Breaking: ಮಹಾರಾಷ್ಟ್ರದಲ್ಲಿಂದು ಭೂಕಂಪನ: ಆತಂಕಗೊಂಡ ಜನ
ಮುಂಬೈ ಏಪ್ರಿಲ್ 3: ಮಹಾರಾಷ್ಟ್ರದ ಸೋಲಾಪುರದಲ್ಲಿ ಇಂದು ಲಘು ಭೂಕಂಪನದ ಅನುಭವವಾಗಿದೆ. ಮ್ಯಾನ್ಮರ್ನಲ್ಲಿ 7.7 ತೀವ್ರತೆಯಲ್ಲಿ ಕಳೆದ ವಾರ ಭೂಕಂಪ ಸಂಭವಿಸಿದ ನಂತರ ಮಹಾರಾಷ್ಟ್ರದಲ್ಲಿ ಭೂಮಿ ಕಂಪಿಸಿದ್ದು ಆತಂಕವನ್ನು ಹೆಚ್ಚಿಸಿದೆ.
ಏಪ್ರಿಲ್ 3 ಗುರುವಾರ ಬೆಳಿಗ್ಗೆ 11:22 ಕ್ಕೆ ಮಹಾರಾಷ್ಟ್ರದ ಸೋಲಾಪುರದಲ್ಲಿ ಭೂಮಿ ಕಂಪಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 2.6 ರಷ್ಟಿತ್ತು. ಭೂಕಂಪದ ತೀವ್ರತೆ ಕಡಿಮೆ ಆಗಿದ್ದರಿಂದ ಯಾವುದೇ ಹಾನಿ ಸಂಭವಿಸಿಲ್ಲ. ಭೂಕಂಪನದ ತೀವ್ರತೆ ತುಂಬಾ ಸೌಮ್ಯವಾಗಿತ್ತು ಎನ್ನಲಾಗಿದೆ. ಹೀಗಾಗಿ ಭೂಕಂಪನ ಸಂಭವಿಸಿದ್ದರ ಅನುಭವ ತೀರಾ ಕಡಿಮೆಯಾಗಿದೆ.

ಮಹಾರಾಷ್ಟ್ರದ ಸೋಲಾಪುರದಲ್ಲಿ 5 ಕಿ.ಮೀ. ಆಳದಲ್ಲಿ ಭೂಕಂಪನ ಸಂಭವಿಸಿದೆ. ಭೂಕಂಪನದ ಸುದ್ದಿ ಕೇಳಿ ಜನ ಭಯಭೀತರಾಗಿದ್ದಾರೆ. ಮ್ಯಾನ್ಮರ್ನಲ್ಲಿ ಕಳೆದ ವಾರ 7.7 ತೀವ್ರತೆಯಲ್ಲಿ ಭೂಕಂಪ ಸಂಭವಿಸಿ ಬೃಹತ್ ಕಟ್ಟಡಗಳು ಧರೆಗೆ ಉರುಳಿ ಬಿದ್ದಿದ್ದವು. ಅಲ್ಲದೆ 2000ಕ್ಕೂ ಹೆಚ್ಚು ಜನ ಅವಶೇಷಗಳ ಅಡಿ ಸಿಲುಕಿ ಸಾವನ್ನಪ್ಪಿದ್ದು ಇನ್ನೂ ಕೂಡ 1000 ಜನ ನಾಪತ್ತೆಯಾಗಿದ್ದಾರೆ.
ಇತ್ತೀಚೆಗೆ ಭಾರತದಲ್ಲಿ ಸಂಭವಿಸಿದ ಭೂಕಂಪಗಳು
ಮಂಗಳವಾರ (ಏಪ್ರಿಲ್ 1) ಭಾರತದ ಪೂರ್ವ ಭಾಗಗಳು ಅಂದರೆ ಕೋಲ್ಕತ್ತಾ ಮತ್ತು ಇಂಫಾಲ್ನಲ್ಲಿ ಭೂಕಂಪನದ ಅನುಭವವಾಗಿತ್ತು. ಮಾರ್ಚ್ 28ರಂದು ನೇಪಾಳದಲ್ಲಿ ಸಂಭವಿಸಿದ ಭೂಕಂಪದ ಕಂಪನಗಳು ಬಿಹಾರ ಮತ್ತು ಭಾರತದ ಇತರ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಅನುಭವಕ್ಕೆ ಬಂದಿದ್ದವು.
ಅಲ್ಲದೆ ಸಿಕ್ಕಿಂನ ನಾಮ್ಚಿಯಲ್ಲಿ ಏಪ್ರಿಲ್ 2 ರಂದು ಮತ್ತು ಅದಕ್ಕೂ ಮೊದಲು ಏಪ್ರಿಲ್ 1 ರಂದು ಲೇಹ್ ಲಡಾಖ್ನಲ್ಲಿ ಭೂಕಂಪನದ ಅನುಭವವಾಗಿತ್ತು. ಮಾರ್ಚ್ 31 ರಂದು ಅರುಣಾಚಲ ಪ್ರದೇಶದ ತವಾಂಗ್, ಸಿಕ್ಕಿಂನ ಗ್ಯಾಂಗ್ಟಾಕ್ನಲ್ಲಿಯೂ ಭೂಕಂಪನ ಸಂಭವಿಸಿತ್ತು.
ಹರಿಯಾಣದಲ್ಲೂ ಲಘು ಭೂಕಂಪ
ಮಾರ್ಚ್ 29 ರಂದು ಹರಿಯಾಣದ ಸೋನಿಪತ್ನಲ್ಲಿ ಭೂಕಂಪನವಾಗಿದೆ. ಮಾರ್ಚ್ 29 ರಂದು ಮಧ್ಯಾಹ್ನ 2:08 ಕ್ಕೆ, 2.3 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಭೂಕಂಪದ ಕೇಂದ್ರಬಿಂದು 10 ಕಿಲೋಮೀಟರ್ ಆಳದಲ್ಲಿ ಇತ್ತು.
ಅರುಣಾಚಲ ಪ್ರದೇಶದಲ್ಲಿ ಭೂಕಂಪ
ಕಳೆದ ಸೋಮವಾರ ಏಪ್ರಿಲ್ 1ರಂದು ಮಧ್ಯಾಹ್ನ 2:38ಕ್ಕೆ ಅರುಣಾಚಲ ಪ್ರದೇಶದಲ್ಲಿ ಭೂಕಂಪದ ಅನುಭವವಾಗಿದೆ. ಇದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.5 ರಷ್ಟು ದಾಖಲಾಗಿದೆ. ಅದೃಷ್ಟವಶಾತ್ ಭೂಕಂಪದಿಂದ ಹೆಚ್ಚಿನ ಹಾನಿಯಾಗಿಲ್ಲ. ಆದರೆ ಮ್ಯಾನ್ಮಾರ್ನಲ್ಲಿನ ವಿನಾಶದಿಂದಾಗಿ, ಭಾರತದ ಜನರು ಸಹ ದೊಡ್ಡದಾಗಿ ಭೂಕಂಪ ಸಂಭವಿಸುವ ಭಯದಲ್ಲಿದ್ದಾರೆ.
ದೇಶದಲ್ಲಿ ಭೂಕಂಪದ ಕೇಂದ್ರಬಿಂದು ಎಲ್ಲಿದೆ?
ಭೂವಿಜ್ಞಾನಿಗಳ ಪ್ರಕಾರ, ಭಾರತದ ಸುಮಾರು ಶೇಕಡಾ 59 ರಷ್ಟು ಪ್ರದೇಶವು ಭೂಕಂಪಗಳಿಗೆ ಗುರಿಯಾಗುವ ಪ್ರದೇಶವೆಂದು ಪರಿಗಣಿಸಲಾಗಿದೆ. ಭಾರತದಲ್ಲಿ ಭೂಕಂಪ ವಲಯಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಇವುಗಳಿಗೆ ವಲಯ-2, ವಲಯ-3, ವಲಯ-4 ಮತ್ತು ವಲಯ-5 ಎಂದು ಹೆಸರಿಸಲಾಗಿದೆ. ವಲಯ-5 ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ. ರಾಜಧಾನಿ ದೆಹಲಿ ವಲಯ -4 ರಲ್ಲಿ ಬರುತ್ತದೆ, ಇದು ಚಿಂತಾಜನಕ ವಲಯವಾಗಿದೆ. ಅಂದರೆ ರಿಕ್ಟರ್ ಮಾಪಕದಲ್ಲಿ 7 ಕ್ಕಿಂತ ಹೆಚ್ಚಿನ ಕಂಪನಗಳು ಇಲ್ಲಿಯೂ ಸಂಭವಿಸಬಹುದು. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 7 ಆಗಿದ್ದರೆ, ವಿನಾಶ ಖಚಿತವೆಂದು ಪರಿಗಣಿಸಲಾಗುತ್ತದೆ.












Click it and Unblock the Notifications