Dharwad Ticket: ಹಳಬರಿಗೆ 'ಕೊಕ್' ಹೊಸಬರಿಗೆ ಟಿಕೆಟ್: ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ
ಹುಬ್ಬಳ್ಳಿ, ಮಾರ್ಚ್ 08: ಲೋಕಸಭಾ ಚುನಾವಣೆ ಕಾವು ಕರ್ನಾಟಕದಲ್ಲಿ ಹೆಚ್ಚಾಗುತ್ತಿದೆ. ಈ ಮಧ್ಯೆ ಯಾರಿಗೆಲ್ಲ ಟಿಕೆಟ್ ಸಿಗಲಿದೆ, ಯಾರಿಗೆ ಕ್ಷೇತ್ರ ಕೈತಪ್ಪಲಿದೆ ಎಂಬೆಲ್ಲ ವಿಚಾರಗಳು ಮುನ್ನೆಲೆಗೆ ಬರುತ್ತಿವೆ. ಈ ಟಿಕೆಟ್ ಹಂಚಿಕೆಯ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಮಹತ್ವದ ಮಾಹಿತಿ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಶುಕ್ರವಾರ ಮಹಾಶಿವರಾತ್ರಿ ಪೂಜಾ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೆಲವು ಪ್ರಶ್ನೆಗಳಿಗೆ ಉತ್ತಿರಿಸಿದರು.

ಲೋಕಸಭೆ ಟಿಕೆಟ್ ಹಂಚಿಕೆ ಬಗ್ಗೆ ಊಹಾಪೋಹದ ಮಾತು ಬೇಡ. ಎಲ್ಲವನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. ಬಿಜೆಪಿಯಲ್ಲಿ ಹಾಲಿ ನಾಯಕರಿಗೆ (ಹಳಬರಿಗೆ) ಈ ಬಾರಿ ಲೋಕಸಭಾ ಚುನಾವಣೆ ಟಿಕೆಟ್ ಕೊಡುವುದಿಲ್ಲ. ಅಥವಾ ಹೊಸಬರಿಗೆ ಅವಕಾಶ ಕೊಡುತ್ತಾರೆ ಎಂಬ ಮಾತನ್ನು ಅವರು ತಳ್ಳಿ ಹಾಕಿದರು.
3ರಿಂದ 4 ಬಾರಿ ಆಯ್ಕೆ ಆದವರಿಗೂ ಟಿಕೆಟ್
ಬಿಜೆಪಿಯಲ್ಲಿ ಈ ಬಾರಿ ಹಳಬರನ್ನು ಬಿಟ್ಟು ಹೊಸ ಬರಿಗೆ ಮಣೆ ಹಾಕುತ್ತಾರೆ. ಕೆಲವು ಹಿರಿಯ ನಾಯಕರಿಗೆ ಟಿಕೆಟ್ ಸಿಗಲ್ಲ ಎಂಬುದೆಲ್ಲ ಉಹಾಪೋಹ ಅಷ್ಟೆ. ಇದಕ್ಕೆ ಉತ್ತರ ಕೊಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
3ರಿಂದ 4 ಬಾರಿ ಆಯ್ಕೆಯಾದವರಿಗೂ ಟಿಕೆಟ್ ಕೊಡಲಾಗಿದೆ. 8 ಬಾರಿ ಗೆದ್ದವರಿಗೂ ಅವಕಾಶ ಕೊಡಲಾಗಿದೆ. ಹೈಕಮಾಂಡ್ ಆಯಾ ಕ್ಷೇತ್ರ, ಅಭ್ಯರ್ಥಿ, ಅಲ್ಲಿನ ಸ್ಥಿತಿಗತಿ ಎಲ್ಲವನ್ನು ಪರಿಗಣಿಸಿ ಟಿಕೆಟ್ ಹಂಚಿಕೆ ಮಾಡಲಿದೆ ಎಂದು ಸಚಿವ ಜೋಶಿ ಸ್ಪಷ್ಟಪಡಿಸಿದರು.

ಟಿಕೆಟ್ ಕೊಡಲ್ಲ ಎಂಬುದು ಊಹಾಪೋಹ
ಟಿಕೆಟ್ ಹಂಚಿಕೆ ಕುರಿತಂತೆ ಹೈಕಮಾಂಡ್ ಎಲ್ಲವನ್ನು ತೀರ್ಮಾನ ಮಾಡುತ್ತದೆ. 2024ರಲ್ಲಿ ಹಳಬರಿಗೆ ಟಿಕೆಟ್ ಕೊಡಲ್ಲ, ಹೊಸಬರಿಗೆ ಮಣೆ ಹಾಕುತ್ತಾರೆ ಎಂಬೆಲ್ಲ ಮಾತುಗಳು ಊಹಾಪೋಹ ಎಂದು ತಿಳಿಸಿದರು.
ಸರ್ಕಾರದ ಪ್ರಮುಖ ಯೋಜನೆಯಾದ ನರೇಗಾ ಹಣ ಬಳಕೆ ಬಗ್ಗೆ ಅನೇಕ ರಾಜ್ಯಗಳಲ್ಲಿ ಮಾಹಿತಿ ಕೊಟ್ಟಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ ಸಹ ಆಡಿಟ್ ರಿಪೋರ್ಟ್ ಕೊಟ್ಟಿಲ್ಲ ಎಂದು ಹೇಳಿದರು.
ಮಹಾದಾಯಿ ಯೋಜನೆಗೆ ಕಾಂಗ್ರೆಸ್ ಅಡ್ಡಗಾಲು
ಮಹದಾಯಿ ನದಿ ನೀರು ಯೋಜನೆಗೆ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ. ಕಾಂಗ್ರೆಸ್ನವರು ಮಹದಾಯಿಗೆ ಅಡ್ಡಗಾಲು ಹಾಕುವುದನ್ನು ಬಿಟ್ಟರೆ ಬೇರೇನೂ ಮಾಡಿಲ್ಲ. ಗೋವಾಕ್ಕೆ ಹೋಗಿ ಹನಿ ನೀರು ಬಿಡಲ್ಲ ಅಂದವರು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರೇ ಹೊರತು ನಾವಲ್ಲಾ ಎಂದು ಪ್ರಹ್ಲಾದ್ ಜೋಶಿ ಮಹದಾಯಿ ಯೋಜನೆ ವಿಳಂಬ ಕುರಿತು ಕಾಂಗ್ರೆಸ್ಗೆ ತಿರುಗೇಟು ನೀಡಿದರು.
ಪ್ರಧಾನಿ ನರೇಂದ್ರ ಮೋದಿಯವರು ಸಿಲಿಂಡರ್ ದರವನ್ನು 300 ರೂಪಾಯಿ ಇಳಿಸಿ ಮಹಿಳಾ ದಿನಾಚರಣೆಗೆ ಕೊಡುಗೆ ನೀಡಿದ್ದಾರೆ ಎಂದು ಕೇಂದ್ರದ ನಿರ್ಧಾರವನ್ನು ಅವರು ಶ್ಲಾಘಿಸಿದರು.
ಇದಕ್ಕು ಮೊದಲು ಸಚಿವ ಪ್ರಹ್ಲಾದ್ ಜೋಶಿಯವರು ಹುಬ್ಬಳ್ಳಿಯ ಮೈದಾನದಲ್ಲಿ ನಡೆದ ಅದ್ಧೂರಿ ಶಿವರಾತ್ರಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.












Click it and Unblock the Notifications