Leopard: ಧಾರವಾಡ ವಿಶ್ವವಿದ್ಯಾಲಯದಲ್ಲಿ ಹೆಚ್ಚಿದ ಚಿರತೆ ಆತಂಕ, 3 ವಾರದಿಂದ ಪತ್ತೆ ಆಗದ ಚಿರತೆ
ಧಾರವಾಡ, ಸೆಪ್ಟಂಬರ್ 29: ಸುತ್ತಲೂ ಹಸಿರು ಹೊದಿಕೆಯಿಂದ ಆವೃತವಾಗಿರುವ ವಿದ್ಯಾಕಾಶಿ ಧಾರವಾಡ ಜನರಿಗೆ ಚಿರತೆ ಆತಂಕ ಎದುರಾಗಿದೆ. ಹೌದು ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯ ಆವರಣದಲ್ಲಿ ಕಳೆದ ಮೂರು ವಾರಗಳಿಂದಲೂ ಚಿರತೆ ಕಾಣಿಸಿಕೊಂಡಿದ್ದು, ವಿವಿ ವಿದ್ಯಾರ್ಥಿಗಳು ಹಾಗೂ ಜನರಲ್ಲಿ ಆತಂಕ ಉಂಟು ಮಾಡಿದೆ. ಸದ್ಯ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾ ಹೂಡಿದ್ದಾರೆ.
ಧಾರವಾಡದಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯದ ಆವರಣವು ನೂರಾರು ಎಕರೆ ಹೊಂದಿದೆ. ಇದರಲ್ಲಿ ವಿಶ್ವವಿದ್ಯಾಲಯ ಆಡಳಿತ ಕಚೇರಿ, ಕಾಲೇಜುಗಳು, ಸಭಾಂಗಣ, ಹಾಸ್ಟೆಲ್ ಇವೆ. ನಿತ್ಯ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಓಡಾಡುತ್ತಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ಇಲ್ಲೆಲ್ಲ ಓಡಾಡಿದ್ದ ಚಿರತೆ ಇದೀಗ ಭಯ ಹುಟ್ಟಿಸಿದೆ.

ವಿಶ್ವವಿದ್ಯಾಲಯ ಆವರಣದ ಸುತ್ತ ಮುತ್ತ ಚಿರತೆಯೊಂದು ಬೀಡು ಬಿಟ್ಟಿದೆ. ಆ ಚಿರತೆ ಸೆರೆಗಾಗಿ ಅರಣ್ಯ ಇಲಾಖೆ ಭಾನುವಾರ ಇಡೀ ದಿನ ಕ್ಯಾಂಪಸ್ನಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ವಿವಿಧ ಕಡೆಗಳಲ್ಲಿ ಚಿರತೆ ಸೆರೆ ಹಿಡಿಯಲು ಬೋನು ಇಟ್ಟಿದ್ದಾರೆ. ಆದರೆ ಸದ್ಯದವರೆಗೂ ಯಾವುದೇ ಪ್ರಯೋಜನ ಆಗಿಲ್ಲ.
ಕರ್ನಾಟಕ ವಿಶ್ವವಿದ್ಯಾಲಯ ಕ್ಯಾಂಪಸ್ನಲ್ಲಿ 23 ದಿನಗಳಿಂದ ಚಿರತೆಯೊಂದು ಓಡಾಡುತ್ತಿದೆ. ಈ ಕ್ಯಾಂಪಸ್ ಕೂಡ ನಗರದಿಂದ ಹೊರಭಾಗದಲ್ಲೇ ಇದೆ. ಸುಮಾರು 800ಎಕರೆ ವಿಸ್ತೀರ್ಣ ಹೊಂದಿರುವ ಕರ್ನಾಟಕ ವಿಶ್ವವಿದ್ಯಾಲಯ ಆವರಣದಲ್ಲಿ ಪ್ರತಿದಿನ ಅರಣ್ಯ ಇಲಾಖೆ ಚಿರತೆ ಸೆರೆಗೆ ಹಲವು ಯೋಜನೆ ರೂಪಿಸಿದರೂ ಚಿರತೆ ಮಾತ್ರ ಇದುವರೆಗೂ ಸಿಕ್ಕಿಲ್ಲ. ಇದು ಇಲ್ಲಿ ಶಿಕ್ಷಕರು, ಸಿಬ್ಬಂದಿ, ಹಾಸ್ಟೆಲ್ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಲ್ಲಿ ಭೀತಿ ಹೆಚ್ಚಾಗಲು ಕಾರಣವಾಗಿದೆ.

ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ
ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಆವರಣದಲ್ಲಿ ಕಾಣಿಸಿಕೊಂಡಿದ್ದ ಚಿರತೆಯ ಸೆರೆಗೆ ಅರಣ್ಯ ಇಲಾಖೆಯಿಂದ ಬೋನುಗಳನ್ನು ಇಡಲಾಗಿದೆ. ವಿಶ್ವವಿದ್ಯಾಲಯದ ಗ್ರಂಥಾಲಯ ರಸ್ತೆಯಲ್ಲಿ ಕೆಲ ದಿನಗಳ ಹಿಂದೆ ಬೈಕ್ ಸವಾರ ಸಂಚರಿಸುತ್ತಿದ್ದ ವೇಳೆ ಚಿರತೆ ಕಾಣಿಸಿಕೊಂಡಿತ್ತು. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಬಳಿಕ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗಿ ಚಿರತೆ ಹಿಡಿಯುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.
ಚಿರತೆ ಓಡಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅರಣ್ಯ ಇಲಾಖೆ ಅಕಾರಿಗಳ ಗಮನಕ್ಕೆ ಬಂದ ನಂತರ ವಿಶ್ವವಿದ್ಯಾಲಯ ಆವರಣದ ಕೆಲವೆಡೆ ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದಾರೆ. ಇಲಾಖೆಯ ಕ್ಯಾಮರಾದಲ್ಲೂ ಚಿರತೆಯ ಸಂಚಾರ ಸೆರೆಯಾಗಿದೆ. ಈ ಹಿನ್ನೆಲೆಯಲ್ಲಿ ಇಲಾಖೆಯಿಂದ 3- 4 ಕಡೆಗಳಲ್ಲಿ ಬೋನುಗಳನ್ನು ಇಡಲಾಗಿದೆ ಎಂಬ ಮಾಹಿತಿ ಲಭ್ಯಾಗಿದೆ.
ಸಾರ್ವಜನಿಕರಿಗೆ ಸಂಚಾರ ನಿರ್ಬಂಧ: ನಾಮಫಲಕ
ಅರಣ್ಯ ಇಲಾಖೆಯಿಂದ ಶನಿವಾರ ಕಾರ್ಯಾಚರಣೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚಾರವನ್ನು ನಿರ್ಬಂಧಿಸಿ ಕುಲಸಚಿವ ಸುತ್ತೋಲೆ ಹೊರಡಿಸಿದ್ದಾರೆ. ವಿದ್ಯಾರ್ಥಿಗಳು, ಸಿಬ್ಬಂದಿ, ಸುತ್ತಲಿನ ವಸತಿಗೃಹಗಳಲ್ಲಿ ಇರುವ ನಿವಾಸಿಗಳು ಗಾಂ ಭವನದಿಂದ ಗ್ರಂಥಾಲಯ ಮಾರ್ಗದಲ್ಲಿ ಸಂಚರಿಸಬಾರದು ಎಂದು ಕುಲಸಚಿವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ. ಈ ಕುರಿತು ಅರಣ್ಯ ಇಲಾಖೆಯು ನಾಮಫಲಕ (ಬ್ಯಾನರ್) ಹಾಕಿದೆ.












Click it and Unblock the Notifications