ಹುಬ್ಬಳ್ಳಿ : ಜಿಮಖಾನಾ ಮೈದಾನ ಹೋರಾಟಕ್ಕೆ ಸಚಿವರ ಬೆಂಬಲ
ಹುಬ್ಬಳ್ಳಿ, ಏಪ್ರಿಲ್ 18 : ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿರುವ ಜಿಮಖಾನಾ ಮೈದಾನದ ವಿವಾದ ಈಗ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರ ಬಳಿ ತಲುಪಿದೆ. ಸಚಿವರು ಹೋರಾಟಗಾರರಿಗೆ ಬೆಂಬಲ ನೀಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ಜಿಲ್ಲಾ ಕಾಂಗ್ರೆಸ್ ವಕ್ತಾರ ವೇದವ್ಯಾಸ ಕೌಲಗಿ ಅವರು ಈ ಕುರಿತು ಮಾಹಿತಿ ನೀಡಿದ್ದು, 'ಬೆಂಗಳೂರಿನಲ್ಲಿ ಒಂದು ಗುಂಟೆ ಜಾಗ ಒತ್ತುವರಿಯಾದರೆ ರಾಜ್ಯಾದ್ಯಂತ ಸುದ್ದಿಯಾಗುತ್ತದೆ, ನಗರದ 7.14 ಎಕರೆ ಒತ್ತುವರಿಯಾಗಿರುವ ಬಗ್ಗೆ ಏಕೆ ಸುದ್ದಿಯಾಗುತ್ತಿಲ್ಲ' ಎಂದು ಪ್ರಶ್ನಿಸಿದ್ದಾರೆ. [ಮೈದಾನದ ಹೋರಾಟ, ಒಂದು ದಿನದ ಗಡುವು]

'ಹುಬ್ಬಳ್ಳಿಯಲ್ಲಿ ಕ್ಲಬ್ ವಾದಿಗಳು ಗ್ರೌಂಡ್ ಬಚಾವೋ ಸಮಿತಿಯವರ ಮೇಲೆ ಸುಳ್ಳು ಕೇಸು ಮಾಡಿದ್ದರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬೆಂಗಳೂರಿನಲ್ಲಿ ಸ್ಯಾಂಕಿ ಕೆರೆ ಪಕ್ಕದಲ್ಲಿ ಅನಧಿಕೃತವಾಗಿ ನಿರ್ಮಾಣವಾಗುತ್ತಿರುವ ಕಟ್ಟಡಗಳ ಬಗ್ಗೆ ದಾಖಲೆ ಹಿಡಿದುಕೊಂಡು ಸಿಎಂ ಕಚೇರಿಗೆ ಹೋಗಿದ್ದು ಭಾರೀ ಪ್ರಚಾರ ಪಡೆದರು'. [ಮೈದಾನ ಅಕ್ರಮದಲ್ಲಿ ಬಿಜೆಪಿ ನಾಯಕರು ಶಾಮೀಲು]
'ಆದರೆ, ಹುಬ್ಬಳ್ಳಿ ದೇಶಪಾಂಡೆ ನಗರದಲ್ಲಿರುವ 7.14 ಎಕರೆ ಹುಬ್ಬಳ್ಳಿ ಸ್ಪೋಟ್ಸ್ ಕ್ಲಬ್ ಜಿಮಖಾನಾ ಮೈದಾನ ಒತ್ತುವರಿಯಾಗಿರುವುದರ ಸುದ್ದಿ ಹೆಚ್ಚು ಪ್ರಚಾರ ಪಡೆಯುತ್ತಿಲ್ಲ. ಗ್ರೌಂಡ್ ಬಚಾವೋ ಸಮಿತಿಯವರು ಎಷ್ಟೇ ಹೋರಾಟ ಮಾಡಿದರೂ, ಅದು ಹುಬ್ಬಳ್ಳಿಯಿಂದ ಹೊರ ಹೋಗಿಲ್ಲ. ಸರ್ಕಾರವೂ ಈ ವಿಚಾರದಲ್ಲಿ ಕಣ್ಣು ಮುಚ್ಚಿ ಕುಳಿತಿದೆ' ಎಂದರು.
ಅನಧಿಕೃತ ಕಾಪೌಂಡ್ : '2009ರ ವರೆಗೂ ವಾಯುವಿಹಾರ ಮತ್ತು ಕ್ರಿಕೆಟ್, ಫುಟ್ಬಾಲ್ ಆಡಲು ಸಾರ್ವಜನಿಕರಿಗೆ ಮುಕ್ತವಾಗಿದ್ದ ಮೈದಾವನ್ನು ಅಂದು ಸಭಾಪತಿಯಾಗಿದ್ದ ಜಗದೀಶ್ ಶೆಟ್ಟರ್, ಸಂಸದ ಪ್ರಹ್ಲಾದ್ ಜೋಶಿ, ಪ್ರದೀಪ್ ಶೆಟ್ಟರ್, ಜೋಷಿ ಸಹೋದರ ಗೋವಿಂದ ಜೋಷಿ, ಕೇಂದ್ರ ಸಚಿವ ಅನಂತಕುಮಾರ್ ಸಹೋದರ ನಂದಕುಮಾರ್ ಮುಂತಾದವರು ಅಂದಿನ ಜಿಲ್ಲಾಧಿಕಾರಿಗಳ ಒತ್ತಡ ಹೇರಿ ರಿಕ್ರಿಯೇಷನ್ ಕ್ಲಬ್ ಮಾಡಿ 14 ಕೋಟಿ ಹಣ ಹಾಕಿ ಅನಧಿಕೃತವಾಗಿ ಕಾಪೌಂಡ್ ಕಟ್ಟಿದ್ದಾರೆ'.
'ಕ್ಲಬ್ನಲ್ಲಿ ಬಾರ್ ಮತ್ತು ರೆಸ್ಟೋರೆಂಟ್, ಇಸ್ಪೀಟ್ ಅಡ್ಡಾ ನಿರ್ಮಿಸಿದ್ದು, 400 ಜನರಿಂದ ತಲಾ 4 ಲಕ್ಷ ರೂಪಾಯಿಯಂತೆ ಕ್ಲಬ್ ಫೀ ಪಡೆಯಲಾಗಿದೆ. ಕ್ಲಬ್ ವಿರೋಧವಾಗಿ ಕನ್ನಡದ ಕಟ್ಟಾಳು ನಾಡೋಜ ಡಾ. ಪಾಟೀಲ ಪುಟ್ಟಪ್ಪನವರ ನೇತೃತ್ವದಲ್ಲಿ ಗ್ರೌಂಡ ಬಚಾವೋ ಸಮಿತಿ ಹೋರಾಟ ನಡೆಸಿದ್ದರೂ ಯಾವುದೇ ಪ್ರಯೋಜವಾಗಿಲ್ಲ'.
'ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬೆಂಗಳೂರಿನಲ್ಲಿ ಅನಧಿಕೃತ ಒತ್ತುವರಿ ಬಗ್ಗೆ ಮಾತನಾಡುತ್ತಾರೆ. ಆದರೆ, ಹುಬ್ಬಳ್ಳಿ ಜಿಮಖಾನಾ ಕ್ಲಬ್ ಬಗ್ಗೆ ಏಕೆ ಮೌನವಹಿಸಿದ್ದಾರೆ?. ಸದ್ಯ, ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ವಿನಯ ಕುಲಕರ್ಣಿಯವರು ಹೋರಾಟಗಾರರಿಗೆ ಬೆಂಬಲ ನೀಡಿದ್ದಾರೆ' ಎಂದು ವೇದವ್ಯಾಸ ಕೌಲಗಿ ಹೇಳಿದರು.












Click it and Unblock the Notifications