Delhi Election: ಎಎಪಿ ಘೋಷಣೆಗಳನ್ನೇ ಬಿಜೆಪಿ ನಕಲು ಮಾಡಿದೆ ಎಂದ ಅರವಿಂದ್ ಕೇಜ್ರಿವಾಲ್
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂದು ಮಹತ್ವದ ಕನಸು ಕಂಡಿರುವ ಬಿಜೆಪಿ ಇಂದು (ಶುಕ್ರವಾರ) ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ದೆಹಲಿ ಮತದಾರರಿಗೆ ಬಿಜೆಪಿ ಭರ್ಜರಿ ಕೊಡುಗೆಗಳನ್ನು ಘೋಷಣೆ ಮಾಡಿದ್ದು ಇದಕ್ಕೆ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಆಕ್ಷೇಪ ವ್ಯಕ್ತಪಡಿಸಿದ್ದು, ಎಎಪಿ ನೀಡಿರುವ ಘೋಷಣೆಗಳನ್ನೇ ಬಿಜೆಪಿ ನಕಲು ಮಾಡಿದೆ ಎಂದು ಕಿಡಿ ಕಾರಿದ್ದಾರೆ.
ಭಾರತೀಯ ಜನತಾ ಪಕ್ಷ (ಬಿಜೆಪಿ) ನಮ್ಮ ಆಮ್ ಆದ್ಮಿ ಪಕ್ಷ ನೀಡಿರುವ ಕೊಡುಗೆಗಳನ್ನು ನಕಲು ಮಾಡಿದೆ. ಬಿಜೆಪಿ ಎಎಪಿಯ ಮಾರ್ಗವನ್ನೇ ಅನುಸರಿಸುವುದಾದರೆ ಸ್ವಂತ ಯೋಜನೆಗಳನ್ನು ರೂಪಿಸದ ಬಿಜೆಪಿಯನ್ನು ಜನ ಯಾಕೆ ಆಯ್ಕೆ ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ.

ಬಿಜೆಪಿ ಪ್ರಣಾಳಿಕೆಯಲ್ಲಿ ಏನಿದೆ?
ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಶುಕ್ರವಾರ ದೆಹಲಿ ವಿಧಾನಸಭಾ ಚುನಾವಣೆಗಾಗಿ ಪಕ್ಷದ ಪ್ರಣಾಳಿಕೆಯ ಮೊದಲ ಭಾಗವನ್ನು ಬಿಡುಗಡೆ ಮಾಡಿದ್ದಾರೆ. ಮಹಿಳೆಯರಿಗೆ ತಿಂಗಳಿಗೆ 2,500 ರೂಪಾಯಿ ನೆರವು, 500 ರೂಪಾಯಿಗೆ ಎಲ್ಪಿಜಿ ಸಿಲಿಂಡರ್ ಮತ್ತು ಹಿರಿಯ ನಾಗರೀಕರಿಗೆ 2,500 ರೂಪಾಯಿ ಪಿಂಚಣಿ ಘೋಷಿಸಲಾಗಿದೆ.
ಬಿಜೆಪಿ ಅಧಿಕಾರಕ್ಕೆ ಬಂದರೆ ದೆಹಲಿಯಲ್ಲಿ ಈಗ ಅಸ್ತಿತ್ವದಲ್ಲಿರುವ ಎಲ್ಲಾ ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ಮುಂದುವರೆಸುವುದಾಗಿ ಅವರು ಭರವಸೆ ನೀಡಿದ್ದಾರೆ. ಇದಕ್ಕಾಗಿ ಬಿಜೆಪಿ ಸಂಕಲ್ಪ ಪತ್ರದ ಮೊದಲ ಭಾಗವನ್ನು ಬಿಡುಗಡೆ ಮಾಡಿದೆ. ಈ ಪ್ರಣಾಳಿಕೆಯು ದೆಹಲಿ ಅಭಿವೃದ್ಧಿಗೆ ಅಡಿಪಾಯವಾಗಿದೆ ಎಂದು ಜೆಪಿ ನಡ್ಡಾ ಹೇಳಿದ್ದಾರೆ.
ಮೋದಿಗೆ ಕೇಜ್ರಿವಾಲ್ ಪ್ರಶ್ನೆ
"ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಕೇಜ್ರೀವಾಲ್ ರೀತಿ ಉಚಿತ ಭಾಗ್ಯಗಳನ್ನು ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಇದಕ್ಕೆ ಒಪ್ಪಿಗೆ ನೀಡುತ್ತಾರೆಯೇ ಅಥವಾ ಈ ಹಿಂದೆ ಮೋದಿ ತಾನು ಹೇಳಿದ್ದು ತಪ್ಪು ಎಂದು ಅವರು ಹೇಳಬೇಕು ಇದನ್ನು ಸಾರ್ವಜನಿಕವಾಗಿ ಘೋಷಿಸಬೇಕು" ಎಂದು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಇಲ್ಲಿಯವರೆಗೆ ಉಚಿತ ಕೊಡುಗೆಗಳು ಒಳ್ಳೆಯದಲ್ಲ ಎಂದು ಭಾಷಣ ಮಾಡುತ್ತಿದ್ದರು. ಈಗ ಅವರು ತಾವು ಹೇಳಿದ್ದು ತಪ್ಪು ಎಂದು ಒಪ್ಪಿಕೊಳ್ಳಬೇಕು ಮತ್ತು ಕೇಜ್ರಿವಾಲ್ ಮಾಡಿದ್ದು ಸರಿ ಎಂದು ಹೇಳಬೇಕು, ಉಚಿತ ಕೊಡುಗೆಗಳು ದೇಶಕ್ಕೆ ಹಾನಿಕಾರಕವಲ್ಲ, ದೇವರಿಂದ ಪ್ರಸಾದ ಎಂದು ಹೇಳಬೇಕು" ಎಂದರು.












Click it and Unblock the Notifications