ಆರು ತಿಂಗಳ ಹಿಂದೆ ಮದುವೆಯಾಗಿದ್ದ ಯುವ ಉದ್ಯಮಿಯ ಅನುಮಾನಾಸ್ಪದ ಸಾವು
ಹಾಸನ ನಗರದ ಹೊಯ್ಸಳನಗರ ಬಡಾವಣೆಯಿಂದ ನಾಲ್ಕು ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಯುವ ಉದ್ಯಮಿ ಹಾಸನ ತಾಲೂಕಿನ ಯೋಗಿಹಳ್ಳಿ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಹಾಸನ, ಫೆಬ್ರವರಿ 9: ಹಾಸನದಲ್ಲಿ ನಾಲ್ಕು ದಿನಗಳ ಹಿಂದೆಯಷ್ಟೇ ನಿಗೂಢವಾಗಿ ನಾಪತ್ತೆಯಾಗಿದ್ದ ಯುವ ಉದ್ಯಮಿಯು ಶವವಾಗಿ ಪತ್ತೆಯಾಗಿದ್ದಾರೆ. ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಹಾಸನ ನಗರದ ಹೊಯ್ಸಳನಗರ ಬಡಾವಣೆಯಲ್ಲಿ ಮನೆಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದ 26 ವರ್ಷದ ಲಿಖಿತ್ ಗೌಡ ಎನ್ನುವವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದು ಅರಣ್ಯ ಪ್ರದೇಶದಲ್ಲಿ ಎಸೆದಿದ್ದಾರೆ ಎನ್ನಲಾಗಿದೆ. ತಾಲೂಕಿನ ಯೋಗಿಹಳ್ಳಿ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ಲಿಖಿತ್ ಗೌಡ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಲಿಖಿತ್ನನ್ನು ಕಳೆದ ನಾಲ್ಕು ದಿನಗಳ ಹಿಂದೆಯೇ ಕೊಲೆ ಮಾಡಿ, ಆರೋಪಿಗಳು ಪರಾರಿಯಾಗಿದ್ದಾರೆ. ಮೊಬೈಲ್ ಲೊಕೇಶನ್ ಮೂಲಕ ನಾಲ್ಕು ಪೊಲೀಸ್ ತಂಡ ಅರಣ್ಯ ಪ್ರದೇಶದಲ್ಲಿ ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಎಸ್ಪಿ ಹರಿರಾಮ್ ಶಂಕರ್, ಶ್ವಾನ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

"ಪ್ರಾಥಮಿಕ ತನಿಖೆಯಲ್ಲಿ ಹಣದ ವ್ಯವಹಾರಕ್ಕೆ ನಡೆದಿರುವ ಹತ್ಯೆ ಇದಾಗಿದ್ದು, ಶೀಘ್ರ ಆರೋಪಿಗಳನ್ನು ಬಂಧಿಸುತ್ತೇವೆ" ಎಂದು ಎಸ್ಪಿ ಹರಿರಾಮ್ ಶಂಕರ್ ಹೇಳಿದ್ದಾರೆ.
ನಗರದ ಹೊರವಲಯದ ಬೈಪಾಸ್ನಲ್ಲಿ ಸರ್ವೀಸ್ ಸ್ಟೇಷನ್ ನಡೆಸುತ್ತಿದ್ದ ಲಿಖಿತ್ಗೆ ನವೀನ್ ಎನ್ನುವ ಸ್ನೇಹಿತನಿದ್ದ. ಟ್ಯಾಂಕರ್ ಕೊಡಿಸುತ್ತೇನೆ ಎಂದು ಲಿಖಿತ್ನಿಂದ ನವೀನ್ ಎರಡೂವರೆ ಲಕ್ಷ ಹಣ ಪಡೆದುಕೊಂಡಿದ್ದ. ಹಣ ಪಡೆದ ಬಳಿಕ ಟ್ಯಾಂಕರ್ ಕೊಡಿಸದೆ, ಹಣವನ್ನೂ ನೀಡದೆ ಸತಾಯಿಸುತ್ತಿದ್ದ. ಇದೇ ವಿಚಾರಕ್ಕೆ ಲಿಖಿತ್ ಗೌಡ ಕೋರ್ಟ್ ಮೂಲಕ ನೋಟಿಸ್ ಕೂಡಾ ಕೊಟ್ಟಿದ್ದ, ಅಲ್ಲದೇ ನವೀನ್ ಬೈಕ್ಅನ್ನು ಸಹ ತಂದಿದ್ದ ಎನ್ನಲಾಗಿದೆ. ಇದೇ ವಿಚಾರಕ್ಕೆ ಕೋಪಗೊಂಡಿರುವ ನವೀನ್, ಸಾಗರ್ ಎಂಬಾತನ ಸಹಾಯದೊಂದಿಗೆ ಲಿಖಿತ್ ಕೊಲೆ ಮಾಡಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.
ಆರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಮೃತ ಲಿಖಿತ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಆರೋಪಿಗಳನ್ನು ಶೀಘ್ರ ಪತ್ತೆ ಮಾಡಿ ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದಾರೆ. ಸದ್ಯ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿದೆ.
ಮೇಲ್ನೋಟಕ್ಕೆ ಈ ಪ್ರಕರಣ ಸ್ನೇಹಿತರ ನಡುವಿನ ಹಣದ ವ್ಯವಹಾರದಿಂದ ಆರಂಭವಾದ ಮನಸ್ತಾಪ ಯುವ ಉದ್ಯಮಿಯ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಹೇಳಲಾಗುತ್ತಿದೆ. ಪೊಲೀಸರು ಈಗಾಗಲೇ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು, ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಲಿಖಿತ್ ಕೊಲೆಯ ಹಿಂದಿನ ಅಸಲಿ ವಿಚಾರ ತಿಳಿದು ಬರಬೇಕಿದೆ.












Click it and Unblock the Notifications