ವಿಧಾನಸಭಾ ಚುನಾವಣೆ; ಗುಜರಾತ್ನತ್ತ ಕೇಜ್ರಿವಾಲ್, ಭಗವಂತ್ ಮಾನ್
ನವದೆಹಲಿ, ಅ.16: ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆ ಹಿನ್ನೆಲೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಭಾನುವಾರ ಗುಜರಾತ್ಗೆ ಎರಡು ದಿನಗಳ ಭೇಟಿ ನೀಡಲಿದ್ದಾರೆ.
ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಕೇಜ್ರಿವಾಲ್, ಭಗವಂತ್ ಮಾನ್ ಈ ಎರಡು ದಿನಗಳಲ್ಲಿ ಗುಜರಾತ್ನ ಭಾವನಗರ, ಮೆಹ್ಸಾನಾ ಮತ್ತು ಬನಸ್ಕಾಂತ ಜಿಲ್ಲೆಗಳಲ್ಲಿ ಸಾರ್ವಜನಿಕ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಎಎಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮನೋಜ್ ಸೊರಥಿಯಾ ಹೇಳಿದರು.
ಇಬ್ಬರು ನಾಯಕರು ಭಾನುವಾರ ಮಧ್ಯಾಹ್ನ ಭಾವನಗರ ತಲುಪಲಿದ್ದು, ಅಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಸೊರಥಿಯಾ ಸುದ್ದಿಗಾರರಿಗೆ ತಿಳಿಸಿದರು.

ಸೋಮವಾರ, ಉಭಯ ನಾಯಕರು ಮೆಹ್ಸಾನಾ ಜಿಲ್ಲೆಯ ಉಂಜಾ ಪಟ್ಟಣ ಮತ್ತು ಬನಸ್ಕಾಂತ ಜಿಲ್ಲೆಯ ದೀಸಾ ಪಟ್ಟಣದಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
"ಎರಡು ದಿನಗಳಲ್ಲಿ, ಇಬ್ಬರು ನಾಯಕರು ಸ್ಥಳೀಯ ನಾಯಕರನ್ನು ಭೇಟಿ ಮಾಡುತ್ತಾರೆ. ಮುಂಬರುವ ಚುನಾವಣೆಗಳ ಕುರಿತು ರಾಜ್ಯ ಎಎಪಿ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ" ಎಂದು ಮನೋಜ್ ಸೊರಥಿಯಾ ಹೇಳಿದರು.
ಈ ಬಾರಿ ಗುಜರಾತ್ ಮೇಲೆ ಕಣ್ಣಿಟ್ಟಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಚುನಾವನೆಯಲ್ಲಿ ಸೆಣೆಸಾಡಲು ಸಂಪೂರ್ಣ ತಯಾರಾಗಿದೆ. ಈಗಾಗಲೇ ಕೇಜ್ರಿವಾಲ್ ಗುಜರಾತ್ಗೆ ಹಲವು ಬಾರಿ ಭೇಟಿ ನೀಡಿದ್ದಾರೆ. ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದ ಜನರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸುವ ಭರವಸೆಗಳನ್ನು ನೀಡಿದ್ದಾರೆ.

ಭಾರತೀಯ ಜನತಾ ಪಕ್ಷ (ಬಿಜೆಪಿ) ಆಡಳಿತವಿರುವ ಗುಜರಾತ್ನಲ್ಲಿ ಈ ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿದೆ. ಹಿಮಾಚಲ ಪ್ರದೇಶದ ಚುನಾವಣಾ ದಿನಾಂಕ ಘೋಷಣೆಯ ಜೊತೆಗೆ ಗುಜರಾತ್ಗೂ ದಿನಾಂಕ ನಿಗದಿಯಾಗಬೇಕಿತ್ತು. ಆದರೆ, ಚುನಾವಣಾ ಆಯೋಗ ಕೆಲವು ಕಾರಣ ನೀಡಿ ದಿನಾಂಕಗಳನ್ನು ಘೋಷಿಸಿಲ್ಲ.












Click it and Unblock the Notifications