ಗೋವಾದಲ್ಲಿ ಮುತಾಲಿಕ್ ರಾಮಸೇನೆಗೆ ನಿಷೇಧ
ಪಣಜಿ, ಆ.21: ಗೋವಾದಲ್ಲಿ ಪ್ರಮೋದ್ ಮುತಾಲಿಕ್ ನೇತೃತ್ವದ ಶ್ರೀರಾಮಸೇನೆಯನ್ನು ನಿಷೇಧಿಸಿ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಆದೇಶ ಹೊರಡಿಸಿದ್ದಾರೆ. ಗೋವಾದಲ್ಲಿ ಶ್ರೀರಾಮಸೇನೆಯ ಕಾರ್ಯ ಚಟುವಟಿಕೆಗಳಿಗೆ ಅವಕಾಶ ನೀಡಲಾಗದು ಎಂದು ಗೋವಾ ವಿಧಾನಸಭೆಯಲ್ಲಿ ಬುಧವಾರ ಸಂಜೆ ಹೇಳಿದ್ದಾರೆ.
ಒಂದು ವೇಳೆ ಶ್ರೀರಾಮಸೇನೆಯ ಕಾರ್ಯಕರ್ತರು ರಾಜ್ಯದಲ್ಲಿ ತಮ್ಮ ಚಟುವಟಿಕೆಗಳನ್ನು ಆರಂಭಿಸಿದ್ದೇ ಆದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪಾರಿಕ್ಕರ್ ಹೇಳಿದ್ದರು.
ಶ್ರೀರಾಮಸೇನೆ ಬಗ್ಗೆ ಆರಂಭಿಕ ವರದಿಯನ್ನು ಪೊಲೀಸರಿಂದ ತರಿಸಿಕೊಂಡ ನಂತರ, ಸಂಪುಟ ಸಭೆ ನಡೆಸಿ ಈ ನಿರ್ಧಾರಕ್ಕೆ ಬರಲಾಗಿದೆ ಮನೋಹರ್ ಪಾರಿಕ್ಕಾರ್ ಹೇಳಿದ್ದಾರೆ. ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಇತ್ತೀಚೆಗೆ ಪಬ್ ಸಂಸ್ಕೃತಿಯನ್ನು ನಿಗ್ರಹಿಸಲು ಗೋವಾದಲ್ಲಿ ತಮ್ಮ ಸಂಘಟನೆಯ ಒಂದು ಘಟಕವನ್ನು ಸ್ಥಾಪಿಸುವ ಉದ್ದೇಶವಿದೆ ಎಂದಿದ್ದರು.

ಪ್ರಮೋದ್ ಮುತಾಲಿಕ್ ಹೇಳಿಕೆ ನಂತರ ಮಹಿಳಾ ಸಂಘಟನೆಗಳು, ಸಾಹಿತಿಗಳು, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ತಿರುಗಿ ಬಿದ್ದಿದ್ದರು. ಪತೋರ್ಡಾ ಶಾಸಕ ವಿಜಯ್ ಸರ್ದೇಸಾಯಿ ಅವರು ಕೇಳಿದ ಪ್ರಶ್ನೆಗೆ ಉತ್ತರ ರೂಪದಲ್ಲಿ ಸಿಎಂ ಮನೋಹರ್ ಶ್ರೀರಾಮಸೇನೆ ನಿಷೇಧ ಬಗ್ಗೆ ನಿರ್ಧಾರ ಪ್ರಕಟಿಸಿದರು.
ಗೋವಾ ಸರ್ಕಾರದ ಆದೇಶಕ್ಕೆ ಪ್ರತಿಕ್ರಿಯಿಸಿರುವ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ನಿಷೇಧ ಹೇರುವುದು ನಮ್ಮ ಸಂಘಟನೆಗೆ ಹೊಸದೇನಲ್ಲ, ಬಿಜೆಪಿ ಸರ್ಕಾರ ಆತುರದ ನಿರ್ಧಾರ ಕೈಗೊಂಡಿದೆ. ನಮ್ಮದು ಉತ್ತಮ ಸಮಾಜ ನಿರ್ಮಾಣ ಕಾರ್ಯ. ಇದನ್ನು ಅಡ್ಡಿಪಡಿಸಿದರೆ ಅವರಿಗೆ ನಷ್ಟ ಎಂದಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಅನೇಕ ಬಾರಿ ಶ್ರೀರಾಮಸೇನೆಗೆ ಗೋವಾದಲ್ಲಿ ನಿಷೇಧ ಹೇರಲಾಗಿತ್ತು. ಗೋವಾದಲ್ಲಿ ಸೇನೆ ಆಗಾಗ ಸುದ್ದಿಯಲ್ಲಿರುವುದು ಮಾಮೂಲಿ. ಪ್ರಮೋದ್ ಮುತಾಲಿಕ್ ಅವರು ಅವಹೇಳನಕಾರಿ ಭಾಷಣ ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ದುರ್ಗಾದಾಸ್ ಕಾಮತ್ ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಪೊಲೀಸರು ಸಾಕ್ಷಿ ಇಲ್ಲದ ಕಾರಣ ಪ್ರಕರಣ ದಾಖಲಿಸಿಕೊಂಡಿರಲಿಲ್ಲ.
ಕೊಂಕಣಿ ನಾಟಕ ಅಕಾಂತ್ ವಾದಿ ಗೊಯಾಂತ್ ನಾಕಾ ನಾಟಕ ನಿಷೇಧ ಹಾಗೂ ನಿರ್ದೇಶಕ ತೌಸಿಫ್ ಶೇಕ್ ಬಂಧನಕ್ಕೆ ಶ್ರೀರಾಮಸೇನೆ ಆಗ್ರಹಿಸಿ ಧರಣಿ ನಡೆಸಿತ್ತು. ಈ ನಾಟಕದಲ್ಲಿ ಮುತಾಲಿಕ್ ರನ್ನು ಉಗ್ರಗಾಮಿಯಂತೆ ಬಿಂಬಿಸಲಾಗಿತ್ತು.












Click it and Unblock the Notifications