ಪ್ರಧಾನ ಮಂತ್ರಿ ಜನ್ಮದಿನ; ರಕ್ತದಾನ ಮಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಹುಬ್ಬಳ್ಳಿ, ಸೆಪ್ಟೆಂಬರ್ 17 : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 72 ನೇ ಜನ್ಮ ದಿನಾಚರಣೆಯನ್ನು ಹುಬ್ಬಳ್ಳಿಯಲ್ಲಿ ರಕ್ತದಾನ ಮಾಡುವ ಮೂಲಕ ಮಾದರಿಯಾಗಿ ಆಚರಿಸಲಾಯಿತು.
ಹುಬ್ಬಳ್ಳಿ- ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ವಿವಿಧ ಸೇವಾ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ. ಸೇವಾ ಪಾಕ್ಷಿಕದ ಹೆಸರಲ್ಲಿ ಬೃಹತ್ ರಕ್ತದಾನ ಶಿಬಿರವನ್ನ ಹಮ್ಮಿಕೊಳ್ಳಲಾಗಿದ್ದು, ಗಿನ್ನಿಸ್ ದಾಖಲೆ ಬರೆಯುವ ಗುರಿ ಹೊಂದಲಾಗಿದೆ.
ಹುಬ್ಬಳ್ಳಿಯ ರಾಷ್ಟ್ರೋತ್ಥಾನ ರಕ್ತನಿಧಿಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಸ್ವತಃ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರಕ್ತದಾನ ಮಾಡಿದರು. ಕೇಂದ್ರ ಸಚಿವರಿಗೆ ಮಾಜಿ ಸಿಎಂ ಜಗದೀಶ ಶೆಟ್ಟರ್ ಹಾಗೂ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಸಾಥ್ ನೀಡಿದರು.
ಬಳಿಕ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ " ಪ್ರಧಾನಮಂತ್ರಿ ನರೇಂದ್ರ ಮೋದಿ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಹಲವು ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಹುಬ್ಬಳ್ಳಿ ಧಾರವಾಡದಲ್ಲಿ ಹಲವು ಕಡೆ ಸ್ವಯಂ ಪ್ರೇರಿತವಾಗಿ ರಕ್ತದಾನ ಸೇರಿ ವಿವಿದ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಯುವಕರು ಸಾಕಷ್ಠು ಸಂಖ್ಯೆಯಲ್ಲಿ ಆಗಮಿಸಿ ರಕ್ತದಾನ ಮಾಡುತ್ತಿದ್ದಾರೆ. ದಾಖಲೆಯ ಮಟ್ಟದಲ್ಲಿ ರಕ್ತದಾನ ನಡೆಯಲಿದೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು.

ಮೋದಿಗೆ ಶುಭಾರೈಸಿದ ಜೋಶಿ
ಪ್ರಧಾನಿ ನರೇಂದ್ರ ಮೋದಿ ದೇಶ ಕಂಡ ಅಪ್ರತಿಮ ರಾಜಕಾರಣಿಯಾಗಿದ್ದಾರೆ. ದೇಶದ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತಂದಿದ್ದಾರೆ. ಮೋದಿಯವರು ಸ್ವಚ್ಛ, ಸುಸ್ಥಿರ ಸಮರ್ಥ ಆಡಳಿತ ಕೊಟ್ಟವರು. ಏಕಕಾಲಕ್ಕೆ ಕಠೋರ ನಿರ್ಣಯಗಳನ್ನು ತೆಗೆದುಕೊಂಡವರು. ರಾಜಕೀಯವಾಗಿ ನಮ್ಮ ಹಿತಕ್ಕೆ ಇಲ್ಲದಾಗಲೂ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಪ್ರಧಾನಿ ಮೋದಿ ಭ್ರಷ್ಟಾಚಾರ ರಹಿತ ಆಡಳಿತ ಕೊಟ್ಟವರು. ಮೋದಿ ಜನ್ಮದಿನದಂದು ಅನೇಕರು ವಿವಿಧ ಕಾರ್ಯಕ್ರಮ ಮಾಡುತ್ತಿದ್ದಾರೆ. ಜನನಾಯಕನನ್ನ ಜನರು ಹೇಗೆ ಸ್ವೀಕಾರ ಮಾಡುತ್ತಾರೆ ಎಂಬುವುದಕ್ಕೆ ಇದು ಉದಾಹರಣೆಯಾಗಿದೆ. ಅವರು ನೂರು ವರ್ಷಕ್ಕೂ ಹೆಚ್ಚು ಕಾಲ ಮೋದಿಯವರು ಬಾಳಲಿ ಎಂದು ಹಾರೈಸುತ್ತೇನೆ ಎಂದು ಶುಭಕೋರಿದರು.

ಮಾಮನಿ ಅನಾರೋಗ್ಯದ ವದಂತಿ ಬೇಡ
ವಿಧಾನ ಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಅನಾರೋಗ್ಯ ವಿಚಾರವಾಗಿ ಮಾತನಾಡಿದ ಜೋಶಿ, ನಾನು ಎರಡು ಬಾರಿ ಮಾಮನಿರನ್ನು ಸಂಪರ್ಕ ಮಾಡಲು ಪ್ರಯತ್ನ ಮಾಡಿದ್ದೇನೆ. ಅವರ ಮೊಬೈಲ್ ಸ್ವಿಚ್ ಆಫ್ ಇದೆ. ಎರಡು ದಿನದ ಹಿಂದೆ ಅವರ ಅನಾರೋಗ್ಯದ ಬಗ್ಗೆ ನನಗೆ ಗೊತ್ತಾಗಿದೆ. ಅವರು ಶೀಘ್ರವಾಗಿ ಗುಣಮುಖರಾಗಲಿ. ಅವರು ನನಗೆ ಅತ್ಯಂತ ಆತ್ಮಿಯ ಸ್ನೇಹಿತ ಎಂದು ಹೇಳಿದರು.
ಸಾಮಾಜಿಕ ಜಾಲತಾಣದಲ್ಲಿ ಅವರ ಬಗ್ಗೆ ಯಾರು ತಪ್ಪು ಮಾಹಿತಿ ಹಾಕುತ್ತಿದ್ದಾರೆ. ಇದು ಅವರ ಕೆಲಸ ಅಲ್ಲಾ, ಆಗಲೇ ಅವರು ತಮ್ಮ ಬಗ್ಗೆ ಹೇಳಿಕೆ ಹಾಕಿದ್ದಾರೆ. ಯಾರೂ ಟ್ರೋಲ್ ಹಾಗೂ ಅನಗತ್ಯವಾಗಿ ಈ ರೀತಿ ಮಾಡಬಾರದು. ಆರೋಗ್ಯ ಯಾರಿಗೆ ಯಾವಾಗ ಏನಾಗುತ್ತೆ ಗೊತ್ತಿಲ್ಲ, ಅರಾಮಿದ್ದವರೇ ನಿಂತಲ್ಲೇ ಬಿದ್ದು ತೊಂದರೆ ಆದ ಉದಾಹರಣೆ ಇವೆ. ನಾವು ಭಗವಂತನಲ್ಲಿ ಅವರ ಅರೋಗ್ಯ ಸುಧಾರಿಸಿ ಬರಲಿ ಎಂದು ಪ್ರಾರ್ಥನೆ ಮಾಡಬಹುದು. ಅವರ ವದಂತಿ ಹಬ್ಬಿಸಬಾರದು ಎಂದರು.

ಕತ್ತಿ ಜಾಗಕ್ಕೆ ಸೂಕ್ತ ನಾಯಕನನ್ನು ಹುಡುಕುತ್ತೇವೆ
ಉಮೇಶ ಕತ್ತಿ ಅವರದು ಅಕಾಲಿಕ ನಿಧನ. ಅವರು ಉತ್ತರ ಕರ್ನಾಟಕದ ಬಗ್ಗೆ ಕಳಕಳಿ ಇದ್ದಂತ ವ್ಯಕ್ತಿ ಇದ್ದರು. ಅವರ ಅಗಲಿಕೆಯಿಂದ ನಮ್ಮ ಪಕ್ಷ ಹಾಗೂ ಆ ಭಾಗಕ್ಕೆ ಹಾನಿ ಯಾಗಿದೆ, ನಷ್ಟ ಆಗಿದೆ. ಜೀವನ ಇದು, ಅವರ ಜಾಗಕ್ಕೆ ಒಳ್ಳೆ ಕಾರ್ಯಕರ್ತರನ್ನ ಹುಡುಕುತ್ತೇವೆ. ಕತ್ತಿಯವರು ಅಭಿವೃದ್ಧಿ ವಿಷಯದಲ್ಲಿ ಒಳ್ಳೆ ಕೆಲಸ ಮಾಡಿದ್ದಾರೆ. ಅಂಥದ್ದೇ ವ್ಯಕ್ತಿಯನ್ನು ಹುಡುಕುತ್ತೇವೆ. ಈ ವೇಳೆ ಟಿಕೆಟ್ ಕೊಡುವ ವಿಚಾರಕ್ಕೆ ಇಷ್ಟು ಬೇಗ ಮಾತನಾಡುವದು ಸರಿಯಲ್ಲ ಎಂದು ಜೋಶಿ ಹೇಳಿದರು.

ಒತ್ತುವರಿ ಮಾಡಿರುವ ಎಲ್ಲರ ಮನೆ ತೆರವು
ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ತೆರವು ವಿಚಾರವಾಗಿ ಮಾತನಾಡಿದ ಕೇಂದ್ರ ಸಚಿವ ಜೋಶಿ, ನಾನು ಸಿಎಂ ಜೊತೆ ಮಾತನಾಡಿದ್ದೇನೆ. ಎಲ್ಲರದೂ ತೆರವು ಮಾಡುತಿದ್ದೇವೆ ಎಂದು ಹೇಳಿದ್ದಾರೆ. ಬಡವರ ಮನೆ ಅಷ್ಟೇ ತೆರವು ಮಾಡುತಿದ್ದಾರೆ ಎಂದು ದೂರು ಇದ್ದರೆ ಬಿಬಿಎಂಪಿಗೆ ಕೊಡಲಿ. ಸರಕಾರ ಹಾಗೂ ಬಿಬಿಎಂಪಿ ಸೂಕ್ರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.












Click it and Unblock the Notifications