ಉತ್ತರ ಪ್ರದೇಶ: 54 ಜನರ ಸಾವಿಗೆ ಶಾಖದ ಅಲೆ ಕಾರಣವಲ್ಲ ಎಂದ ಅಧಿಕಾರಿಗಳು
ಲಕ್ನೋ, ಜೂನ್ 19: ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ಮೂರು ದಿನಗಳ ಅಂತರದಲ್ಲಿ 54 ಮಂದಿ ಸಾವನ್ನಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ. 400ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲಾಗಿದ್ದು ಸಾವಿನ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
54 ಜನರ ಸಾವಿಗೆ ಹಲವು ಕಾರಣಗಳನ್ನು ನೀಡಲಾಗುತ್ತಿದೆ. ಮೊದಲು ಶಾಖದ ಅಲೆಯ ಪರಿಣಾಮ ಇವರು ಸತ್ತಿದ್ದಾರೆ ಎನ್ನಲಾಗಿದ್ದರು, ಆದರೆ ಅಧಿಕಾರಿಗಳು ಮಾತ್ರ ಸಾವಿಗೆ ಕಾರಣ ಅಲ್ಲ ಎಂದು ಹೇಳಿದ್ದಾರೆ. ಬಲ್ಲಿಯಾ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಸ್ಟ್ರೆಚರ್ ಸಿಗದೇ ಪರದಾಡುವಂತಾಗಿದೆ.

ಜೂನ್ 15 ರಂದು 23, 16ರಂದು 20 ಮತ್ತು ಭಾನುವಾರ 11 ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಪೂರ್ವ ಉತ್ತರ ಪ್ರದೇಶ ಜಿಲ್ಲೆಯಲ್ಲಿ ಶವಪರೀಕ್ಷೆ ಮಾಡಿದ ಸರ್ಕಾರಿ ವೈದ್ಯರು ಸಾವುಗಳಿಗೆ ಶಾಖದ ಅಲೆ ಕಾರಣ ಎಂದು ದಾಖಲೆಯಲ್ಲಿ ಹೇಳಿದ್ದರು. ಆದರೆ, ಲಕ್ನೋದ ಹಿರಿಯ ಸರ್ಕಾರಿ ವೈದ್ಯರು ಈ ವರದಿಯನ್ನು ತಿರಸ್ಕರಿಸಿದ್ದು, ಈ ವಿಷಯವನ್ನು ಪರಿಶೀಲಿಸಲು ರಚಿಸಲಾದ ತನಿಖಾ ಸಮಿತಿಯ ಉಸ್ತುವಾರಿ ಇದು ಶಾಖದ ಅಲೆಯಿಂದ ಆಗಿರುವ ಸಾವಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಹಿರಿಯ ಸರ್ಕಾರಿ ವೈದ್ಯ ಎ.ಕೆ.ಸಿಂಗ್ ಸ್ಪಷ್ಟನೆ
"ಪ್ರಾಥಮಿಕವಾಗಿ, ಇದು ಶಾಖದ ಅಲೆಗಳಿಂದ ಉಂಟಾದ ಸಾವುಗಳಂತೆ ಕಂಡುಬರುವುದಿಲ್ಲ, ಏಕೆಂದರೆ ಇದೇ ರೀತಿಯ ಶಾಖದ ಅಲೆಯ ಪರಿಸ್ಥಿತಿಗಳನ್ನು ಎದುರಿಸುತ್ತಿರುವ ಹತ್ತಿರದ ಜಿಲ್ಲೆಗಳು ಇದೇ ರೀತಿಯ ಸಾವಿನ ಅಂಕಿ ಅಂಶಗಳು ವರದಿಯಾಗಿಲ್ಲ. ಸಾವನ್ನಪ್ಪಿದ ಬಹುತೇಕರ ಆರಂಭಿಕ ರೋಗಲಕ್ಷಣಗಳು ಎದೆನೋವು ಆಗಿದೆ, ಆದರೆ, ಹೀಟ್ವೇವ್ನಿಂದ ಬಳವುವವರಿಗೆ ಎದೆನೋವು ಮೊದಲ ಲಕ್ಷಣವಲ್ಲ." ಎಂದು ಹಿರಿಯ ಸರ್ಕಾರಿ ವೈದ್ಯ ಎ.ಕೆ.ಸಿಂಗ್ ಹೇಳಿದ್ದಾರೆ.
ಕಲುಷಿತ ನೀರಿನ ಸೇವನೆ ಕಾರಣ?
ಇನ್ನು ಈ ಸಾವುಗಳಿಗೆ ಕಲುಷಿತ ನೀರಿನ ಸೇವನೆ ಕಾರಣವಾಗಿರಬಹುದು ಎಂದು ಅವರು ಹೇಳಿದ್ದಾರೆ. "ಸಾವು ನೀರಿನಿಂದ ಸಂಭವಿಸಿದೆಯೇ ಅಥವಾ ಬೇರೆ ಕಾರಣಗಳಿವೆಯೇ ಎಂದು ತನಿಖೆ ನಡೆಸಲಾಗುವುದು. ಹವಾಮಾನ ಇಲಾಖೆಯು ನೀರಿನ ಮಾದರಿಗಳನ್ನು ಪರಿಶೀಲಿಸಲಿದೆ, ನಂತರ ಕಾರಣ ತಿಳಿಯಲಿದೆ" ಎಂದು ಅವರು ಹೇಳಿದರು.

ತಪ್ಪು ಮಾಹಿತಿ ನೀಡಿದ ವೈದ್ಯರ ಅಮಾನತು
ಬಲ್ಲಿಯಾ ಜಿಲ್ಲೆಯಲ್ಲಿ ಸಂಭವಿಸಿದ ಸಾವುಗಳಿಗೆ ಶಾಖದ ಅಲೆ ಕಾರಣ ಎಂದು ಹೇಳಿಕೆ ನೀಡಿದ್ದ ಮುಖ್ಯ ವೈದ್ಯಕೀಯ ಅಧೀಕ್ಷಕ ಶ್ರೇಣಿಯ ವೈದ್ಯರನ್ನು ಅಮಾನತು ಮಾಡಲಾಗಿದೆ. ಹೆಚ್ಚಿನ ಸಾವುಗಳಿಗೆ ಶಾಖದ ಅಲೆಯೇ ಕಾರಣ ಎಂದು ಅವರು ಹೇಳಿದ್ದರು. ಸರಿಯಾದ ಮಾಹಿತಿ ಇಲ್ಲದೇ, ಬೇಜವಾಬ್ದಾರಿ ಹೇಳಿಕೆ ನೀಡಿದ್ದಕ್ಕಾಗಿ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಉತ್ತರ ಪ್ರದೇಶ ಆರೋಗ್ಯ ಸಚಿವ ಬ್ರಜೇಶ್ ಪಾಠಕ್ ಹೇಳಿದ್ದಾರೆ.
ಬಲ್ಲಿಯಾ ಜಿಲ್ಲೆಯಲ್ಲಿ ನಡೆದ ಘಟನೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದು, ಪರಿಸ್ಥಿತಿಯನ್ನು ಗಮನಿಸಲಾಗುತ್ತಿದೆ ಎಂದು ಬ್ರಜೇಶ್ ಪಾಠಕ್ ಹೇಳಿದ್ದಾರೆ. ರೋಗಿಗಳ ಸಂಖ್ಯೆ ಹೆಚ್ಚಾದ ಕಾರಣ ಜಿಲ್ಲಾಸ್ಪತ್ರೆಯಲ್ಲಿ ನೂಕು ನುಗ್ಗಲು ಉಂಟಾಗಿದ್ದು, ಸ್ಟ್ರೆಚರ್ ಸಮಸ್ಯೆ ಉಂಟಾಗಿದೆ. ಅನೇಕ ಅಟೆಂಡರ್ಗಳು ತಮ್ಮ ರೋಗಿಗಳನ್ನು ತುರ್ತು ವಿಭಾಗಕ್ಕೆ ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿದ್ದಾರೆ ಎಂದು ವರದಿಯಾಗಿದೆ.
ಸರ್ಕಾರದ ವಿರುದ್ಧ ಆಕ್ರೋಶ
ಮೂರು ದಿನಗಳಲ್ಲಿ 54 ಜನ ಸಾವನ್ನಪ್ಪಿರುವುದು ಪ್ರತಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸಾವಿಗೆ ರಾಜ್ಯ ಸರ್ಕಾರವನ್ನು ದೂಷಿಸಿದ್ದಾರೆ. "ರಾಜ್ಯ ಸರ್ಕಾರದ ಬೇಜವಾಬ್ದಾರಿಯಿಂದ ರಾಜ್ಯದಲ್ಲಿ ಹಲವಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಜನತೆಗೆ ಶಾಖದ ಅಲೆ, ಅತ್ಯಧಿಕ ತಾಪಮಾನದ ಬಗ್ಗೆ ಮುನ್ನೆಚ್ಚರಿಕೆ ನೀಡಬೇಕಿತ್ತು, ಕಳೆದ 6 ವರ್ಷದಲ್ಲಿ ರಾಜ್ಯದಲ್ಲಿ ಒಂದೇ ಒಂದು ಜಿಲ್ಲಾಸ್ಪತ್ರೆ ನಿರ್ಮಾಣವಾಗಿಲ್ಲ. ಪ್ರಾಣ ಕಳೆದಕೊಂಡವರು ಬಡವರು, ಅವರಿಗೆ ಸಮಯಕ್ಕೆ ಸರಿಯಾಗಿ ಔಷಧಿ ಮತ್ತು ಚಿಕಿತ್ಸೆ ಸಿಕ್ಕಿಲ್ಲ" ಎಂದು ಹೇಳಿದರು.












Click it and Unblock the Notifications