ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಉಗ್ರ ಸಂಘಟನೆಗಳು ಗರಿಗೆದರಿವೆ-ಪ್ರಮೋದ್ ಮುತಾಲಿಕ್
ಧಾರವಾಡ, ಜುಲೈ 19: ಬೆಂಗಳೂರಿನ ಸುಲ್ತಾನ್ಪಾಳ್ಯ ಎಂಬ ಪ್ರದೇಶದಲ್ಲಿ ಸಿಸಿಬಿ ಪೊಲೀಸರು ಇಂದು ಐದು ಜನ ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಉಗ್ರ ಸಂಘಟನೆಗಳು ಗರಿಗೆದರಿವೆ ಎಂದಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಲ್ಲಿ ಸಿಕ್ಕ ಶಂಕಿತ ಉಗ್ರರ ಬಳಿ ಪಿಸ್ತೂಲ್, ಸಜೀವ ಗುಂಡು, ಸ್ಯಾಟ್ಲೈಟ್ ಫೋನ್ ಸೇರಿದಂತೆ ಅನೇಕ ವಸ್ತುಗಳು ಸಿಕ್ಕಿವೆ. ಸುಲ್ತಾನ್ಪಾಳ್ಯ ಎಂಬ ಪ್ರದೇಶದ ಒಂದು ಮನೆಯಲ್ಲಿ ಇವರು ವಾಸ ಮಾಡುತ್ತಿದ್ದರು. ಇಬ್ಬರು ಮಹಿಳೆಯರೂ ಇದ್ದರು ಎನ್ನುವುದನ್ನೂ ಉಲ್ಲೇಖ ಮಾಡಿದ್ದಾರೆ ಎಂದರು.

ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಈ ರೀತಿಯ ಕೆಟ್ಟ ಹುಳುಗಳು ಹೊರ ಬರುತ್ತಿವೆ. ಹಾವು, ಚೇಳು ಇವೆಲ್ಲ ಹೊರ ಬರುತ್ತವೆ. ಇವರಿಗೆ ಪೋಷಣೆಯನ್ನು ಕಾಂಗ್ರೆಸ್ ಸರ್ಕಾರ ನೀಡುತ್ತಿದೆ. ಇಂತಹ ಉಗ್ರರನ್ನು ಪೋಷಣೆ ಮಾಡುತ್ತಲೇ ಇಡೀ ದೇಶದ ಲಕ್ಷಾಂತರ ಜನರನ್ನು ಕೊಂದು ಹಾಕಿದ್ದು ಕಾಂಗ್ರೆಸ್ ಎಂದು ಆರೋಪಿಸಿದರು.
ಈಗ ಕಾಂಗ್ರೆಸ್ ಬಂದ ಮೇಲೆ ಈ ರೀತಿಯ ಇನ್ನೂ ಪ್ರಕರಣಗಳಾಗುತ್ತವೆ. ಇವರು ಲಷ್ಕರ್ ಎ ತೊಯ್ಬಾ ಸಂಘಟನೆಯ ಸಂಪರ್ಕದಲ್ಲಿರುವಂತವರು. ಅಷ್ಟೇ ಅಲ್ಲ ಬಿಜೆಪಿ ಸರ್ಕಾರ ಇದ್ದಾಗಲೂ ಕೂಡ ಹರ್ಷನ ಕೊಲೆಗಡುಕರು ಜೈಲಿನಲ್ಲಿದ್ದಾಗ ಅವರು ತಮ್ಮ ಕುಟುಂಬದವರ ಜೊತೆ ಮಾತನಾಡುತ್ತಿದ್ದರು. ಇವತ್ತು ಸಿಕ್ಕಂತ ಉಗ್ರರು ಜೈಲಿನಲ್ಲಿದ್ದ ಕೊಲೆಗಡುಕರ ಜೊತೆ ಸಂಪರ್ಕ ಬೆಳೆಸಿ ಅವರ ಮೂಲಕ ಕೃತ್ಯ ಎಸಗುವ ಕೆಲಸ ಮಾಡುತ್ತಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ ಎಂದರು.
ಜೈಲಿನಲ್ಲಿ ಪಾಕಿಸ್ತಾನಿಗಳು, ಅಫಘಾನಿಸ್ತಾನಿಗಳು, ಉಗ್ರರು ಇದ್ದಾರೆ. ಭೂಗತ ಮುಸ್ಲಿಂ ವ್ಯಕ್ತಿಗಳಿದ್ದಾರೆ. ಇವರೆಲ್ಲರನ್ನೂ ವ್ಯವಸ್ಥಿತವಾಗಿ ಬಳಸಿಕೊಳ್ಳುವ ಕೆಲಸ ನಡೆಯುತ್ತಿದೆ. ಸರ್ಕಾರದ ನಿರ್ಲಕ್ಷದಿಂದ ಈ ರೀತಿಯ ಕೃತ್ಯಗಳಾಗುತ್ತಿವೆ. ಕೇವಲ ಕಾಂಗ್ರೆಸ್ ಅಷ್ಟೇ ಅಲ್ಲ. ಬಿಜೆಪಿ ಕೂಡ ಇದಕ್ಕೆ ಕಾರಣ. ತೀರ್ಥಹಳ್ಳಿ ಕ್ಷೇತ್ರದ ಹಿಂದಿನ ದಾಖಲೆಗಳನ್ನು ತೆಗೆದರೆ ಗೊತ್ತಾಗುತ್ತದೆ. ಮಲೆನಾಡಿನಲ್ಲಿ ಇವರು ಬಹಳ ದೊಡ್ಡ ಪ್ರಮಾಣದಲ್ಲಿ ಕೃತ್ಯಕ್ಕೆ ಪ್ಲ್ಯಾನಿಂಗ್ ಮಾಡುತ್ತಿದ್ದಾರೆ ಎಂದರು.
ಬೆಂಗಳೂರು ನಗರದ ಸುಲ್ತಾನ್ಪಾಳ್ಯ ಒಂದೇ ಅಲ್ಲ ಚಾಮರಾಜಪೇಟೆಯ ಆ ಕ್ಷೇತ್ರದಲ್ಲಿ ಉಗ್ರರು ಇದ್ದಾರೆ. ಅಫಘಾನಿಸ್ತಾನಿಗಳು, ಬಾಂಗ್ಲಾದೇಶಿಗಳಿದ್ದಾರೆ ಯಾಕೆ ಅವರು ಕೋವಿಡ್ ಸಂದರ್ಭದಲ್ಲಿ ವೈದ್ಯರನ್ನು ಸರ್ವೆ ಮಾಡಲು ಒಳಗಡೆ ಬಿಡಲಿಲ್ಲ. ಇದಕ್ಕೆ ಇದೇ ಮೂಲ ಕಾರಣ. ಡಿಜೆ ಹಳ್ಳಿ, ಕೆಜೆ ಹಳ್ಳಿ, ಹುಬ್ಬಳ್ಳಿ ಗಲಭೆ ಮೈಸೂರು ಘಟನೆ ಇವೆಲ್ಲ ಕೂಡ ಉಗ್ರ ಕೃತ್ಯಗಳು ಎಂದು ಆರೋಪಿಸಿದರು.
ಇನ್ನು ಈ ರಾಜಕಾರಣಿಗಳು ಅಧಿಕಾರ ದಾಹದಿಂದ ಜನರನ್ನು ಬಲಿ ತೆಗೆದುಕೊಳ್ಳುತ್ತಿದ್ದಾರೆ. ಇದನ್ನು ನಿರ್ಲಕ್ಷ ಮಾಡಬಾರದು. ಸಿಸಿಬಿಯವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಮಹಿಳೆಯರ ಇಲ್ಲ ಎಂದು ಕೂಡಲೇ ನಿರ್ಣಯಕ್ಕೆ ಬರಬೇಡಿ ಅವರನ್ನೂ ಬಂಧಿಸಿ ಸಾಕಷ್ಟು ರೀತಿಯ ವಿಚಾರಣೆ ನಡೆಸಬೇಕು. ಇತ್ತೀಚೆಗೆ ಪಾಕಿಸ್ತಾನದಿಂದ ಒಬ್ಬ ಹೆಣ್ಣು ದೆಹಲಿಗೆ ಬಂದಿದ್ದಳು. ಎಲ್ಇಟಿ ಸಂಘಟನೆ ಮಾತ್ರವಲ್ಲ ಬಹಳಷ್ಟು ಉಗ್ರ ಸಂಘಟನೆಗಳು ಗರಿಗೆದರುತ್ತಿವೆ. ಗೋಹತ್ಯೆ ವ್ಯಾಪಕವಾಗಿ ನಡೆಯುತ್ತಿದೆ. ಸರ್ಕಾರ ಇಂತವುಗಳನ್ನು ಗಂಭೀರವಾಗಿ ನೋಡದಿದ್ದರೆ ಜನರೇ ಎಚ್ಚೆತ್ತು ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.












Click it and Unblock the Notifications