ಕಾಂಗ್ರೆಸ್ನವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು: ಧಾರವಾಡದಲ್ಲಿ ಪ್ರಲ್ಹಾದ್ ಜೋಶಿ ವಾಗ್ದಾಳಿ
ಕಾಂಗ್ರೆಸ್ನವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದು ಪ್ರಲ್ಹಾದ್ ಜೋಶಿ ಧಾರವಾಡದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧಾರವಾಡ, ಫೆಬ್ರವರಿ, 24: 58 ವರ್ಷಗಳ ಕಾಲ ಈ ದೇಶವನ್ನು ಆಳಿದ ಕಾಂಗ್ರೆಸ್ ಇನ್ನೂ ಕೂಡ ಕರೆಂಟ್ ಕೊಡುತ್ತೇವೆ, ಅಕ್ಕಿ ಕೊಡುತ್ತೇವೆ ಎಂಬ ಆಶ್ವಾಸನೆಯನ್ನೇ ನೀಡಿದೆ. "ಹಾಗಿದ್ದರೆ ಇಷ್ಟು ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್ ಏನು ಕತ್ತೆ ಕಾಯ್ತಾ ಇತ್ತಾ," ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಪ್ರಶ್ನೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪ್ರತಿಯೊಬ್ಬರಿಗೆ 10 ಕೆ.ಜಿ. ಅಕ್ಕಿ ಕೊಡುವ ಭರವಸೆ ನೀಡಿದೆ. ನಾವು ಈಗಾಗಲೇ 5 ಕೆ.ಜಿ. ಅಕ್ಕಿ ಕೊಡುತ್ತಿದ್ದೇವೆ. ಅದೇ ನಾವು 10 ಕೆ.ಜಿ. ಕೊಡುತ್ತಿದ್ದರೆ ಕಾಂಗ್ರೆಸ್ನವರು 20 ಕೆ.ಜಿ. ಕೊಡುತ್ತೇವೆ ಎಂದು ಆಶ್ವಾಸನೆ ನೀಡುತ್ತಿದ್ದರು ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರಸ್ನವರು ಬರೀ ಸುಳ್ಳು ಹೇಳುತ್ತಾರೆ
ಕಾಂಗ್ರೆಸ್ ಗರೀಬಿ ಹಠಾವೋ, ರೋಟಿ ಕಪಡಾ ಮಕಾನ್ ಎಂದೆಲ್ಲ ಹೇಳಿತ್ತು. ಅವೆಲ್ಲ ಕಾಂಗ್ರೆಸ್ ಅವಧಿಯಲ್ಲಿ ಈಡೇರಿದ್ದಾವಾ? ಅವೆಲ್ಲ ಈಡೇರಿದ್ದರೆ ಈಗ ಏಕೆ 10 ಕೆ.ಜಿ. ಅಕ್ಕಿ ಕೊಡುವ ಮಾತನ್ನು ಎತ್ತುತ್ತಿದ್ದರು? ಕಾಂಗ್ರಸ್ನವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಈ ಕಾಂಗ್ರೆಸ್ ಪಕ್ಷಕ್ಕೆ ಸುಳ್ಳು ಹೇಳುವುದು ಡಿಎನ್ಎದಲ್ಲೇ ಇದೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ವಿರುದ್ಧ ಜೋಶಿ ವಾಗ್ದಾಳಿ
ಮಹಾದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮೋದಿ ಸರ್ಕಾರ ನಮ್ಮ ರಾಜ್ಯಕ್ಕೆ ಮತ್ತೊಂದು ಕೊಡುಗೆ ಕೊಟ್ಟಿದೆ. ಈ ಹಿಂದೆ ಕರ್ನಾಟಕಕ್ಕೆ ಒಂದು ಹನಿ ನೀರು ಕೊಡುವುದಿಲ್ಲ ಎಂದು ಕಾಂಗ್ರೆಸ್ನವರು ಹೇಳಿದ್ದರು. ಇನ್ನು ಸ್ವಲ್ಪ ದಿನದಲ್ಲೇ ನೀರು ಹಂಚಿಕೆ ಆಗುತ್ತದೆ ಅನ್ನುವುದು ಸಂತೋಷದ ವಿಚಾರವಾಗಿದೆ. ಹೀಗಾಗಿ ಪ್ರಧಾನಿಗಳಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದರು.

ಯಡಿಯೂಪ್ಪ ನಮ್ಮ ಹಿರಿಯ ನಾಯಕ
ಮಾರ್ಚ್ 11ರಂದು ಧಾರವಾಡದ ಐಐಟಿ ಕಟ್ಟಡ ಉದ್ಘಾಟನೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ಧಾರವಾಡಕ್ಕೆ ಬಂದು ಅದನ್ನು ಉದ್ಘಾಟಿಸಲಿದ್ದಾರೆ. ಇದೇ ವೇಳೆ ಅವರು ಹಲವು ಕಾಮಗಾರಿಳಿಗೆ ಚಾಲನೆ ನೀಡಲಿದ್ದಾರೆ ಎಂದರು. ಹಾಗೆಯೇ ಯಡಿಯೂಪ್ಪ ನಮ್ಮ ಹಿರಿಯ ನಾಯಕ ಹಾಗೂ ಜನಪ್ರಿಯ ನಾಯಕರಾಗಿದ್ದಾರೆ. ಅವರು ಸೇವೆಯನ್ನು ಯಾವತ್ತೂ ಪಕ್ಷಕ್ಕೆ ನೀಡುತ್ತೇನೆ ಎಂದಿದ್ದಾರೆ. ಅವರನ್ನು ನಮ್ಮ ಪಕ್ಷ ಉಪಯೋಗ ಮಾಡಿಕೊಳ್ಳುತ್ತದೆ. ಅವರಿಗೆ ದೇವರು ಹೆಚ್ಚಿನ ಶಕ್ತಿ ಕೊಡಲಿ. ಅವರ ಜನಪ್ರಿಯತೆಯನ್ನು ನಾವು ಬಳಸಿಕೊಳ್ಳುತ್ತೇವೆ ಎಂದರು.












Click it and Unblock the Notifications