ದೇಶವ್ಯಾಪಿ ಮುಷ್ಕರ:ಯಾವ ಸೇವೆ ಲಭ್ಯ? ಯಾವುದು ಅಲಭ್ಯ?
ಬೆಂಗಳೂರು,ಆಗಸ್ಟ್ 31: ಸುಮಾರು 11ಕ್ಕೂ ಅಧಿಕ ಕಾರ್ಮಿಕ ಸಂಘಗಳು 12 ಕೋಟಿಗೂ ಅಧಿಕ ನೌಕರರು ಒಂದು ದಿನದ ಮಟ್ಟಿಗೆ ಸಾರಿಗೆ ಮುಷ್ಕರಕ್ಕೆ ಮುಂದಾಗಿರುವುದು ಗೊತ್ತಿರಬಹುದು. ಕೇಂದ್ರ ಸರ್ಕಾರ 12 ಅಂಶಗಳ ಬೇಡಿಕೆಯನ್ನು ಈಡೇರಿಸದ ಕಾರಣ ಸೆಪ್ಟೆಂಬರ್ 2 ರಂದು ಸಾರಿಗೆ ಸಂಪೂರ್ಣ ಬಂದ್ ನಡೆಸಲಾಗುತ್ತಿದೆ. ಸಾಲು ಸಾಲು ರಜೆಗಳ ನಡುವೆ ಶುಕ್ರವಾರ ಯಾವ ಸೇವೆ ಸಾರ್ವಜನಿಕರಿಗೆ ಲಭ್ಯವಿರುತ್ತದೆ? ಯಾವುದು ಲಭ್ಯವಿರುವುದಿಲ್ಲ ಎಂಬ ಮಾಹಿತಿ ಇಲ್ಲಿದೆ.
ಎಐಯುಟಿಯುಸಿ (All India United Trade Union Centre) ನೇತೃತ್ವದಲ್ಲಿ 11 ಕಾರ್ಮಿಕ ಸಂಘಟನೆಗಳು ಈಗಾಗಲೇ ಮುಷ್ಕರಕ್ಕೆ ಬೆಂಬಲ ನೀಡಿವೆ. ಕೆಎಸ್ ಆರ್ ಟಿಸಿ ಸಂಚಾರ ಸಹ ಬಂದ್ ಆಗಲಿದೆ. ಹೀಗಾಗಿ ದೇಶಾದ್ಯಂತ ಸಾರಿಗೆ ವ್ಯವಸ್ಥೆ ಸ್ತಬ್ಧವಾಗಲಿದೆ. [ಸೆ. 2ರ ಕಾರ್ಮಿಕ ಸಂಘಟನೆಗಳ ಮುಷ್ಕರ ಯಾಕೆ?]
ಕಟ್ಟಡ ಕಾರ್ಮಿಕರು, ಅಂಗನವಾಡಿ, ಆಶಾ ಕಾರ್ಯ ಕರ್ತೆಯರು, ಬಿಸಿಯೂಟ ನೌಕರರು, ಹಮಾಲಿಗಳು. ಆಟೋ ಕಾರ್ಮಿಕರಿಗೆ ಹಾನಿ ಮಾಡುತ್ತಿರುವ ಕೆಲ ನೀತಿಯನ್ನು ಕೈ ಬಿಡಬೇಕು ಎಂದು ಕಾರ್ಮಿಕ ಸಂಘಟನೆಗಳು ಆಗ್ರಹ ಮಾಡಲಿವೆ. [ಸೆ.2: ಸಾರಿಗೆ ಮುಷ್ಕರ, ಸರ್ಕಾರಿ ಬಸ್ ಕೂಡಾ ಸ್ಥಗಿತ]
ಕಾರ್ಮಿಕರ ಕನಿಷ್ಟ ವೇತನ ಹೆಚ್ಚಳ ಸೇರಿದಂತೆ 19ಕ್ಕೂ ಅಧಿಕ ಬೇಡಿಕೆಗಳನ್ನು ಸರ್ಕಾರ ಮುಂದಿಡಲಾಗಿದೆ. 12 ಅಂಶಗಳ ಬೇಡಿಕೆಗೆ ಇನ್ನೂ ಯಾವುದೇ ಭರವಸೆ ಸಿಕ್ಕಿಲ್ಲದ ಕಾರಣ ಮುಷ್ಕರ ನಡೆಸಲಾಗುತ್ತದೆ. ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಕನಿಷ್ಟ ವೇತನ ಏರಿಕೆ, ಅಸಂಘಟಿತ ವಲಯಗಳಿಗೆ ಭದ್ರತೆ ಬಗ್ಗೆ ಆಶ್ವಾಸನೆ ನೀಡಿದ್ದಾರೆ ಆದರೆ, ಇನ್ನೂ ಅಧಿಕೃತ ಘೋಷಣೆಯಾಗಿಲ್ಲ ಎಂದು ಅಖಿಲ ಭಾರತ ಕಾರ್ಮಿಕರ ಸಂಘದ ಕಾರ್ಯದರ್ಶಿ ಸಚ್ ದೇವ್ ಹೇಳಿದ್ದಾರೆ.

ನಾಲ್ಕು ದಿನ ಸಾಲು ಸಾಲು ರಜೆ
ದೇಶವ್ಯಾಪಿ ಸಾರಿಗೆ ಮುಷ್ಕರದಿಂದಾಗಿ ಜನರಿಗೆ ಸರಣಿ ರಜೆಗಳ ಅವಕಾಶ ಸಿಕ್ಕಿದೆ. ಶುಕ್ರವಾರ ಬಂದ್ ಇರುವುದರಿಂದ ಶನಿವಾರ ಒಂದು ದಿನ ರಜೆ ಸಿಕ್ಕಲ್ಲಿ, ಭಾನುವಾರದ ರಜೆಯ ಜತೆಗೆ ಗಣೇಶ ಚತುರ್ಥಿ ಪ್ರಯುಕ್ತ ಸೋಮವಾರವೂ ರಜೆ ಸಿಗಲಿದೆ. ಐಟಿ ನೌಕರರಿಗಂತೂ ಮೂರು ದಿನ ರಜೆ ಸಿಗಲಿದೆ.

ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿಲ್ಲ
ಬೆಂಗಳೂರಿನ ಸರ್ಕಾರಿ ಹಾಗೂ ಖಾಸಗಿ ಶಾಲಾ, ಕಾಲೇಜಿಗೆ ರಜೆ ಘೋಷಿಸಿಲ್ಲ.ಆಟೋ ಹಾಗೂ ಕ್ಯಾಬ್ ಆಧಾರಿತ ಶಾಲೆಗಳು ಪರಿಸ್ಥಿತಿ ನೋಡಿಕೊಂಡು ಶಾಲೆಗೆ ರಜೆ ಘೋಷಿಸುವ ಸಾಧ್ಯತೆಯಿದೆ.

ಆಟೋರಿಕ್ಷಾ ಹಾಗೂ ಖಾಸಗಿ ಬಸ್ ಇರಲ್ಲ
ಆಟೋ ಚಾಲಕರ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ಬಂದ್ಗೆ ಬೆಂಬಲ ನೀಡಿದೆ. ಕರ್ನಾಟಕ ರಕ್ಷಣಾ ವೇದಿಕೆಗೆ ಬೆಂಬಲಿತ ಆಟೋರಿಕ್ಷಾ ಮಾಲೀಕರ ಸಂಘಗಳು ಬಂದ್ ಬೆಂಬಲ ನೀಡಿರುವುದರಿಂದ ಕರವೇ ಆಟೋ ಚಾಲಕರ ಸಂಘವೂ ಸಂಚಾರ ಸ್ಥಗಿತಗೊಳಿಸಲಿದೆ. ಆದ್ದರಿಂದ, ಆಟೋಗಳು ರಸ್ತೆಗೆ ಇಳಿಯುವುದು ಅನುಮಾನ. ಇನ್ನು ಖಾಸಗಿ ಬಸ್ ಮಾಲೀಕರು ಕೂಡಾ ಬಂದ್ ಗೆ ಕೈಜೋಡಿಸಿದ್ದಾರೆ.

ಹೋಟೆಲ್ ಮಾಮೂಲಿಯಂತೆ ಇರಲಿದೆ
ಸ್ವಯಂ ಪ್ರೇರಿತವಾಗಿ ಬೆಂಬಲ ನೀಡುವಂತೆ ಕಾರ್ಮಿಕರ೦ ಒಕ್ಕೂಟ ಮನವಿ ಮಾಡಿದೆ. ಹೋಟೆಲ್ ಮಾಲೀಕರ ಸಂಘ ಬಂದ್ಗೆ ಬೆಂಬಲ ಘೋಷಿಸಿಲ್ಲ.. ಆದ್ದರಿಂದ, ಹೋಟೆಲ್ಗಳು ಬಾಗಿಲು ತೆರೆಯಲಿದೆ. ಸಣ್ಣ ಪುಟ್ಟ ರಸ್ತೆ ಬದಿ ಹೊಟೆಲ್ ಗಳು ತೆಗೆಯುವುದು ಅನುಮಾನ. ಆಸ್ಪತ್ರೆಗಳಲ್ಲಿನ ಕ್ಯಾಂಟೀನ್ ನಲ್ಲಿ ಊಟ ಲಭ್ಯ

ಏರ್ ಪೋರ್ಟ್ ಟ್ಯಾಕ್ಸಿ ಬಂದ್
ಸೆ. 1ರಿಂದಲೇ ಟ್ಯಾಕ್ಸಿ ಬಂದ್ ಆಗುವ ಲಕ್ಷಣಗಳಿವೆ. ಏರ್ ಪೋರ್ಟ್ ಟ್ಯಾಕ್ಸಿ, ಲಾರೀ ಮಾಲೀಕರು, ಟೂರಿಸ್ಟ್ ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಸಂಘಟನೆಗಳು ಕರ್ನಾಟಕ ಬಂದ್ಗೆ ಬೆಂಬಲ ನೀಡಿವೆ. ಆದ್ದರಿಂದ, ಟ್ಯಾಕ್ಸಿ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಆಪ್ಲಿಕೇಷನ್ ಆಧಾರಿತ ಟ್ಯಾಕ್ಸಿಗಳು ಸೇವೆ ಒದಗಿಸಲ್ಲ.

ಬ್ಯಾಂಕ್ ಹಾಗೂ ಅಂಚೆ ಕಚೇರಿ
ಕೇಂದ್ರ ಸರ್ಕಾರ ಬ್ಯಾಂಕ್ಗಳಲ್ಲಿ ತಿಂಗಳ 2 ಮತ್ತು 4 ನೇ ಶನಿವಾರವನ್ನು ಸಂಪೂರ್ಣ ರಜಾ ದಿನವನ್ನಾಗಿ ಘೋಷಿಸಲು ಒಪ್ಪಿಗೆ ನೀಡಿದೆ. ಆದ್ದರಿಂದ ಬ್ಯಾಂಕ್ ತೆರೆಯುವುದಿಲ್ಲ. ಸೆ. 2ರಂದು ಬ್ಯಾಂಕ್ ಮುಷ್ಕರ ಘೋಷಣೆ ಆಗಿದೆ.

ಯಾವ ವಾಹನಗಳಿರಲ್ಲ
ಕೆಎಸ್ಸಾರ್ಟಿಸಿ, ಬಿಎಂಟಿಸಿ, ಖಾಸಗಿ ಬಸ್ಗಳು, ಆಟೋ, ಟ್ರಕ್, ಮೆಟ್ರೋ ಎಲ್ಲವೂ ಬಂದ್. ಪೆಟ್ರೋಲ್ ಬಂಕ್ ಕೂಡಾ ಹಲವೆಡೆ ಬಂದ್ ಆಗಿರುವ ಸಾಧ್ಯತೆ ಕಡಿಮೆ.

ಏನಿರುತ್ತೆ? ಕ್ವಿಕ್ ಲುಕ್
ಆಂಬ್ಯುಲೆನ್ಸ್, ಆಸ್ಪತ್ರೆ, ಮೆಡಿಕಲ್ ಶಾಪ್, ಹಾಲು, ಎಟಿಎಂ ಸೇರಿದಂತೆ ಅಗತ್ಯ ವಸ್ತುಗಳ ಸೇವೆಗೆ ಬಂದ್ನಿಂದ ವಿನಾಯಿತಿ ನೀಡಲಾಗಿದೆ. ಹಾಲಿನ ವಾಹನ, ತರಕಾರಿ ಮಾರುಕಟ್ಟೆ, ಹಾಪ್ ಕಾಮ್ಸ್ ಕೆಲ ಕಾಲ ಓಪನ್ ಇರುತ್ತದೆ. ಏನು ಸಿಗುತ್ತದೆ ಎಂಬುದು ನಿಮ್ಮ ಅದೃಷ್ಟಕ್ಕೆ ಬಿಟ್ಟಿದ್ದು.

ಮನರಂಜನೆಗೆ ಮೋಸವಿಲ್ಲ
ಸಿನಿಮಾ ಥೇಯೇಟರ್, ಮಾಲ್, ಬಾರ್ & ರೆಸ್ಟೋರೆಂಟ್, ಹೋಟೆಲ್, ಎಲೆಕ್ಟ್ರಾನಿಕ್ಸ್ ಅಂಗಡಿ, ಬೀದಿ ವ್ಯಾಪಾರಿಗಳು, ವ್ಯಾಪಾರಿ ಮಳಿಗೆಗಳು ನಿರ್ವಹಿಸಲಿವೆ.












Click it and Unblock the Notifications