ಸೆಕ್ಸ್ ಸಿಡಿ ಹಂಚಿದ ಆರೋಪ ಹೊತ್ತಿದ್ದ ಛತ್ತೀಸ್ ಗಢ ಸಿಎಂ ಆಕಾಂಕ್ಷಿ
ನವದೆಹಲಿ, ಡಿಸೆಂಬರ್ 13: ಛತ್ತೀಸ್ ಗಡದಲ್ಲಿ 15 ವರ್ಷಗಳ ನಂತರ ಅಧಿಕಾರ ಸ್ಥಾಪಿಸುವ ಜನಾದೇಶ ಪಡೆದುಕೊಂಡಿರುವ ಕಾಂಗ್ರೆಸ್ಸಿಗೆ ಈಗ ಮುಖ್ಯಮಂತ್ರಿ ಅಯ್ಕೆಯ ಗೊಂದಲದಲ್ಲಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಛತ್ತೀಸ್ ಗಢ, ರಾಜಸ್ಥಾನ ಹಾಗೂ ಮಧ್ಯಪ್ರದೇಶದ ಮುಖ್ಯಮಂತ್ರಿಗಳ ಆಯ್ಕೆ ನಡೆಯಲಿದೆ.
ಅಖಿಲ ಭಾರತ ಕಾಂಗ್ರೆಸ್ ಸಮಿತಿ ಪರಿವೀಕ್ಷಕರಾದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಛತ್ತೀಸ್ ಗಡದ ನೂತನ ಶಾಸಕರು ಹಾಗೂ ಸಿಎಂ ಸ್ಥಾನದ ಆಕಾಂಕ್ಷಿಗಳ ಜತೆ ಒಂದು ಸುತ್ತಿನ ಮಾತುಕತೆ, ಸಭೆ, ಚರ್ಚೆ ನಡೆಸಲಾಗಿದ್ದು, ಎಲ್ಲರ ಅಭಿಪ್ರಾಯವನ್ನು ಸಂಗ್ರಹಿಸಿ, ಹೈಕಮಾಂಡ್ ಗೆ ವರದಿಯನ್ನು ಸಲ್ಲಿಸಲಾಗಿದೆ.
ಮುಖ್ಯಮಂತ್ರಿ ಪಟ್ಟಕ್ಕೇರಲು ಸಿದ್ಧರಾಗಿರುವ ಕಾಂಗ್ರೆಸ್ಸಿನ ಅಭ್ಯರ್ಥಿಗಳ್ಯಾರು?
ರಮಣ್ ಸಿಂಗ್ ನೇತೃತ್ವದ ಬಿಜೆಪಿ ಆಡಳಿತವನ್ನು ಅಂತ್ಯಗೊಳಿಸಿದ ಕಾಂಗ್ರೆಸ್, 90 ಸ್ಥಾನಗಳ ವಿಧಾನಸಭೆಯಲ್ಲಿ 68 ಸ್ಥಾನಗಳನ್ನು ಗಳಿಸಿ ಅಧಿಕಾರ ಸ್ಥಾಪನೆಗೆ ಹಕ್ಕು ಮಂಡಿಸಲಿದೆ.
ಸದ್ಯಕ್ಕೆ ಛತ್ತೀಸ್ ಗಢದಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ,ಪಠಾಣ್ ಶಾಸಕ ಭೂಪೇಶ್ ಬಘೇಲ್ ಅವರ ಹೆಸರು ಸಿಎಂ ರೇಸಿನಲ್ಲಿ ಮುಂಚೂಣಿಯಲ್ಲಿದೆ.ಜೊತೆಗೆ ಪಕ್ಷದ ಏಕೈಕ ಸಂಸದ ತಾಮ್ರಧ್ವಜ್ ಸಾಹು, ವಿಪಕ್ಷ ನಾಯಕ ಟಿಎಸ್ ಸಿಂಗ್ ದೇವ್ ಅವರ ಹೆಸರುಗಳು ಕೇಳಿ ಬಂದಿದೆ.
ಸೆಕ್ಸ್ ಸಿಡಿ ಕೇಸ್ ನಲ್ಲಿ ಜೈಲು ಸೇರಿದ್ದರು
ಜಲ ಸಂಪನ್ಮೂಲ ಸಚಿವ ರಾಜೇಶ್ ಮುನಾತ್ ಅವರಿಗೆ ಸೇರಿದೆ ಎನ್ನಲಾದ ನಕಲಿ ಪೋರ್ನೊಗ್ರಾಫಿಕ್ ಸಿಡಿಯನ್ನು ಹಂಚಿದ ಆರೋಪವನ್ನು ಛತ್ತೀಸ್ ಗಡ ಕಾಂಗ್ರೆಸ್ ಅಧ್ಯಕ್ಷ ಭೂಪೇಶ್ ಹೊತ್ತುಕೊಂಡಿದ್ದರು. ಭೂಪೇಶ್ ವಿರುದ್ಧ ಸಿಬಿಐ ತಂಡವು ದೋಷಾರೋಪಣ ಪಟ್ಟಿ ಸಲ್ಲಿಸಿತ್ತು. ವಿಶೇಷ ನ್ಯಾಯಾಲಯದಲ್ಲಿ ಖುದ್ದು ವಾದಿಸಿದ ಭೂಪೇಶ್ ಅವರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದರು.
ಅನುಭವಿ ರಾಜಕಾರಣಿ ಭೂಪೇಶ್
ಛತ್ತೀಸ್ ಗಢ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭೂಪೇಶ್ ಬಘೇಲ್ ಅವರು ಅಕ್ಟೋಬರ್ 2014ರಿಂದ ಅಧಿಕಾರ ನಡೆಸಿದ್ದಾರೆ. ದುರ್ಗ್ ಜಿಲ್ಲೆಯ ಪಟಾನ್ ಕ್ಷೇತ್ರದ ಅಭ್ಯರ್ಥಿ. ಈ ಹಿಂದೆ ದಿಗ್ವಿಜಯ್ ಸಿಂಗ್ ಅವರ ಸರ್ಕಾರದಿಂದ ಸಚಿವರಾಗಿದ್ದರು. ಸಾರಿಗೆ ಸಚಿವರಾಗಿ ಉತ್ತಮ ಹೆಸರು ಗಳಿಸಿದರು. ಛತ್ತೀಸ್ ಗಢ ರಾಜ್ಯ ಉದಯವಾದ ಬಳಿಕ ಬಘೇಲ್ ಅವರು ಕಂದಾಯ ಸಚಿವರಾಗಿ ಕಾರ್ಯನಿರ್ವಹಿಸಿದರು.
ಹಿಂದುಳಿದ ವರ್ಗಗಳ ನಾಯಕ ತಾಮ್ರಧ್ವಜ್ ಸಾಹು
ದುರ್ಗ್ (ಗ್ರಾಮೀಣ) ಲೋಕಸಭಾ ಕ್ಷೇತ್ರದ ಸಂಸದ, 69 ವರ್ಷ ವಯಸ್ಸಿನ ಹಿಂದುಳಿದ ವರ್ಗದ ನಾಯಕ ತಾಮರ್ ಧ್ವಜ್ ಸಾಹು ಅವರಿಗೆ ಸಾಹು ಸಮುದಾಯದ ಬೆಂಬಲವಿದೆ. ಇಂಧನ, ಶಿಕ್ಷಣ, ಜಲ ಸಂಪನ್ಮೂಲ ಖಾತೆ ನಿಭಾಯಿಸಿದ ಅನುಭವವಿದೆ. 2013ರಲ್ಲಿ ಬೆಮೆತಾರಾದಿಂದ ವಿಧಾನಸಭೆ ಸ್ಪರ್ದಿಸಿ ಬಿಜೆಪಿಯ ಅವಧೇಶ್ ಸಿಂಗ್ ವಿರುದ್ಧ ಸೋಲು ಕಂಡಿದ್ದರು.
ಟಿಎಸ್ ಸಿಂಗ್ ದೇವ್
ಟಿಎಸ್ ಸಿಂಗ್ ದೇವ್ ಅವರು ಜನವರಿ 2014 ರಿಂದ ಛತ್ತೀಸ್ ಗಢ ವಿಧಾನಸಭೆಯ ವಿಪಕ್ಷ ನಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2013ರ ವಿಧಾನಸಭೆಯಲ್ಲಿ ಶ್ರೀಮಂತ ಅಭ್ಯರ್ಥಿ ಎನಿಸಿದ್ದ ಇವರು ಕಲೆದ ಬಾರಿ ಅಂಬಿಕಾಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು.
ಈ ಮೂವರಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎಂಬುದರ ಬಗ್ಗೆ ಅಭಿಪ್ರಾಯ ಸಂಗ್ರಹಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರು ವರದಿಯನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ನೀಡಿದ್ದಾರೆ. ರಾಹುಲ್ ಅವರು ಹೊಸ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಿದ್ದಾರೆ.