ಎಐಸಿಸಿ ಅಧ್ಯಕ್ಷರ ಚುನಾವಣಾ ಕಣಕ್ಕೆ ಕನ್ನಡಿಗ ಮಲ್ಲಿಕಾರ್ಜುನ್ ಖರ್ಗೆ!
ನವದೆಹಲಿ, ಸೆಪ್ಟೆಂಬರ್ 30: ಅಖಿಲ ಭಾರತ ಕಾಂಗ್ರೆಸ್ ಕಮಿಟಿ(ಎಐಸಿಸಿ) ಚುನಾವಣೆಯು ಕ್ಷಣಕ್ಷಣಕ್ಕೂ ಕದನ ಕೌತುಕತೆಯನ್ನು ಮೂಡಿಸುತ್ತಿದೆ. ಹೈಕಮಾಂಡ್ ಆಯ್ಕೆ ಮಾಡುವ ನಾಯಕರು ಯಾರು ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟನೆ ಸಿಗುತ್ತಿಲ್ಲ.
ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಕಾಂಗ್ರೆಸ್ಸಿನ ಮುಂದಿನ ಅಧಿಪತಿಯನ್ನು ಚುನಾಯಿಸಲಿದೆ. ಆದರೆ ಈಗಾಗಲೇ ಚುನಾವಣಾ ಅಖಾಡಕ್ಕೆ ಬಂದಿದ್ದ ಎರಡ್ಮೂರು ನಾಯಕರು ಕಣದಿಂದ ಹಿಂದೆ ಸರಿದಿದ್ದಾರೆ. ಹೈಕಮಾಂಡ್ ಆಯ್ಕೆ ಎನ್ನುವಂತೆ ಬಿಂಬಿಸಲಾಗಿದ್ದ ಅಶೋಕ್ ಗೆಹ್ಲೋಟ್, ಸಿಎಂ ಸ್ಥಾನಕ್ಕಾಗಿ ಎಐಸಿಸಿ ಚುನಾವಣೆಯಿಂದ ಕಾಲ್ಕಿತ್ತಿದ್ದು ಆಗಿದೆ.
ಕಾಂಗ್ರೆಸ್ಸಿನ ಮುಂದಿನ ಸಾರಥಿ ಆಗುವಂತೆ ಹೈಕಮಾಂಡ್ ನೀಡಿದ ಆಫರ್ ಅನ್ನು ಸ್ವತಃ ದಿಗ್ವಿಜಯ್ ಸಿಂಗ್ ಕೂಡ ತಳ್ಳಿ ಹಾಕಿದ್ದಾರೆ. ಕೊನೆಕ್ಷಣದಲ್ಲಿ ಎಐಸಿಸಿ ಚುನಾವಣಾ ಅಖಾಡದಿಂದ ದಿಗ್ವಿಜಯ್ ಸಿಂಗ್ ಕಾಲ್ಕಿತ್ತಿದ್ದಾರೆ. ಹಾಗಿದ್ದರೆ ಕಾಂಗ್ರೆಸ್ ಹೈಕಮಾಂಡ್ ಎದುರಿಗಿರುವ ಮುಂದಿನ ಆಯ್ಕೆ ಯಾರು?, ಜಿ-23 ನಾಯಕರ ತಂಡದಿಂದ ಎಐಸಿಸಿ ಅಧ್ಯಕ್ಷ ಚುನಾವಣಾ ಅಭ್ಯರ್ಥಿಯಾಗಿ ಶಶಿ ತರೂರ್ ಈಗಾಗಲೇ ಕಣಕ್ಕೆ ಧುಮುಕಿದ್ದಾರೆ. ಅದಾಗ್ಯೂ, ಹೈಕಮಾಂಡ್ ಪರವಾಗಿ ಯಾವ ನಾಯಕರು ಕಣಕ್ಕೆ ಇಳಿಯುತ್ತಾರೆ ಎಂಬುದು ಸ್ಪಷ್ಟವಾಗಿದೆ. ಇದರ ಮಧ್ಯೆ ಕರ್ನಾಟಕದ ಮೂಲದ ಮಲ್ಲಿಕಾರ್ಜುನ್ ಖರ್ಗೆ ಹೆಸರನ್ನು ಹೈಕಮಾಂಡ್ ಸೂಚಿಸುವ ಲಕ್ಷಣಗಳು ದಟ್ಟವಾಗಿ ಗೋಚರಿಸುತ್ತಿವೆ. ಈ ಕುರಿತು ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಈ ವರದಿಯಲ್ಲಿ ತಿಳಿದುಕೊಳ್ಳಿರಿ.

ಕಾಂಗ್ರೆಸ್ ಹೈಕಮಾಂಡ್ ಅಂಗಳದಲ್ಲಿ ಏನಾಗುತ್ತಿದೆ?:
* ಒಬ್ಬ ವ್ಯಕ್ತಿಗೆ ಒಂದು ಹುದ್ದೆ ನಿಯಮದ ಅಡಿಯಲ್ಲಿ, ರಾಜ್ಯಸಭೆ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಮಲ್ಲಿಕಾರ್ಜುನ್ ಖರ್ಗೆ ರಾಜೀನಾಮೆ ಸಲ್ಲಿಸುವ ಸಾಧ್ಯತೆಗಳಿವೆ
* ಶುಕ್ರವಾರ ಮಧ್ಯಾಹ್ನ 3 ಗಂಟೆಯೊಳಗೆ ಎಐಸಿಸಿ ಅಧ್ಯಕ್ಷ ಚುನಾವಣೆಗೆ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಶಶಿ ತರೂರ್ ನಾಮಪತ್ರ ಸಲ್ಲಿಸುವ ನಿರೀಕ್ಷೆಯಿದೆ
* ಗುರುವಾರವಷ್ಟೇ ಎಐಸಿಸಿ ಚುನಾವಣೆಗೆ ಸ್ಪರ್ಧಿಸುವುದಕ್ಕಾಗಿ ದಾಖಲೆಗಳನ್ನು ಪಡೆದುಕೊಂಡಿದ್ದ ದಿಗ್ವಿಜಯ್ ಸಿಂಗ್, ಶುಕ್ರವಾರ ಮಲ್ಲಿಕಾರ್ಜುನ್ ಖರ್ಗೆ ಭೇಟಿಯ ನಂತರ ತಮ್ಮ ನಿರ್ಧಾರವನ್ನು ಬದಲಿಸಿಕೊಂಡರು.
* ಗುರುವಾರ ರಾತ್ರಿ ನಡೆದ ಮಹತ್ವದ ಸಭೆಯೊಂದರಲ್ಲಿ ಚುನಾವಣೆಗೆ ಸ್ಪರ್ಧಿಸುವಂತೆ ಕೆಸಿ ವೇಣುಗೋಪಾಲ್, ಮಲ್ಲಿಕಾರ್ಜುನ್ ಖರ್ಗೆ ಮನವೊಲಿಸಿದರು ಎಂದು ತಿಳಿದು ಬಂದಿದೆ.
* ಕಾಂಗ್ರೆಸ್ ಜಿ-23 ತಂಡದ ಸದಸ್ಯರಲ್ಲಿ ಒಬ್ಬರಾಗಿರುವ ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪೇಂದ್ರ ಸಿಂಗ್ ಹೂಡಾ, ಕಳೆದ 2020ರಲ್ಲಿ ಸೋನಿಯಾ ಗಾಂಧಿಗೆ ಪತ್ರವನ್ನು ಬರೆದಿದ್ದರು. ಈ ಪತ್ರದಲ್ಲಿ ಕಾಂಗ್ರೆಸ್ಸಿನಲ್ಲಿ ಸಾಂಘಿಕ ಬದಲಾವಣೆ ಬಗ್ಗೆ ಉಲ್ಲೇಖಿಸಿದ್ದು, ಮಲ್ಲಿಕಾರ್ಜುನ್ ಖರ್ಗೆ ಪರವಾಗಿ ಬರೆದಿದ್ದರು.
* ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅನ್ನು ಈ ಮೊದಲು ಎಐಸಿಸಿ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕೋರಲಾಗಿತ್ತಾದರೂ, ರಾಜ್ಯ ಕಾಂಗ್ರೆಸ್ಸಿನಲ್ಲಿ ಸೃಷ್ಟಿಯಾದ ರಾಜಕೀಯ ಬಿಕ್ಕಟ್ಟನ್ನು ಗಮನದಲ್ಲಿ ಇಟ್ಟುಕೊಂಡು ಕಣದಿಂದ ಅವರು ಹಿಂದೆ ಸರಿದಿದ್ದರು. ಅದಕ್ಕಾಗಿ ಗೆಹ್ಲೋಟ್, ಸೋನಿಯಾ ಗಾಂಧಿಯವರಲ್ಲಿ ಕ್ಷಮಾಪಣೆ ಕೋರಿದರು.
* ಕಳೆದ 2020ರಲ್ಲಿ ತಮ್ಮ ವಿರುದ್ಧ ಬಂಡಾಯವೆದ್ದಿದ್ದ ಸಚಿನ್ ಪೈಲಟ್ ಅನ್ನು ಮುಖ್ಯಮಂತ್ರಿಯಾಗಿ ಸ್ವೀಕರಿಸುವುದಿಲ್ಲ ಎಂದು ಗೆಹ್ಲೋಟ್ ಬೆಂಬಲಿತ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲಿಂದ ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿ ಆಯಿತು. ಅಲ್ಲಿಯವರೆಗೂ ಗಾಂಧಿ ಕುಟುಂಬದ ಮೊದಲ ಆಯ್ಕೆ ಅಶೋಕ್ ಗೆಹ್ಲೋಟ್ ಆಗಿದ್ದರು.
* ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗುತ್ತಿದ್ದಂತೆ ಇದರ ನೈತಿಕ ಹೊಣೆಯನ್ನು ತಾವೇ ಹೊತ್ತುಕೊಳ್ಳುವುದಾಗಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದರು. ಅಲ್ಲದೇ ಮುಂದೆ ತಾವು ಮುಖ್ಯಮಂತ್ರಿ ಆಗಿ ಮುಂದುವರಿಯಬೇಕೇ ಬೇಡವೇ ಎಂಬುದು ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ನಿರ್ಧಾರಕ್ಕೆ ಬಿಟ್ಟಿದ್ದು ಎಂದು ಗೆಹ್ಲೋಟ್ ಹೇಳಿದರು.
* ಮುಖ್ಯಮಂತ್ರಿ ಸ್ಥಾನಕ್ಕಾಗಿ ಅಶೋಕ್ ಗೆಹ್ಲೋಟ್ ಉತ್ತರಾಧಿಕಾರಿ ಆಯ್ಕೆಗೆ ಕಾಂಗ್ರೆಸ್ ಸಿದ್ಧತೆ ನಡೆಸಿತು. ಇದರ ಬೆನ್ನಲ್ಲೇ ಗೆಹ್ಲೋಟ್ ಆಪ್ತರಾಗಿದ್ದ ಶಾಂತಿ ಧರಿವಾಲ್, ಮಹೇಶ್ ಜೋಶಿ ಮತ್ತು ಧರ್ಮೇಂದ್ರ ರಾಥೋಡ್ ಸೇರಿದಂತೆ 82 ಶಾಸಕರು ಅದಕ್ಕೆ ವಿರೋಧ ವ್ಯಕ್ತಪಡಿಸಿದರು. ಜೈಪುರದಲ್ಲಿರುವ ಧರಿವಾಲ್ ನಿವಾಸದಲ್ಲಿ ಸಭೆ ಸೇರಿದ ಒಟ್ಟು 82 ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಷರತ್ತು ಹಾಕಿದರು. ಅಲ್ಲದೇ ಸಿಎಂ ಉತ್ತರಾಧಿಕಾರಿ ಆಯ್ಕೆಗಾಗಿ ನಡೆದ ಶಾಸಕಾಂಗ ಸಭೆಯಿಂದ ಅಷ್ಟೂ ಶಾಸಕರು ದೂರ ಉಳಿದರು.












Click it and Unblock the Notifications