಗಳವಾರ ಲೋಕಸಭೆಯಲ್ಲಿ ದೆಹಲಿಯಲ್ಲಿ ರೈತರ ಪ್ರತಿಭಟನೆ ಕುರಿತು ಪ್ರಸ್ತಾಪ ಮಾಡಿದ ಅವರು, "ರೈತರ ಕುರಿತು ನಾನು ಈ ಮನವಿ ಮಾಡುತ್ತಿದ್ದೇನೆ. ನೀವು ಪರಿಚಯಿಸಿರುವ ಈ ಕೃಷಿ ಕಾಯ್ದೆಗಳು ಬದಲಾವಣೆಯನ್ನೇ ಮಾಡಲು ಸಾಧ್ಯವಾಗದ ಧಾರ್ಮಿಕ ಗ್ರಂಥಗಳಲ್ಲ. ಬದಲಾವಣೆ ಮಾಡಬಾರದು ಎಂದೇನೂ ಇಲ್ಲ. ನಾವು ಕಾನೂನನ್ನು ರೂಪಿಸಿದ್ದೇವೆ. ರೈತರಿಗೆ ಅದು ಬೇಡವೆಂದರೆ, ಅವರೊಂದಿಗೆ ಏಕೆ ನೀವು ಸೂಕ್ತ ರೀತಿ ಮಾತನಾಡುತ್ತಿಲ್ಲ?" ಎಂದು ಪ್ರಶ್ನಿಸಿದ್ದಾರೆ.
"ನಿಮ್ಮ ಮುಂದೆ ಕೈಕಟ್ಟಿ ಕೇಳಿಕೊಳ್ಳುತ್ತೇನೆ. ನಮ್ಮ ಪ್ರತಿಷ್ಠೆ ಮೇಲೆ ನಾವು ನಿಲ್ಲಬಾರದು. ಇದು ನಮ್ಮ ದೇಶ. ಈ ದೇಶಕ್ಕೆ ನಾವೆಲ್ಲರೂ ಸೇರಿದ್ದೇವೆ. ನಾವು ಈ ದೇಶದಲ್ಲಿದ್ದ ಮೇಲೆ ಇಲ್ಲಿರುವ ಎಲ್ಲರನ್ನೂ ಗೌರವಿಸುವುದು ನಮ್ಮ ಕರ್ತವ್ಯ. ಹೀಗಾಗಿ ಒಂದು ಪರಿಹಾರ ಕಂಡುಕೊಳ್ಳಿ" ಎಂದು ಮನವಿ ಮಾಡಿದ್ದಾರೆ.

ಶ್ರೀರಾಮನ ಕುರಿತು ಮಾತನಾಡಿದ ಅವರು, "ಶ್ರೀರಾಮ ಎಲ್ಲರಿಗೂ ಸೇರಿದವನು. ಕುರಾನ್ ಕೂಡ ಎಲ್ಲರಿಗೂ ಸೇರಿದ್ದು" ಎಂದು ಪುನರುಚ್ಚರಿಸಿದ್ದಾರೆ. ಭಾರತದಲ್ಲಿನ ಲಸಿಕಾ ಅಭಿಯಾನದ ಕುರಿತು ಶ್ಲಾಘನೆ ವ್ಯಕ್ತಪಡಿಸಿ, ಲಸಿಕೆ ಅಭಿವೃದ್ಧಿಪಡಿಸಿದ ಭಾರತದ ವಿಜ್ಞಾನಿಗಳಿಗೆ ಹಾಗೂ ಸೆರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾಗೆ ಧನ್ಯವಾದ ಸಲ್ಲಿಸಿದರು.












Click it and Unblock the Notifications