ಬಿಪೊರ್ ಜಾಯ್ ಚಂಡಮಾರುತ ಅಬ್ಬರ; ಮೋದಿಯಿಂದ ಉನ್ನತ ಮಟ್ಟದ ಸಭೆ
ನವದೆಹಲಿ, ಜೂನ್ 12: ನೈಋತ್ಯ ಮುಂಗಾರಿನ ಜೊತೆಗೆ ದೇಶದ ವಿವಿಧ ರಾಜ್ಯಗಳಲ್ಲಿ 'ಬಿಪೊರ್ ಜಾಯ್' ಚಂಡಮಾರುತ ಅಬ್ಬರ ಜೋರಾಗಿದೆ. ಚಂಡಮಾರುತ ತೀವ್ರ ಸ್ವರೂಪ ಪಡೆಯುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆಯನ್ನು ನಡೆಸಲಿದ್ದಾರೆ.
ಸೋಮವಾರ 'ಬಿಪೊರ್ ಜಾಯ್' ಚಂಡಮಾರುತ ಗುಜರಾತ್ನ ಕಚ್ ಪ್ರದೇಶದಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿ ಪರಿಸ್ಥಿತಿ ಕುರಿತು ಮಾಹಿತಿ ಪಡೆಯಲು ಉನ್ನತ ಮಟ್ಟದ ಸಭೆಯನ್ನು ಕರೆದಿದ್ದಾರೆ.

ಗುಜರಾತ್ ರಾಜ್ಯದ ಕರಾವಳಿ ಪ್ರದೇಶಗಳಾದ ಸೌರಾಷ್ಟ್ರ ಮತ್ತು ಕಚ್ ಪ್ರದೇಶಕ್ಕೆ ಭಾರತೀಯ ಹವಾಮಾನ ಇಲಾಖೆ ಅಲರ್ಟ್ ಘೋಷಣೆ ಮಾಡಿದೆ. ಈ ಪ್ರದೇಶಗಳಲ್ಲಿ ಸಮುದ್ರದ ಅಲೆಗಳ ಅಬ್ಬರವೂ ಹೆಚ್ಚಾಗಿರಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಬುಧವಾರದ ತನಕ ಇದೇ ಪರಿಸ್ಥಿತಿ ಇರಲಿದೆ ಎಂದು ಅಂದಾಜಿಸಲಾಗಿದೆ.
ವಿವಿಧ ರಾಜ್ಯಗಳಲ್ಲಿ ಮಳೆ; 'ಬಿಪೊರ್ ಜಾಯ್' ಚಂಡಮಾರುತದ ಪರಿಣಾಮವಾಗಿ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ. ಮುಂಬೈನ ಸಮುದ್ರ ತೀರಕ್ಕೆ ಭಾರೀ ಗಾತ್ರದ ಅಲೆಗಳು ಬಂದು ಅಪ್ಪಳಿಸುತ್ತಿವೆ. ಪ್ರತಿಕೂಲ ಹವಾಮಾನದ ಕಾರಣ ಮುಂಬೈ ವಿಮಾನ ನಿಲ್ದಾಣದ ರನ್ ವೇ ಸಹ ಮುಚ್ಚಲಾಗಿದೆ.
ಚಂಡಮಾರುತದ ಪರಿಣಾಮವಾಗಿ ಗುಜರಾತ್ನ ಕರಾವಳಿಗೆ ಭಾರಿ ಗಾತ್ರದ ಅಲೆಗಳು ಬಂದು ಅಪ್ಪಳಿಸುತ್ತಿವೆ. ಮಹಾರಾಷ್ಟ್ರದ ಥಾಣೆ, ರಾಯಗಢ, ಮುಂಬೈ ಮತ್ತು ಫಾಲ್ಗಾರ್ಗಳಲ್ಲಿ ಚಂಡಮಾರುತದ ಪರಿಣಾಮ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಗುಜರಾತ್ನಲ್ಲಿ ಚಂಡಮಾರುತ ಎದುರಿಸಲು ಮಾಡಿಕೊಂಡಿರುವ ಸಿದ್ಧತೆಗಳ ಕುರಿತು ಸಹ ಸಭೆ ನಡೆಸಿದ್ದಾರೆ.
ಜೂನ್ 13 ರಿಂದ 15ರ ತನಕ ಕಚ್, ಜಾಮ್ ನಗರ, ಮೊರ್ಬಿ, ಸೋಮನಾಥ್, ಪೋರ್ ಬಂದರ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಭಾರಿ ಗಾಳಿಯ ಜೊತೆ ಮಳೆಯಾಗಲಿದೆ. ಗಾಳಿಯ ವೇಗ ಗಂಟೆಗೆ ಸುಮಾರು 150 ಕಿ. ಮೀ. ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಜನರ ಸ್ಥಳಾಂತರ ಆರಂಭ; ಗುಜರಾತ್ನ ಕಚ್ ಪ್ರದೇಶದಲ್ಲಿ ಇರುವ ಜನರನ್ನು ಸ್ಥಳಾಂತರ ಮಾಡುವ ಕಾರ್ಯ ಆರಂಭವಾಗಿದೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಭಾನುವಾರ ರಾಜ್ಯ ವಿಪತ್ತು ನಿರ್ವಹಣಾ ವಾರ್ ರೂಂಗೆ ಭೇಟಿ ನೀಡಿ ಪರಿಸ್ಥಿತಿ ಕುರಿತು ಮಾಹಿತಿ ಪಡೆದರು.
ಭಾರಿ ಗಾತ್ರದ ಅಲೆಗಳು ಬಂದು ತೀರಕ್ಕೆ ಅಪ್ಪಳಿಸುತ್ತಿರುವ ಕಾರಣ ವಿವಿಧ ಬೀಚ್ಗಳಿಗೆ ಜನರ ಭೇಟಿ ನಿಷೇಧಿಸಲಾಗಿದೆ. ಗುಜರಾತ್, ಕರ್ನಾಟಕ, ಲಕ್ಷದ್ವೀಪ, ಕೇರಳ, ಮಹಾರಾಷ್ಟ್ರದಲ್ಲಿ ಮೀನುಗಾರಿಕೆಗೆ ತೆರಳಬಾರದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಭಾನುವಾರ ಸಂಜೆಯಿಂದಲೇ ಮುಂಬೈ ನಗರಕ್ಕೆ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಹವಾಮಾನ ವೈಫರಿತ್ಯದ ಕಾರಣ ಹಲವು ವಿಮಾನಗಳ ಸಂಚಾರ ರದ್ದುಗೊಳಿಸಲಾಗಿದೆ. ಕೆಲವು ವಿಮಾನಗಳ ಹಾರಾಟ ವಿಳಂಬವಾಗಿದೆ.
ಗುರುವಾರದ ಹೊತ್ತಿಗೆ ಚಂಡಮಾರುತ ಪಾಕಿಸ್ತಾನದ ಕಡೆಗೆ ಸಾಗುವ ನಿರೀಕ್ಷೆ ಇದೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ವಿಪತ್ತು ಎದುರಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಮುಂಬೈ ಕಡಲ ತೀರಕ್ಕೆ ಅಲೆಗಳು ಬಂದು ಅಪ್ಪಳಿಸುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ಸಹ ವಿಪತ್ತು ಎದುರಿಸಲು ರಾಜ್ಯಗಳಿಗೆ ಅಗತ್ಯ ಸಹಕಾರವನ್ನು ನೀಡುವಂತೆ ಸೂಚನೆ ನೀಡಿದ್ದಾರೆ. ಒಂದು ವೇಳೆ ಚಂಡಮಾರುತ ಅವಾಂತರ ಸೃಷ್ಟಿಮಾಡಿದರೆ ಜನರ ಸಹಾಯಕ್ಕಾಗಿ ಸೇನೆಯಿಂದ ಹೆಲಿಕಾಪ್ಟರ್ ಕಳಿಸಲಾಗುತ್ತದೆ.












Click it and Unblock the Notifications