ಹುಬ್ಬಳ್ಳಿಯಲ್ಲಿ ಹೆಚ್ಚಾದ ಕ್ರೈಂ: ಯುವಕನಿಗೆ ಚಾಕು ಇರಿತ! ಕಿಮ್ಸ್ಗೆ ದಾಖಲು
ಹುಬ್ಬಳ್ಳಿ, ಮಾರ್ಚ್ 12: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಅಪರಾಧ ಚಟುವಟಿಕೆಗಳು ಹೆಚ್ಚು ಹೆಚ್ಚು ವರದಿ ಆಗಿತ್ತುದೆ. ಇದೀಗ ಯುವಕರ ಗುಂಪೊಂದು ಬೇರೊಂದು ಯುವಕನೋರ್ವನಿಗೆ ಕ್ಷುಲ್ಲಕ ವಿಚಾರಕ್ಕೆ ಚಾಕು ಇರಿದಿರುವ ಘಟನೆ ನಗರದ ಸಿಬಿಟಿ ಬಸ್ ನಿಲ್ದಾಣದ ಹಿಂದೆ ನಡೆದಿದೆ. ಗಾಯಾಳು ಯುವಕನನ್ನು ಕಿಮ್ಸ್ಗೆ ದಾಖಲಿಸಲಾಗಿದೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇಕ್ಬಾಲ್ ಎಂಬ ಯುವಕನಿಗೆ ಚಾಕು ಇರಿಯಲಾಗಿದೆ. ಚಾಕು ಇರಿದ ಐವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಹಲ್ಕೆಗೊಳಗಾದ ಯುವಕನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಕಾಲಿಗೆ ಬಲವಾಗಿ ಇರಿಯಲಾಗಿದ್ದು, ಹೊಲಿಗೆ ಹಾಕಲಾಗಿದೆ.

ರಂಜಾನ್ ಹಬ್ಬದ ಹಿನ್ನಲೆ ರಾತ್ರಿ ಪ್ರಾರ್ಥನೆ ಮುಗಿಸಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಎಂಟತ್ತು ಜನರಿದ್ದ ಗುಂಪಿನಲ್ಲಿ ಓರ್ವ ಚಾಕು ಇರಿದಿದ್ದಾನೆಂದು ತಿಳಿದು ಬಂದಿದೆ. ಇಕ್ಬಾಲ್ ಕಾಲಿಗೆ ಮಾರಣಾಂತಿಕವಾಗಿ ಚಾಕು ಇರಿಯಲಾಗಿದ್ದು, ಕೊಲೆ ಪ್ರಕರಣದಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ತಾಬ್ ,ಮಲ್ಲಿಕ್, ಫರ್ದಿನ್, ಮಹಮ್ಮದ್ ಸಾಧಿಕ್, ಮಹಮ್ಮದ್ ಉಜೈಪ್ ಎಂಬ ಯುವಕರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದ್ದು, ಘಟನೆ ಕುರಿತು ನಿಖರ ಮಾಹಿತಿ ತಿಳಿದು ಬರಬೇಕಿದೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಮೈ ಹೂನ್ ಡಾನ್: ಹದಗೆಟ್ಟ ಕಾನೂನು ಸೂವ್ಯವಸ್ಥೆ
ಒಟ್ಟಿನಲ್ಲಿ "ಮೈ ಹೂನ್ ಡಾನ್" ಇಲ್ಲಿ ನಾನೇ ದಾದಾ, ನಂದೇ ಹವಾ ಎಂಬ ಮಧ, ಹರಿಹರೆಯದ ಯುವಕರಲ್ಲಿ ಮನೆ ಮಾಡಿದೆ. ಈ ನಡುವೆ ದಿನೇದಿನೇ ಕಾನೂನು ಸುವ್ಯವಸ್ಥೆ ಕಾಪಾಡಲು ಹುಬ್ಬಳ್ಳಿ ಧಾರವಾಡ ಪೋಲಿಸ್ ಕಮಿಷನರೇಟ್ ಶ್ರಮಿಸುತ್ತಿದ್ದಾರೆ. ಕ್ಷುಲಕ ವಿಚಾರಕ್ಕೆ ಕೊಲೆ, ಹೊಡೆದಾಟ ಮಾರಣಾಂತಿಕ ಹಲ್ಲೆಯಂತಹ ಪ್ರಕರಣಗಳು ಇದೀಗ ಸರ್ವೇ ಸಾಮಾನ್ಯ ಎಂಬಂತಾಗಿದೆ.
ಹುಬ್ಬಳ್ಳಿಯಲ್ಲಿ ಯಾರ ಭಯವೇ ಇಲ್ಲದ ವಾತಾವರಣ ಮತ್ತೆ ಸೃಷ್ಟಿಯಾಗಿದೆ. ಇದು ವ್ಯವಸ್ಥೆಯ ಪರಿಣಾಮವೋ ಅಥವಾ, ನಮ್ಮ ಹಿಂದೆ ಪ್ರಭಾವಿಗಳು ಇದ್ದಾರೆ ಎಂಬ ದೈರ್ಯವೋ ಗೊತ್ತಿಲ್ಲ. ಒಟ್ಟಿನಲ್ಲಿ ನಗರದಲ್ಲಿ ಅಪರಾಧ ಚಟುವಟಿಕೆಗಳಿಗೆ ಎಗ್ಗಿಲ್ಲದೇ ನಡೆಯುತ್ತಿವೆ. ಜನರು ಆತಂಕ ಪಡುವ ವಾತಾವರಣ ನಿರ್ಮಾಣವಾಗಿದೆ. ಇನ್ನಾದರೂ ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಮತ್ತಷ್ಟು ಕಾನೂನು ಕ್ರಮ ಬಿಗಿಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.












Click it and Unblock the Notifications