NWKRTC: ಹುಬ್ಬಳ್ಳಿಯಿಂದ ಇಲ್ಲಿಗೆ 'ವೇಗಧೂತ' ಬಸ್ ಸೇವೆ ಆರಂಭ: ಮಾರ್ಗ, ವೇಳಾಪಟ್ಟಿ ಮಾಹಿತಿ ಇಲ್ಲಿದೆ
ಹುಬ್ಬಳ್ಳಿ, ಮಾರ್ಚ್ 08: ವಾಣಿಜ್ಯ ನಗರಿಯಾದ ಶ್ರೀ ಸಿದ್ಧಾರೂಢರ ಪುಣ್ಯಭೂಮಿ ಹುಬ್ಬಳ್ಳಿಯಿಂದ ಕಾಲಜ್ಞಾನಿ ಕೊಡೇಕಲ್ಲ ಶ್ರೀ ಬಸವೇಶ್ವರರ ನಾಡಿಗೆ ನೇರ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) 'ವೇಗಧೂತ' ಬಸ್ಗಳ ಕಾರ್ಯಾಚರಣೆ ಆರಂಭಿಸಿದೆ. ಈ ಬಸ್ ಮಾರ್ಗ, ಪ್ರಯಾಣ ಸಮಯ, ಸ್ಥಳ, ವೇಳಾಪಟ್ಟಿ ಮಾಹಿತಿ ಇಲ್ಲಿ ತಿಳಿಯಿರಿ.
ಹುಬ್ಬಳ್ಳಿಯಿಂದ-ಕೊಡೇಕಲ್ಲ- ಹುಣಸಗಿ ನಡುವೆ ನೂತನ ಬಸ್ ಸಂಚಾರ ಸೇವೆಗೆ ಶುಕ್ರವಾರ ನಗರದ ಹೊಸೂರು ಬಸ್ ನಿಲ್ದಾಣದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಚಾಲನೆ ನೀಡಿದರು.

ಶಿಕ್ಷಣ, ವ್ಯಾಪಾರ, ಉದ್ಯೋಗ ಮತ್ತಿತರ ಕಾರಣಗಳಿಂದ ಕಲ್ಯಾಣ ಕರ್ನಾಟಕ ಭಾಗದ ಸಗರನಾಡಿನಿಂದ ಬಹಳಷ್ಟು ವಿದ್ಯಾರ್ಥಿಗಳು, ಸಾರ್ವಜನಿಕರು ನಿತ್ಯ ಹುಬ್ಬಳ್ಳಿಗೆ ಬಂದು ಹೋಗುತ್ತಾರೆ. ಆದರೆ ಅವರಿಗೆ ಹುಬ್ಬಳ್ಳಿಗೆ ನೇರ ಬಸ್ ಸೌಲಭ್ಯವಿರಲಿಲ್ಲ. ಈ ಸಂಬಂಧ ಬಹಳಷ್ಟು ಬೇಡಿಕೆಗಳು, ಬಸ್ ಸೇವೆ ಆಗ್ರಹ ಕೇಳಿ ಬಂದಿತ್ತು.
ನೇರ ಬಸ್ ಇಲ್ಲದೇ ಸಮಸ್ಯೆ
ಈ ಮಾರ್ಗದಲ್ಲಿ ಎರಡು, ಮೂರು ಬಸ್ಸುಗಳನ್ನು ಬದಲಾಯಿಸಿ ಪ್ರಯಾಣ ಮಾಡುವ ಅನಿವಾರ್ಯತೆ ಪ್ರಯಾಣಿಕರಿಗೆ ಇತ್ತು. ಇದರಿಂದ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಮಕ್ಕಳು ಲಗ್ಗೇಜುಗಳೊಂದಿಗೆ ಮಹಿಳೆಯರು ಸೇರಿದಂತೆ ನೇರ ಪ್ರಯಾಣಿಕರಿಗೆ ಬಹಳ ತೊಂದರೆಯಾಗುತ್ತಿತ್ತು.
ಬಹುದಿನಗಳ ಬೇಡಿಕೆ ಈಡೇರಿಕೆ
ಈ ಮಾರ್ಗದ ಸಾರ್ವಜನಿಕರ ಅನುಕೂಲಕ್ಕಾಗಿ ಕಾಲಜ್ಞಾನಿ ಕೊಡೇಕಲ್ಲ ಬಸವೇಶ್ವರರ ಸಗರನಾಡಿನಿಂದ ವಾಣಿಜ್ಯ ರಾಜಧಾನಿಯೂ ಆದ ಸಿದ್ಧಾರೂಡರ ಪುಣ್ಯಭೂಮಿ ಹುಬ್ಬಳ್ಳಿ ನಡುವೆ ನೇರ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಮೂಲಕ ಸಾರ್ವಜನಿಕರು ಹಾಗೂ ಪ್ರಯಾಣಿಕರು ಬಹುದಿನಗಳಿಂದ ಬೇಡಿಕೆ ಈಡೇರಿಸಲಾಗಿದೆ ಎಂದು ಅಧಿಕಾರಿ ರಾಮನಗೌಡರ ತಿಳಿಸಿದರು.

ಮಹಾಶಿವರಾತ್ರಿ ಪ್ರಯುಕ್ತ ಕೊಡೆಕಲ್ಲ ಬಸವೇಶ್ವರ ದೆವಸ್ಥಾನದಲ್ಲಿ 'ಕಾಲಜ್ಞಾನದ ಶಿವರಾತ್ರಿ ನುಡಿ' ಹಾಗೂ ಸಿದ್ಧಾರೂಢ ಜಾತ್ರೆಯ ಮುನ್ನಾದಿನ ಹುಬ್ಬಳ್ಳಿ- ಕೊಡೆಕಲ್ಲ- ಹುಣಸಗಿ ಮಾರ್ಗದಲ್ಲಿ 'ವೇಗದೂತ ಬಸ್' ಸಂಚಾರವನ್ನು ಆರಂಭಿಸಿರುವುದು ಭಕ್ತರು ಹಾಗೂ ಸಾರ್ವಜನಿಕರಲ್ಲಿ ಸಂತಸ ಉಂಟು ಮಾಡಿದೆ.
ಬಸ್ ಸಂಚಾರ ಸಮಯ-ವೇಳಾಪಟ್ಟಿ
ಹುಬ್ಬಳ್ಳಿಯಿಂದ ಹುಣಸಗಿಗೆ ತೆರಳವು ಬಸ್ಗಳು ಹೊಸೂರು ಬಸ್ ನಿಲ್ದಾಣದಿಂದ ಮಧ್ಯಾಹ್ನ 3.00 ಗಂಟೆಗೆ ಹೊರಡುತ್ತದೆ. ಈ ಬಸ್ಸು ನವಲಗುಂದ, ನರಗುಂದ, ಬಾಗಲಕೋಟೆ, ಮುದ್ದೆಬಿಹಾಳ, ನಾಲತವಾಡ, ನಾರಾಯಣಪುರ, ಕೊಡೇಕಲ್ಲ ಮಾರ್ಗವಾಗಿ ಹಾದು ರಾತ್ರಿ 10.00 ಗಂಟೆಗೆ ಹುಣಸಗಿಗೆ ತಲುಪುತ್ತದೆ ಎಂದರು.
ಹುಣಸಗಿಯಿಂದ ಮರಳಿ ಹುಬ್ಬಳ್ಳಿ ಮತ್ತದೇ ಬಸ್ ಮರಳಲಿದೆ. ಮರುದಿನ ಬೆಳಗ್ಗೆ 5.30 ಗಂಟೆಗೆ ಹುಣಸಗಿಯಿಂದ ಹೊರಟು ಮಧ್ಯಾಹ್ನ 1.00 ಗಂಟೆಗೆ ಹುಬ್ಬಳ್ಳಿಗೆ ಹೊಸೂರು ಬಸ್ ನಿಲ್ದಾಣಕ್ಕೆ ಆಗಮಿಸಲಿದೆ.
ವಿದ್ಯಾರ್ಥಿಗಳು, ಸಾರ್ವಜನಿಕರು, ಪ್ರಯಾಣಿಕರ ಪ್ರತಿಕ್ರಿಯೆ ಗಮನಿಸಿ ಈ ಮಾರ್ಗದಲ್ಲಿ ರಾತ್ರಿ ಸಾರಿಗೆ ಬಸ್ ಸಂಚಾರವನ್ನು ಸಹ ಆರಂಭಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಈ ವೇಳೆ ವಿಭಾಗೀಯ ಸಂಚಾರ ಅಧಿಕಾರಿ ಕೆ.ಎಲ್.ಗುಡೆಣ್ಣವರ, ಸಂಚಾರ ಅಧೀಕ್ಷಕ ಐ.ಜಿ.ಮಾಗಾಮಿ, ನಿಲ್ದಾಣಾಧಿಕಾರಿ ಸುಭಾಸ್ ಮತ್ತಿತರರು ಉಪಸ್ಥಿತರಿದ್ದರು.
ಇತ್ತೀಚೆಗೆ ಹುಬ್ಬಳ್ಳಿ ಯಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ವಿಜಯನಗರ ಜಿಲ್ಲೆಯ ಉಜ್ಜಯಿನಿ ಕ್ಷೇತ್ರಕ್ಕೆ ಬಸ್ಗಳ ಸೇವೆ ಆರಂಭಿಸಿತ್ತು. ಇದರ ಬೆನ್ನಲ್ಲೆ ಹುಬ್ಬಳ್ಳಿಯಿಂದ ಕೊಡೇಕಲ್ಲಗೆ ಬಸ್ ಸೇವೆ ಲಭ್ಯವಾಗಿದೆ.
ನಗದು ರಹಿತ ಡಿಜಿಟಲ್ ವಹೀವಾಟಿಗೆ ಆದ್ಯತೆ
ಕರ್ನಾಟಕ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ನಗದು ರಹಿತ ಡಿಜಿಟಲ್ ವಹೀವಾಟಿಗೆ ಆದ್ಯತೆ ನೀಡುತ್ತಿದೆ. ಈ ಸಂಬಂಧ ತನ್ನೆಲ್ಲ ಘಟಕಗಳಲ್ಲಿ ಇತ್ತೀಚೆಗೆ ಕಾರ್ಯಕ್ರಮ ಹಮ್ಮಿಕೊಂಡಿದೆ. ನಗದು ರಹಿತ ಸೇವೆಯಲ್ಲಿ ಪ್ರಯಾಣಿಕರು ಕ್ಯೂಆರ್ ಕೋಡ್ ಮೂಲಕ ಹಣ ಪಾವತಿಸಿ ಟಿಕೆಟ್ ಪಡೆಯಬಹುದು. ಇದರಿಂದ ಚಿಲ್ಲರೆ ಸಮಸ್ಯೆ ಉದ್ಭವಿಸುವುದಿಲ್ಲ.












Click it and Unblock the Notifications