56 ರೈಲುಗಳ ಓಡಾಟ ಕ್ಯಾನ್ಸಲ್, ಚಂಡಮಾರುತದ ಅಬ್ಬರ ಜೋರು!
ಗುಜರಾತ್: ಕ್ಷಣಕ್ಷಣಕ್ಕೂ ಹೆಚ್ಚುತ್ತಿರುವ ಗಾಳಿ ತೀವ್ರತೆ. ಎಲ್ಲೆಲ್ಲೂ ಆವರಿಸಿದ ಮೋಡಗಳು & ಯಾವ ಕ್ಷಣದಲ್ಲೂ ಕೈಮೀರಿ ಹೋಗಬಹುದಾದ ಪರಿಸ್ಥಿತಿ. ಅಷ್ಟಕ್ಕೂ 'ಬಿಪರ್ಜಾಯ್' ಹೆಸರಿನ ಭೀಕರ ಚಂಡಮಾರುತದ ಪರಿಣಾಮ ತತ್ತರಿಸಿ ಹೋಗಿರುವ ಗುಜರಾತ್ನ ಪರಿಸ್ಥಿತಿ ಇದು. ಕ್ಷಣಕ್ಷಣಕ್ಕೂ ತೀವ್ರಗೊಳ್ಳುತ್ತಿರುವ ಸೈಕ್ಲೋನ್ ಅರಬ್ಬಿ ಸಮುದ್ರವನ್ನ ಅಲ್ಲಾಡಿಸಿದೆ.
'ಬಿಪರ್ಜಾಯ್' ಚಂಡಮಾರುತ ತೀವ್ರತೆ ಹೆಚ್ಚಾಗುತ್ತಿದ್ದಂತೆ ಈಗಾಗಲೇ ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ರದ್ದಾಗಿದೆ. ಬಲವಾದ ಗಾಳಿ ಮತ್ತು ಮಳೆಯಿಂದ ಮುಂಬೈ ವಿಮಾನ ನಿಲ್ದಾಣದ ಕೆಲ ರನ್ವೇ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಈ ನಡುವೆ ಸೈಕ್ಲೋನ್ ಅಬ್ಬರಿಸಲಿರುವ ಗುಜರಾತ್ನಲ್ಲಿ ರೈಲುಗಳ ಓಡಾಟಕ್ಕೂ ಬ್ರೇಕ್ ಬಿದ್ದಿದೆ. ಚಂಡಮಾರುತ ಪೀಡಿತ ಗುಜರಾತ್ನ ಪ್ರದೇಶಗಳಲ್ಲಿ ಇಂದು 56 ರೈಲುಗಳನ್ನು ರದ್ದುಗೊಳಿಸಲಾಗಿದೆ ಮತ್ತು ನಾಳೆಯಿಂದ ಜೂನ್ 15ರ ತನಕ ಒಟ್ಟು 95 ರೈಲುಗಳು 'ಬಿಪರ್ಜಾಯ್' ಪ್ರಭಾವದಿಂದಾಗಿ ರದ್ದುಗೊಂಡಿವೆ ಎಂದು ಪಶ್ಚಿಮ ರೈಲ್ವೆ ಪ್ರಯಾಣಿಕರಿಗೆ ಮಾಹಿತಿ ನೀಡಿದೆ.

ಅಲೆಗಳ ಅಬ್ಬರ, ಜನರು ತತ್ತರ!
ಗುಜರಾತ್ ಕರಾವಳಿಯಲ್ಲಿ ಹತ್ತಾರು ಅಡಿ ಎತ್ತರದ ಅಲೆ ಅಪ್ಪಳಿಸುತ್ತಿದ್ದು ಚಂಡಮಾರುತದ ತೀವ್ರತೆ ಹೆಚ್ಚಾಗುತ್ತಿದೆ. ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಶಕ್ತಿಯುತವಾಗಿ ಅಬ್ಬರಿಸಿದ್ದು, ಗುಜರಾತ್ನ 6 ಜಿಲ್ಲೆಗಳಲ್ಲಿ ವಿನಾಶ ಉಂಟುಮಾಡುವ ಸಾಧ್ಯತೆ ಇದೆ. ಈ ಕಾರಣಕ್ಕಾಗಿ ಇಲ್ಲಿ ಎಲ್ಲೋ ಅಲರ್ಟ್ ನೀಡಿದೆ ಹವಾಮಾನ ಇಲಾಖೆ. ಇದರ ಜೊತೆ ಮುನ್ನೆಚ್ಚರಿಕೆ ಕ್ರಮವಾಗಿ 56 ರೈಲುಗಳನ್ನ ರದ್ದುಗೊಳಿಸಲಾಗಿದೆ. ಹಾಗೇ ಇನ್ನಷ್ಟು ರೈಲುಗಳ ಓಡಾಟವೂ ಕ್ಯಾನ್ಸಲ್ ಆಗಿವೆ. ಅಂದಾಜು ಇನ್ನೂ ಒಂದು ವಾರ ಕಾಲ ಚಂಡಮಾರುತದ ಅಬ್ಬರ, ಪರಿಣಾಮ ಈ ಜಾಗಗಳ ಜನರನ್ನ ಕಾಡಲಿದೆ ಎನ್ನಲಾಗಿದೆ (Cyclone Biparjoy).
ಕರ್ನಾಟಕದಲ್ಲೂ ಮಳೆಯ ಅಬ್ಬರ!
ಅರಬ್ಬಿ ಸಮುದ್ರದಲ್ಲಿ ಎದ್ದಿರುವ ಚಂಡಮಾರುತಕ್ಕೆ ಬಿಪರ್ಜಾಯ್ ಎಂದು ಹೆಸರಿಡಲಾಗಿದ್ದು, ಬಾಂಗ್ಲಾ ದೇಶದಿಂದ ಬಂದಿದೆ. ಇನ್ನು ಬಿಪರ್ಜಾಯ್ ಅಂದ್ರೆ ಬಂಗಾಳಿ ಭಾಷೆಯಲ್ಲಿ ವಿಪತ್ತು ಅಥವಾ ಅಪಾಯ, ವಿನಾಶ ಹಾಗೂ ದುರಂತ ಎನ್ನುವ ಅರ್ಥವಿದೆ. ಮುಂದಿನ 2 ದಿನಗಳಲ್ಲಿ ಸೌರಾಷ್ಟ್ರ-ಕಚ್ ಪ್ರದೇಶದಲ್ಲಿ ಗಂಟೆಗೆ 30-40 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ಇಷ್ಟಲ್ಲದೆ ಜೂನ್ 13-15ರ ಅವಧಿಯಲ್ಲಿ ಕರಾವಳಿ ಪ್ರದೇಶಗಳಲ್ಲಿ ಗಂಟೆಗೆ 30-50 ಕಿಮೀ ವೇಗದಲ್ಲಿ ಗಾಳಿ ಬೀಸಬಹುದು ಎಂದು ಅಹ್ಮದಾಬಾದ್ ಐಎಂಡಿ ಕೇಂದ್ರ ಎಚ್ಚರಿಸಿದೆ. ಗುಜರಾತ್, ಮುಂಬೈ, ಗೋವಾ, ಕರ್ನಾಟಕ, ತಮಿಳುನಾಡಲ್ಲಿ ಮುಂದಿನ 4 ದಿನಗಳ ಕಾಲ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ.

ಪಾಕಿಸ್ತಾನದಲ್ಲೂ ತೀವ್ರ ಕಟ್ಟೆಚ್ಚರ
ಮುನ್ನೆಚ್ಚರಿಕೆ ಕ್ರಮವಾಗಿ ಗುಜರಾತ್ನ ಪೋರಬಂದರ್, ಗಿರ್ ಸೋಮನಾಥ್ ಮತ್ತು ವಲ್ಸಾದ್ ಜಿಲ್ಲೆಗಳಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ತಂಡಗಳನ್ನು ರವಾನಿಸಲಾಗಿದೆ. ಹಾಗೇ ಭಾರತೀಯ ಕೋಸ್ಟ್ ಗಾರ್ಡ್ ಗುಜರಾತ್, ದಮನ್ ಮತ್ತು ದಿಯು ಮೀನುಗಾರರು, ನಾವಿಕರಿಗೆ ಅಗತ್ಯ ಮುನ್ನೆಚ್ಚರಿಕೆ, ಸುರಕ್ಷತಾ ಕ್ರಮಗಳ ಬಗ್ಗೆ ಸಲಹೆ ನೀಡಿದೆ. ಇದರ ಜೊತೆ ಗುಜರಾತ್, ಕೇರಳ, ಕರ್ನಾಟಕ, ಮಹಾರಾಷ್ಟ್ರ ಮತ್ತು ಲಕ್ಷದ್ವೀಪ ಕರಾವಳಿಯ ಸಮುದ್ರಕ್ಕೆ ತೆರಳದಂತೆ ಮೀನುಗಾರರಿಗೆ ಸೂಚಿಸಲಾಗಿದೆ. ಬಿಪರ್ಜಾಯ್ ಚಂಡಮಾರುತ ಪಾಕಿಸ್ತಾನದ ಕರಾವಳಿಗೆ ಅಪ್ಪಳಿಸುವ ನಿರೀಕ್ಷೆ ಇದ್ದು, ಪಾಕಿಸ್ತಾನದ ಸಿಂಧ್ ಮತ್ತು ಬಲೂಚಿಸ್ತಾನದ ಅಧಿಕಾರಿಗಳಿಗೆ ಎಚ್ಚರಿಕೆ ವಹಿಸುವಂತೆ ಪಾಕಿಸ್ತಾನ ಸರ್ಕಾರ ಸೂಚಿಸಿದೆ.
ಒಟ್ನಲ್ಲಿ ಮತ್ತೊಂದು ಪ್ರಾಕೃತಿಕ ವಿಕೋಪಕ್ಕೆ ಭಾರತ ಸಜ್ಜಾಗಬೇಕಾದ ಸಂದರ್ಭ ಬಂದಿದೆ. ಹೀಗಾಗಿ ಹಲವು ರೈಲುಗಳ ಓಡಾಟವನ್ನ ರದ್ದು ಮಾಡಲಾಗಿದೆ. ಅದರಲ್ಲೂ ಬೆಂಗಳೂರು ಮೂಲಕ ತೆರಳುವ ಬಹುತೇಕ ರೈಲುಗಳನ್ನು ಚಂಡಮಾರುತದ ಅಬ್ಬರದ ಕಾರಣಕ್ಕೆ ರದ್ದು ಮಾಡಿ ರೈಲ್ವೆ ಇಲಾಖೆ ಸೂಚನೆ ಹೊರಡಿಸಿದೆ. ಈ ನಡುವೆ ಕೇಂದ್ರ ಸರ್ಕಾರ ಗುಜರಾತ್ನ ಪರಿಸ್ಥಿತಿ ಅವಲೋಕನ ಮಾಡುತ್ತಿದೆ. ಅಗ್ಯತವಿರುವ ಎಲ್ಲಾ ಸಹಾಯವನ್ನ ಗುಜರಾತ್ನಲ್ಲಿ ಜನರಿಗೆ ನೀಡಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಇದಲ್ಲದೆ ಮಹಾರಾಷ್ಟ್ರ & ಗೋವಾದ ಜನರು ಕೂಡ 'ಬಿಪರ್ಜಾಯ್' ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಪರದಾಡೋದು ಗ್ಯಾರಂಟಿ.












Click it and Unblock the Notifications