ಹೊಸ ಸರ್ಕಾರ ರಚನೆ ಬೆನ್ನಲ್ಲೇ ದಿಢೀರ್ ಆಸ್ಪತ್ರೆಗೆ ದಾಖಲಾದ ತೆಲಂಗಾಣ ಮಾಜಿ ಸಿಎಂ ಚಂದ್ರಶೇಖರ್ ರಾವ್
ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ (ಕೆಸಿಆರ್) ಅವರು ಗುರುವಾರ ರಾತ್ರಿ ದಿಢೀರನೆ ಹೈದರಾಬಾದ್ನ ಸೋಮಾಜಿಗುಡದಲ್ಲಿರುವ ಯಶೋದಾ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಜ್ವೇಲ್ನಲ್ಲಿರುವ ಕೆಸಿಆರ್ ಅವರ ಎರ್ರವಳ್ಳಿ ಫಾರ್ಮ್ಹೌಸ್ನಲ್ಲಿ ಜಾರಿ ಬಿದ್ದು ಪೆಟ್ಟಾಗಿದೆ ಎಂದು ಹೇಳಲಾಗಿದ್ದು, ಮಧ್ಯರಾತ್ರಿ ಕಾಲು ಜಾರಿ ಬಿದ್ದನಂತರ, 2:30 ರ ಸುಮಾರಿಗೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.

69 ವರ್ಷದ ಕೆಸಿಆರ್ ಈಗ ಯಶೋದಾ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ. ಕೆಸಿಆರ್ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮುರಿತದ ಪ್ರಮಾಣವನ್ನು ಬಹಿರಂಗಪಡಿಸಲು ಕೆಲವು ಪರೀಕ್ಷೆಗಳು ಮತ್ತು ಎಕ್ಸ್-ರೇಗೆ ಒಳಗಾದ ನಂತರ ವೈದ್ಯರು ಬೆಳಿಗ್ಗೆ 10 ಗಂಟೆಗೆ ವೈದ್ಯಕೀಯ ಬುಲೆಟಿನ್ ಅನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಜಾರಿ ಬೀಳಲು ನಿಖರವಾದ ಕಾರಣವನ್ನು ಇನ್ನೂ ತಿಳಿದುಬಂದಿಲ್ಲ. ಕೆಲವು ದಿನಗಳು ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆದ ಬಳಿಕ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ.
ಆಸ್ಪತ್ರೆಗೆ ಹಲವು ಮುಖಂಡರ ಭೇಟಿ
ಆಸ್ಪತ್ರೆಗೆ ದಾಖಲಾದ ತಕ್ಷಣ ರಾತ್ರಿ ಕೆಲವು ಪರೀಕ್ಷೆಗಳನ್ನು ನಡೆಸಲಾಯಿತು. ವೈದ್ಯರ ಪ್ರಕಾರ, ಮೂಳೆ ಮುರಿತವು ಗಂಭೀರವಾಗಿಲ್ಲ ಆದರೆ ಕೆಸಿಆರ್ ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಗುತ್ತದೆ. ಪಕ್ಷದ ಮುಖಂಡರು ಕುಟುಂಬ ಸದಸ್ಯರೊಂದಿಗೆ ಯಶೋದಾ ಆಸ್ಪತ್ರೆಗೆ ಆಗಮಿಸಿ ಆರೋಗ್ಯ ವಿಚಾರಿಸಿದ್ದಾರೆ.
ಭಾನುವಾರ ತೆಲಂಗಾಣ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದಾಗಿನಿಂದ ಕೆಸಿಆರ್ ಗಜ್ವೆಲ್ನ ಎರ್ರವಳ್ಳಿಯಲ್ಲಿರುವ ತಮ್ಮ ಫಾರ್ಮ್ಹೌಸ್ನಲ್ಲಿ ತಂಗಿದ್ದು, ಅಲ್ಲಿ ಪಕ್ಷದ ಶಾಸಕರು, ಮುಖಂಡರು ಮತ್ತು ಬೆಂಬಲಿಗರನ್ನು ಭೇಟಿಯಾಗುತ್ತಿದ್ದಾರೆ.
ಆಂಧ್ರಪ್ರದೇಶದಿಂದ ಬೇರ್ಪಟ್ಟು ತೆಲಂಗಾಣ ರಾಜ್ಯ ಸ್ಥಾಪನೆಯಾದ ನಂತರ ಕೆಸಿಆರ್ ಸತತ ಎರಡು ವಿಧಾನಸಭೆ ಚುನಾವಣೆಗಳನನ್ನು ಗೆದ್ದು ಅಧಿಕಾರ ಅನುಭವಿಸಿದ ಬಳಿಕ, ಮೂರನೇ ಚುನಾವಣೆಯಲ್ಲಿ ಸೋಲಪ್ಪಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದು ಸರ್ಕಾರ ರಚನೆ ಮಾಡಿದ್ದು, ರೇವಂತ್ ರೆಡ್ಡಿ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು.
ಸೋಲಿನ ನಿರಾಸೆಯಲ್ಲಿದ್ದ ಕೆಸಿಆರ್ ತಮ್ಮ ಫಾರ್ಮ್ಹೌಸ್ನಲ್ಲಿ ಕಾಲ ಕಳೆಯಲು ನಿರ್ಧರಿಸಿದ್ದರು ಎನ್ನಲಾಗಿದೆ. ತೆಲಂಗಾಣದಲ್ಲಿ ಅವರ ಸೋಲು, ಕೆಸಿಆರ್ ರಾಷ್ಟ್ರರಾಜಕಾರಣದ ಕನಸಿಗೆ ಭಾರಿ ಹಿನ್ನಡೆ ಉಂಟು ಮಾಡಿದೆ. ತೆಲಂಗಾಣವನ್ನು ಕಳೆದುಕೊಂಡ ಬಳಿಕ ಕೆಸಿಆರ್ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ರಣತಂತ್ರ ರೂಪಿಸಲಿದ್ದಾರೆ.












Click it and Unblock the Notifications