Price Hike: ಮುಂಗಾರು ಹಂಗಾಮಿಗೆ ಸಿದ್ಧತೆ: ರೈತರಿಗೆ 'ಬಿತ್ತನೆ ಬೀಜ' ದರ ಏರಿಕೆ ಹೊಡೆತ
ಹುಬ್ಬಳ್ಳಿ, ಮೇ 25: ಸತತವಾಗಿ ನಾಲ್ಕು ವರ್ಷಗಳಿಂದ ಬರಗಾಲ, ಇದರ ಜೊತೆಗೆ ಆಗಾವಾಗ ಅನಾವೃಷ್ಠಿ ಕೂಡ ಸಂಭವಿಸಿದೆ. ಈ ಪರಿಸ್ಥಿತಿಗಳ ನಡುವೆಯೂ ಈ ವರ್ಷ ಸಹ ಆಶಾಭಾವನೆ ಮೂಡುತ್ತಿದೆ. ಪ್ರಸಕ್ತ ಸಾಲಿನ ಮುಂಗಾರು ಪೂರ್ವ ಉತ್ತಮ ಮಳೆ ಆಗುತ್ತಿದೆ. ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಆದರೆ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿರುವ ಅನ್ನದಾತರಿಗೆ ಬರದ ಬೆನ್ನಲ್ಲೇ ಬಿತ್ತನೆ ಬೀಜದ ದರ ಏರಿಕೆ ಬಿಸಿ ತಟ್ಟುತ್ತಿದೆ.
ಹೌದು, ಇನ್ನೂ ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ವಿತರಿಸುವ ಬೀಜದ ದರ ಕಳೆದ ವರ್ಷಕ್ಕೆ ಹೋಲಿಸಿದರೆ ಭಾರೀ ಹೆಚ್ಚಳವಾಗಿದೆ. ಪ್ರತಿ ಕೆಜಿಗೆ ವಿವಿಧ ಬಿತ್ತನೆ ಬೀಜದ ದರ 2ರಿಂದ 61 ರೂ. ವರೆಗೆ ಹೆಚ್ಚಳವಾಗಿದೆ. ಸೋಯಾಬಿನ್ ಬೀಜದ ದರ ಮಾತ್ರ ಪ್ರತಿ ಕೆಜಿಗೆ 7 ರೂ. ಕಡಿಮೆಯಾಗಿದೆ. ಉಳಿದ ಎಲ್ಲಾ ಬೀಜಗಳ ದರ ಏರಿಕೆಯಾಗಿದೆ. ಇದು ಬರಗಾಲದಲ್ಲಿ ಆರ್ಥಿಕ ಹೊಡೆತಕ್ಕೆ ಸಿಲುಕಿದ ಜನರಿಗೆ ಮತ್ತೊಂದು ಶಾಕ್ ನೀಡಿದೆ.

ಹೆಸರು, ಉದ್ದು, ತೊಗರಿ ಮುಂತಾದ ಬೀಜಗಳು 5 ಕೆಜಿ, ಸೋಯಾಬಿನ್ ಮತ್ತು ಶೇಂಗಾ 30 ಕೆಜಿ, ಗೋವಿನಜೋಳ 4 ಕೆಜಿ ಪ್ಯಾಕೇಟ್ ಚೀಲಗಳು ಬರುತ್ತವೆ. ವಿವಿಧ ಬೀಜಗಳ ಪ್ಯಾಕೇಟ್ ಚೀಲದ ದರ 60ರಿಂದ 304 ರೂ. ವರೆಗೆ ಹೆಚ್ಚಾಗಿದೆ. 5 ಎಕರೆಗೆ ಮಾತ್ರ ರಿಯಾಯಿತಿ ನೀಡಲಾಗುತ್ತಿದ್ದು, ಉಳಿದ ಬೀಜಗಳನ್ನು ಮಾರುಕಟ್ಟೆ ದರದಲ್ಲಿ ಖರೀದಿಸಬೇಕಾಗಿದೆ.
ಸಹಾಯಧನದ ಮಾಹಿತಿ
ಸಾಮಾನ್ಯ ವರ್ಗದ ರೈತರಿಗೆ ಹೆಸರು, ಉದ್ದು, ತೋಗರಿ ಸೋಯಾಬಿನ್ ಬೀಜಕ್ಕೆ ಪ್ರತಿ ಕೆಜಿಗೆ 25 ರೂ., ಶೇಂಗಾ ಬೀಜಕ್ಕೆ ಪ್ರತಿ ಕೆಜಿಗೆ 14 ರೂ. ಹಾಗೂ ಗೋವಿನ ಜೋಳಕ್ಕೆ ಪ್ರತಿ ಕೆಜಿಗೆ 20 ರೂ ಸಹಾಯಧನ ನೀಡಲಾಗುತ್ತಿದೆ. ಎಸ್ಸಿ/ಎಸ್ಟಿಗೆ ಹೆಸರು, ಉದ್ದು, ತೊಗರಿ, ಸೋಯಾಬಿನ್ ಬೀಜಕ್ಕೆ ಪ್ರತಿ ಕೆಜಿ 37 ರೂ., ಶೇಂಗಾ ಪ್ರತಿ ಕೆಜಿಗೆ 14 ರೂ. ಹಾಗೂ ಗೋವಿನ ಜೋಳಕ್ಕೆ ಪ್ರತಿ ಕೆಜಿಗೆ 30 ರೂ. ಸಹಾಯಧನ ನೀಡಲಾಗುತ್ತಿದೆ.

ಗೊಬ್ಬರದ ಕಥೆ ಏನು?:
ಯೂರಿಯಾ 48 ಕೆಜಿಗೆ 266 ರೂ., ಡಿಎಪಿ 50 ಕೆಜಿಗೆ 1,350 ರೂ., ಎಂಒಪಿ 50 ಕೆಜಿಗೆ 1,700 ರೂ., ಎಸ್ಎಸ್ಪಿ 50 ಕೆಜಿಗೆ 500ರಿಂದ 700 ರೂ. ದರವಿದೆ. ಕಾಂಪ್ಲೆಕ್ಸ್ನಲ್ಲಿ 50 ಕೆಜಿಗೆ ಪ್ಯಾಕ್ಟ್ (20.20) 1,225ರೂ., ಪ್ಯಾಕ್ಟ್ 1,200 ರೂ. ಮತ್ತು ಇಪ್ಕೋ 1,250 ರೂ. ನಿಗದಿಪಡಿಸಲಾಗಿದೆ.
ಕೆಲ ಸೊಸೈಟಿಗಳಲ್ಲಿ ಡಿಎಪಿ ಗೊಬ್ಬರ ತೆಗೆದುಕೊಳ್ಳುವಾಗ ಅದರೊಟ್ಟಿಗೆ ಒಂದು ಲೀಟರ್ನ ನ್ಯಾನೋ ಯೂರಿಯಾ ಲಿಕ್ವಿಡ್ ತೆಗೆದುಕೊಂಡರೆ ಮಾತ್ರ ಡಿಎಪಿ ಗೊಬ್ಬರ ಕೊಡುತ್ತಿದ್ದು, ಇದು ರೈತರ ಆಕ್ರೋಶಕ್ಕೆ ದಾರಿ ಮಾಡಿಕೊಟ್ಟಿದೆ.
ರಿಯಾಯಿತಿ ದರದ ಬಿತ್ತನೆ ಬೀಜದ ಬೆಲೆ ಹೆಚ್ಚಳ (ಕೆಜಿಗೆ). ಈ ಕೆಳಗಿನ ಪಟ್ಟಿಯಲ್ಲಿ 'ಬೀಜಗಳ ಹೆಸರು, ''ಕಳೆದ ವರ್ಷದ ದರ'', ಪ್ರಸಕ್ತ ''ವರ್ಷದ ಬೆಲೆ'' ಮತ್ತು ''ಹೆಚ್ಚಾಗಿರುವ ದರ''ದ ಮಾಹಿತಿ ಇಲ್ಲಿ ಕ್ರಮವಾಗಿ ನೀಡಲಾಗಿದೆ.
ದರಪಟ್ಟಿ ಮಾಹಿತಿ
* ಹೆಸರು- ಕಳೆದ ವರ್ಷ 100 ರೂ. ಇತ್ತು ಈ ವರ್ಷ 161 ರೂ.ಗೆ ಏರಿಕೆ (ರೂ.61) ಆಗಿದೆ.
* ಉದ್ದು- ಕಳೆದ ವರ್ಷ 89 ರೂ. ಇತ್ತು ಈ ವರ್ಷ 132 ರೂ.ಗೆ ಏರಿಕೆ (ರೂ. 43) ಆಗಿದೆ.
* ತೊಗರಿ- ಕಳೆದ ವರ್ಷ 105 ರೂ. ಇತ್ತು ಈ ವರ್ಷ 153 ರೂ.ಗೆ (ರೂ.48) ಹೆಚ್ಚಳವಾಗಿದೆ.
* ಶೇಂಗಾ- ಕಳೆದ ವರ್ಷ 76 ರೂ. ಇತ್ತು ಈ ವರ್ಷ 78 ರೂ.ಗೆ ಏರಿಕೆ (ರೂ. 02) ಆಗಿದೆ.
* ಗೋವಿನಜೋಳ- ಕಳೆದ ವರ್ಷ 222 ರೂ. ಇತ್ತು ಈ ಬಾರಿ 246 ರೂ.ಗೆ (ರೂ.24) ಏರಿಕೆ ಆಗಿದೆ.
ಬರಗಾಲದ ಸಂಕಷ್ಟದಲ್ಲಿ ಬೀಜದ ದರ ಹೆಚ್ಚಳ, ಸರಿಯಾದ ಸಮಯಕ್ಕೆ ಗೊಬ್ಬರ ಸಿಗದಂತೆ ಮಾಡಿ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ನೂಕಿದಂತಾಗಿದೆ. ಮುಂಗಾರು ಹಂಗಾಮಿನಲ್ಲಿ ಹೇಗೆ ಬೇಸಾಯ ಮಾಡಬೇಕು ಎಂಬುದು ರೈತರಿಗೆ ತಿಳಿಯದಾಗಿದೆ.
ಬೆಳೆಗೆ ಸರಿಯಾಗಿ ಬೆಲೆ ಸಿಗದ ವೇಳೆ ಬೀಜದ ದರ ಮಾತ್ರ ಹೆಚ್ಚಿಗೆ ಮಾಡಿರುವುದು ಹೊರೆಯಾಗುತ್ತಿದೆ. ಸರ್ಕಾರ ಬೀಜ-ಗೊಬ್ಬರಗಳ ದರ ಕಡಿಮೆ ಮಾಡಿ ಸರಿಯಾದ ಸಮಯಕ್ಕೆ ದೊರೆಯುವಂತೆ ಮಾಡಬೇಕು ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಮುಂಗಾರು ಮಳೆ ಜೂನ್ಗೆ ಆಗಮಿಸಲಿದೆ. ಪೂರ್ವ ಮುಂಗಾರು ಮಳೆ ಉತ್ತವಾಗಿ ಸುರಿದಿದೆ. ಹೀಗಾಗಿ ಹಾವೇರಿ, ಬಳ್ಳಾರಿ, ಕುಂದಗೋಳ, ರಾಯಚೂರು ಇನ್ನಿತರ ಕಡೆಗಳಲ್ಲಿ ರೈತರು ಬೀಜಗಳ ಖರೀದಿಗೆ ಕೇಂದ್ರದ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದಾರೆ.












Click it and Unblock the Notifications