G20 Summit: ಭಾರತಕ್ಕೆ ಅಮೆರಿಕ ಅಧ್ಯಕ್ಷರು ಬರುವುದು ಎಷ್ಟೊತ್ತಿಗೆ?
ಜಗತ್ತಿನ ದೊಡ್ಡಣ್ಣ ಅಂತಾ ಕರೆಸಿಕೊಳ್ಳುವ ಅಮೆರಿಕ, ಭಾರತದ ಜೊತೆ ತನ್ನ ಸಂಬಂಧದ ವೃದ್ಧಿಗೆ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಅಮೆರಿಕಗೆ ಭಾರತದ ಸ್ನೇಹ ಬೇಕೆ ಬೇಕು. ಏಕೆಂದರೆ ಉಕ್ರೇನ್ ಹಾಗೂ ರಷ್ಯಾ ನಡುವೆ ಯುದ್ಧ ಶುರು ಆಗಿ, ಬಡಿದಾಡುವ ಹೊತ್ತಲ್ಲೇ ಭಾರತ ತಮ್ಮ ಪರ ನಿಲ್ಲಬೇಕು ಎಂಬುದು ಅಮೆರಿಕ ಆಸೆ. ಇಷ್ಟೆಲ್ಲದರ ಮಧ್ಯೆ ಅಮೆರಿಕ ಅಧ್ಯಕ್ಷ ಬೈಡನ್ ಭಾರತಕ್ಕೆ ಭರ್ಜರಿ ಎಂಟ್ರಿ ಕೊಡುತ್ತಿದ್ದಾರೆ.
ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಅಂದರೆ 1947ರ ನಂತರದಿಂದ ಅಮೆರಿಕ & ರಷ್ಯಾದ ನಡುವೆ ಸಿಲುಕಲು ಹೋಗಲೇ ಇಲ್ಲ. ಅಮೆರಿಕ ಮತ್ತು ರಷ್ಯಾ ಮಧ್ಯೆ ಅರ್ಧ ಶತಮಾನದ ದ್ವೇಷ ಬೆಳೆದಿದೆ. ಹೀಗಾಗಿ ಸದಾ ಎರಡು ದೇಶಗಳು ಕಿತ್ತಾಡುತ್ತಿವೆ. ಆದ್ರೆ ಎಂತಹ ಪರಿಸ್ಥಿತಿ ಎದರಾದರೂ ಭಾರತ ಮಾತ್ರ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿಲ್ಲ. ಜಗತ್ತು ಈಗಾಗಲೇ ಎರಡು ಓಳಾಗಿ ಹೋದರೂ ಭಾರತ ಮಾತ್ರ ಉಕ್ರೇನ್ ಅಥವಾ ರಷ್ಯಾ, ಇಬ್ಬರ ಪರವೂ ನಿಲ್ಲುತ್ತಿಲ್ಲ. ಈ ಮಧ್ಯೆ ಅಮೆರಿಕ ಮಾತ್ರ ಭಾರತವನ್ನು ಸೆಳೆಯುವ ತಂತ್ರವನ್ನು ಮುಂದುವರಿಸಿದೆ ಎಂಬ ಆರೋಪ ಇದೆ.

ಬೈಡನ್ ಭಾರತಕ್ಕೆ ಬರುವುದು ಯಾವಾಗ?
ಈ ಆರೋಪ & ಪ್ರತ್ಯಾರೋಪದ ನಡುವೆ ಅಮೆರಿಕ ಹಾಗೂ ಭಾರತದ ಮಧ್ಯೆ ಗಟ್ಟಿಯಾದ ವ್ಯಾವಹಾರಿಕ ಸಂಬಂಧ ಇದೆ. ಹೀಗಾಗಿ ಇದೀಗ ಅಮೆರಿಕ ಅಧ್ಯಕ್ಷ ಜೋ ಬೈಡನ್ ಭಾರತ ಪ್ರಧಾನಿ ಮೋದಿ ಅವರ ಜೊತೆಗೆ ಮಹತ್ವದ ದ್ವಿಪಕ್ಷೀಯ ಮಾತುಕತೆಗೆ ಕೂರಲಿದ್ದಾರೆ. ಈ ವೇಳೆ ಸೇನಾ ಒಪ್ಪಂದ ಸೇರಿ ಹಲವು ಮಹತ್ವದ ಒಪ್ಪಂದಕ್ಕೆ ಸಹಿ ಬೀಳುವ ಸಾಧ್ಯತೆ ಇದೆ. ಹಾಗಾದ್ರೆ ಅಮೆರಿಕ ಅಧ್ಯಕ್ಷರು ಭಾರತಕ್ಕೆ ಬರುವ ಸಮಯ ಯಾವ್ದು? ಬನ್ನಿ ತಿಳಿಯೋಣ.
ನಾಳೆ ಸಂಜೆ ಬರ್ತಿದ್ದಾರೆ ಬೈಡನ್!
ಹೌದು, ಈಗಿನ ಮಾಹಿತಿ ಪ್ರಕಾರ ಅಮೆರಿಕ ಅಧ್ಯಕ್ಷ ಜೋ ಬೈಡನ್ ನಾಳೆ ಸಂಜೆ 6.55ಕ್ಕೆ ಭಾರತ ತಲುಪಬಹುದು. ಇದು ತಾತ್ಕಾಲಿಕ ಸಮಯವಾಗಿದ್ದು, ಈ ಸಮಯದಲ್ಲಿ ಹೆಚ್ಚು ಕಡಿಮೆ ಆಗಬಹುದು ಎನ್ನಲಾಗಿದೆ. ಈಗಾಗಲೇ ಅಮೆರಿಕ ಅಧ್ಯಕ್ಷ ಬೈಡನ್ಗೆ ಬೇಕಾಗಿರುವ ಭದ್ರತೆಯನ್ನ ಒದಗಿಸಲಾಗಿದೆ. ರಾಷ್ಟ್ರ ರಾಜಧಾನಿ ನವದೆಹಲಿ ಭದ್ರಕೋಟೆಯಾಗಿದೆ. ಇದೇ ಸಂದರ್ಭದಲ್ಲಿ ದೆಹಲಿಯ ಐಟಿಸಿ ಮೌರ್ಯ ಹೋಟೆಲ್ನಲ್ಲಿ ಅಮೆರಿಕ ಅಧ್ಯಕ್ಷರಿಗಾಗಿ ಸಕಲ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಜೋ ಬೈಡನ್ ಜೊತೆಗೆ ಬರುವ ಅಧಿಕಾರಿಗಳಿಗೂ ಇದೇ ಹೋಟೆಲ್ನಲ್ಲಿ ವ್ಯವಸ್ಥೆ ಮಾಡಲಾಗಿದೆ.

ಕಡಲ ತೀರದಲ್ಲಿ ಬೈಡನ್ ಅಬ್ಬರ!
ಭಾರತದ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಈಗಾಗಲೇ ಅಮೆರಿಕ ಅಧ್ಯಕ್ಷ ಬೈಡನ್ಗೆ ವಿಶೇಷವಾಗಿ ಸ್ವಾಗತ ಕೋರಿದ್ದಾರೆ. ಒಡಿಶಾದ ಪುರಿ ಕಡಲ ತೀರದಲ್ಲಿ ಮರಳು ಕಲೆ ಮೂಲಕ ಬೈಡನ್ ಅವರಿಗೆ ಸ್ವಾಗತ ಕೋರಲಾಗಿದೆ. ಪ್ರತಿಬಾರಿ ಸುದರ್ಶನ್ ಪಟ್ನಾಯಕ್ ಅವರ ಮರಳು ಕಲಾಕೃತಿ ಜಗತ್ತಿನ ಗಮನ ಸೆಳೆಯುತ್ತೆ. ಅದರಂತೆ ಈಗ ಕೂಡ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮರಳು ಕಲಾಕೃತಿ ಗಮನ ಸೆಳೆದಿದೆ. G20 ಶೃಂಗಸಭೆ ಹಿನ್ನೆಲೆ ಬೈಡನ್ ಭಾರತಕ್ಕೆ ಬರುತ್ತಿದ್ದಾರೆ. G20 ಶೃಂಗಸಭೆಗೆ ಮೊದಲು ಪ್ರಧಾನಿ ಮೋದಿ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಅಮೆರಿಕ & ಸೌದಿಗೆ ವಿಶೇಷ ವ್ಯವಸ್ಥೆ
ಜಿ-20 ಸಭೆ ಮೂಲಕ ಭಾರತ ಜಗತ್ತಿಗೆ ತನ್ನ ಶಕ್ತಿ ತೋರಿಸಲು ಸಿದ್ಧತೆ ಮಾಡಿಕೊಂಡಿದ್ದು, ಸಾಮಾನ್ಯವಾಗಿ ಜಿ20 ಶೃಂಗಸಭೆ ವೇಳೆ ದ್ವಿಪಕ್ಷೀಯ ಚರ್ಚೆಗೆ ಅವಕಾಶ ಇರಲ್ಲ. ಆದ್ರೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಸೌದಿಯ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಅವರಿಗೆ ಭಾರತ ವಿಶೇಷ ವಿನಾಯಿತಿ ನೀಡಿದೆ. ಎರಡೂ ದೇಶಗಳ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ. ಪ್ರಮುಖ ವಿಚಾರ ಏನೆಂದರೆ ಅಮೆರಿಕ ಜೊತೆಗಿನ ಸಭೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಜೊತೆ ಪಿಎಂ ಮೋದಿ ಮುಖ್ಯವಾಗಿ 6 ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ ಎನ್ನಲಾಗಿದೆ.

ಉಕ್ರೇನ್ಗೆ ಭಾರತದ ಜಂಟಿ ನೆರವು?
ರಷ್ಯಾ & ಉಕ್ರೇನ್ ಯುದ್ಧದ ಬಗ್ಗೆ ಭಾರತ ವಿಭಿನ್ನ ನಿಲುವು ತೆಗೆದುಕೊಂಡಿದೆ. ಉಕ್ರೇನ್ ಪರ ನಿಲ್ಲದೆ, ರಷ್ಯಾಗೆ ಬೆಂಬಲ ನೀಡದೆ ಯುದ್ಧ ಬೇಡವೆ ಬೇಡ ಅನ್ನುತ್ತಿದೆ. ಇಷ್ಟೆಲ್ಲದರ ನಡುವೆ ನಾಳೆ ನಡೆಯುವ ದ್ವಿಪಕ್ಷೀಯ ಮಾತುಕತೆ ವೇಳೆ, ಪ್ರಧಾನಿ ಮೋದಿ ಅವರ ಬಳಿ ಜೋ ಬೈಡನ್ ಉಕ್ರೇನ್ ಮತ್ತು ರಷ್ಯಾ ಯುದ್ಧ ವಿಚಾರ ಪ್ರಸ್ತಾಪ ಮಾಡಬಹುದು ಎನ್ನಲಾಗಿದೆ. ಅದರಲ್ಲೂ ಸಂಕಷ್ಟದಲ್ಲಿರುವ ಉಕ್ರೇನ್ಗೆ ಸಹಾಯ ಮಾಡುವ ವಿಚಾರ ಪ್ರಸ್ತಾಪ ಆಗುತ್ತೆ ಎನ್ನಲಾಗುತ್ತಿದೆ.
ಅಮೆರಿಕದ ತಂತ್ರ ಏನಿರಬಹುದು?
ಈಗಾಗಲೇ ಭಾರತ ಸ್ವಂತವಾಗಿ ಉಕ್ರೇನ್ಗೆ ನೆರವನ್ನು ನೀಡಿದೆ. ಆದರೂ ಕಷ್ಟದಲ್ಲಿ ಇರುವ ಉಕ್ರೇನ್ಗೆ ಮಾನವೀಯ ನೆರವು ನೀಡಲು ಅಮೆರಿಕ ಅಧ್ಯಕ್ಷ ಮತ್ತೊಮ್ಮೆ ಭಾರತದ ಬಳಿ ಬೇಡಿಕೆ ಇಡಬಹುದು. ಭಾರತ ಇದುವರೆಗೂ 100 ಟನ್ ಮಾನವೀಯ ನೆರವನ್ನು ಕಳುಹಿಸಿದೆ. ಅಗತ್ಯ ಔಷಧ, ವೈದ್ಯಕೀಯ ಉಪಕರಣ ಆಹಾರ ಸೇರಿ ಉಕ್ರೇನ್ ಜನಕ್ಕೆ ಬೇಕಿದ್ದ ವಸ್ತು ತಲುಪಿಸಿದೆ. ಇದೀಗ ಅಮೆರಿಕ & ಭಾರತ ಒಟ್ಟಾಗಿ ಮಾನವೀಯ ನೆರವು ಕಳಿಸುವ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ರಷ್ಯಾ ಸ್ನೇಹ ಕೂಡ ಬಹುಮುಖ್ಯ
ಈ ಮೂಲಕ ಭಾರತ & ಅಮೆರಿಕ ಉಕ್ರೇನ್ ಪರ ನಿಂತಿವೆ ಎಂಬ ಸಂದೇಶವು ಸಿಗಬಹುದು ಎಂಬ ಮಾತು ಕೇಳಿಬಂದಿದೆ. ಆದರೆ ಜೋ ಬೈಡನ್ ಮತ್ತು ಪ್ರಧಾನಿ ನಡುವೆ ಈ ವಿಚಾರ ಚರ್ಚೆಗೆ ಬರುವ ಬಗ್ಗೆ ಇನ್ನೂ ಅಂತಿಮ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ನಾಳೆ ನಡೆಯಲಿರುವ ದ್ವಿಪಕ್ಷೀಯ ಮಾತುಕತೆ ಅಂತ್ಯದ ತನಕ ಕಾಯಬೇಕಿದೆ. ಭಾರತ ಕೂಡ ಉಕ್ರೇನ್ ವಿಚಾರ ಬಂದಾಗ ಜಾಣ ನಡೆ ಇಡುತ್ತಿದೆ. ಏಕೆಂದರೆ ಭಾರತಕ್ಕೆ ಅಮೆರಿಕದ ಸಂಬಂಧದಷ್ಟೇ ರಷ್ಯಾ ಸಂಬಂಧ ಕೂಡ ಬಹುಮುಖ್ಯ. ಹೀಗಾಗಿ ಅಮೆರಿಕ ಇಂತಹ ವಿಚಾರ ಪ್ರಸ್ತಾಪ ಮಾಡಿದರು ಭಾರತ ಜಾಣ ನಡೆ ಪ್ರದರ್ಶಿಸುವ ಸಾಧ್ಯತೆ ಇದೆ.
ಒಟ್ನಲ್ಲಿ ಭಾರತ ಶಾಂತಿ ಮತ್ರದ ಮೂಲಕ ಅಭಿವೃದ್ಧಿಯ ಹಾದಿಯಲ್ಲಿ ಹೆಜ್ಜೆ ಇಡುತ್ತಿದೆ. ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ನಡೆಯುವಾಗ ಕೂಡ ಭಾರತ ತಟಸ್ಥವಾಗಿ ಇದೆ. ಈ ಮೂಲಕ ಶಾಂತಿ ಸಂದೇಶ ಸಾರುತ್ತಿದೆ. ಇದೇ ವೇಳೆ ಅಮೆರಿಕ ಮಾತ್ರ ಭಾರತದ ಜೊತೆ ಸ್ನೇಹ ಗಟ್ಟಿಗೊಳಿಸಲು ಮುಂದೆ ಬರುತ್ತಿದೆ. ಹೀಗಾಗಿಯೇ ಚೀನಾ & ರಷ್ಯಾ ಸೇರಿದಂತೆ ಈ ಪ್ರಪಂಚವೇ ಬೈಡನ್ ಮತ್ತು ಪ್ರಧಾನಿ ಮೋದಿ ಅವರ ದ್ವಿಪಕ್ಷೀಯ ಮಾತುಕತೆ ಕುರಿತಾಗಿ ಗಮನ ಹರಿಸಿದೆ. ಎಲ್ಲದಕ್ಕೂ ಉತ್ತರ ತಿಳಿದುಕೊಳ್ಳಲು ನಾಳೆಯವರೆಗೂ ಕಾಯಬೇಕಿದೆ.












Click it and Unblock the Notifications