ಎಂ. ಎಂ. ಕಲಬುರ್ಗಿ ಹತ್ಯೆ; ಚಾರ್ಜ್ ಶೀಟ್ ಸಲ್ಲಿಸಿದ ಎಸ್ಐಟಿ
ಧಾರವಾಡ, ಆಗಸ್ಟ್ 18 : ಹಿರಿಯ ಸಂಶೋಧಕ ಎಂ. ಎಂ. ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ 1,600 ಪುಟಗಳ ಚಾರ್ಜ್ಶೀಟ್ ಸಲ್ಲಿಕೆ ಮಾಡಿದೆ. ಹತ್ಯೆ ಪ್ರಕರಣದಲ್ಲಿ 6 ಆರೋಪಿಗಳನ್ನು ಹೆಸರಿಸಲಾಗಿದೆ.
ಹುಬ್ಬಳ್ಳಿ ನ್ಯಾಯಾಲಯಕ್ಕೆ ಎಸ್ಐಟಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಮಹಾರಾಷ್ಟ್ರ ಮೂಲದ ಅಮೋಲ್ ಎ. ಕಾಳೆ ಕಲಬುರ್ಗಿ ಹತ್ಯೆ ಪ್ರಕರಣದಲ್ಲಿಯೂ ಆರೋಪಿಯಾಗಿದ್ದಾರೆ.
ಅಮೋಲ್ ಎ. ಕಾಳೆ (37), ಧಾರವಾಡದ ಗಣೇಶ್ ಮಿಸ್ಕಿನ್ (27), ಬೆಳಗಾವಿಯ ಪ್ರವೀಣ್ ಪ್ರಕಾಶ್ ಚತುರ್ (26), ವಾಸುದೇವ್ ಭಗವಾನ್ ಸೂರ್ಯವಂಶಿ (29), ಔರಂಗಬಾದ್ನ ಶರದ್ ಬಾಹು ಸಾಹೇಬ್ ಕಳಾಸ್ಕರ್ (25), ಹುಬ್ಬಳ್ಳಿಯ ಅಮಿತ್ ಬುದ್ಧಿ ಆರೋಪಿಗಳಾಗಿದ್ದಾರೆ.

2015ರ ಆಗಸ್ಟ್ 30ರಂದು ಎಂ. ಎಂ. ಕಲಬುರ್ಗಿ ಅವರನ್ನು ಧಾರವಾಡದ ಕಲ್ಯಾಣ ನಗರದಲ್ಲಿರುವ ಮನೆಯಲ್ಲಿ ಹತ್ಯೆ ಮಾಡಲಾಗಿತ್ತು. ನಾಲ್ಕು ವರ್ಷಗಳ ಬಳಿಕ ಪ್ರಕರಣದ ತನಿಖೆ ಮುಕ್ತಾಯಗೊಂಡಿದ್ದು, ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.
2015ರ ಜನವರಿಂದ ಮೇ ತಿಂಗಳ ಅವಧಿಯಲ್ಲಿ ಆರೋಪಿಗಳಾದ ಅಮೋಲ್ ಕಾಳೆ, ಗಣೇಶ್, ಪ್ರವೀಣ್ ಹಲವು ಬಾರಿ ಹುಬ್ಭಳ್ಳಿಯ ಇಂದಿರಾ ಗಾಜಿನ ಮನೆ ಉದ್ಯಾನದಲ್ಲಿ ಸೇರಿ ಕಲಬುರ್ಗಿ ಅವರ ಹತ್ಯೆಗೆ ಸಂಚು ರೂಪಿಸಿದ್ದರು.
ಕಲಬುರ್ಗಿ ಅವರ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಅಮೋಲ್ ಕಾಳೆ ಗಣೇಶ್ಗೆ ಸೂಚಿಸಿದ್ದ. ಒಂದು ಬೈಕ್ ಕದ್ದು ಗಣೇಶ್ಗೆ ನೀಡುವಂತೆ ವಾಸುದೇವ್ಗೆ ಸೂಚಿಸಲಾಗಿತ್ತು. ಬಜಾಜ್ ಡಿಸ್ಕವರ್ ಬೈಕ್ ಅನ್ನು ಇದಕ್ಕಾಗಿ ಕದಿಯಲಾಗಿತ್ತು.
ದಕ್ಷಿಣ ಕನ್ನಡದ ರಬ್ಬರ್ ತೋಟವೊಂದರಲ್ಲಿ ಅಮೋಲ್ ಗಣೇಶ್ ಮತ್ತು ಪ್ರವೀಣ್ಗೆ ನಾಡ ಬಂದೂಕಿನಿಂದ ಗುಂಡು ಹಾರಿಸುವ ತರಬೇತಿ ನೀಡಿದ್ದ. ಹತ್ಯೆಯ ದಿನ ಅಮೋಲ್ ಪ್ರವೀಣ್ ಮತ್ತು ಗಣೇಶ್ಗೆ 7.65 ಎಂ.ಎಂ. ಕ್ಯಾಲಿಬರ್ ನಾಡ ಪಿಸ್ತೂಲ್ ಇದ್ದ ಬ್ಯಾಗ್ ನೀಡಿದ್ದ.
ಹತ್ಯೆಯ ದಿನ ಬೆಳಗ್ಗೆ 8.30ರ ಸುಮಾರಿಗೆ ಎಂ. ಎಂ. ಕಲಬುರ್ಗಿ ಅವರ ನಿವಾಸಕ್ಕೆ ಬಂದಿದ್ದ ಪ್ರವೀಣ್ ಮತ್ತು ಗಣೇಶ್ ಎರಡು ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಿದ್ದರು ಎಂದು ಚಾರ್ಜ್ ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.












Click it and Unblock the Notifications