ಮಾಜಿ ಶಾಸಕ ಎಚ್.ಎಸ್ ಶಿವಶಂಕರ್ ಹತ್ಯೆಗೆ ಸಂಚು; ಬಂಧನಕ್ಕೆ ಒತ್ತಾಯ
ದಾವಣಗೆರೆ, ಜೂನ್ 17: ಹರಿಹರದ ಮಾಜಿ ಶಾಸಕ ಎಚ್.ಎಸ್ ಶಿವಶಂಕರ್ ಹತ್ಯೆಗೆ ಸಂಚು ರೂಪಿಸಿರುವವರನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಈ ಸಂಚಿನ ಹಿಂದೆ ಇರುವವರನ್ನು ಪತ್ತೆ ಹಚ್ಚಿ ಬಂಧಿಸಬೇಕೆಂದು ಒತ್ತಾಯಿಸಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅವರಲ್ಲಿ ಮನವಿ ಸಲ್ಲಿಸಿದ್ದೇವೆ ಎಂದು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಚಿದಾನಂದಪ್ಪ ಹೇಳಿದರು.
Recommended Video
ಹರಿಹರ ವಿಧಾನಸಭಾ ಕ್ಷೇತ್ರದ ಯುವ ರಾಜಕಾರಣಿ, ಅಜಾತಶತ್ರು ಎಂದೇ ಹೆಸರಾಗಿರುವ ಮಾಜಿ ಶಾಸಕ ಎಚ್.ಎಸ್ ಶಿವಶಂಕರ್ ಹತ್ಯೆಗೆ ಸಂಚು ರೂಪಿಸಿ, ಅದನ್ನು ಕಾರ್ಯಗತ ಮಾಡಲು ಮುಂದಾಗಿದ್ದು ಆತಂಕಕಾರಿ ಬೆಳವಣಿಗೆ. ಇದರಿಂದ ಜೆಡಿಎಸ್ ಪಾಳಯದಲ್ಲಿ ಆಘಾತವುಂಟಾಗಿದೆ ಎಂದರು.
ಲಾಕ್ಡೌನ್ ನನ್ನ ಜೀವ ಉಳಿಸಿದೆ: ಮಾಜಿ ಶಾಸಕ ಶಿವಶಂಕರ್
ಮಾಜಿ ಶಾಸಕರು ಹರಿಹರ ಕ್ಷೇತ್ರದಲ್ಲಿ ಪ್ರತಿಫಲಾಪೇಕ್ಷೆ ಇಲ್ಲದೇ ನಿಷ್ಠೆಯಿಂದ ತಮ್ಮ ಕೆಲಸದಲ್ಲಿ ತೊಡಗಿದ್ದಾರೆ. ಅವರ ಕಾರ್ಯವೈಖರಿ ಸಹಿಸದೇ ಹತ್ಯೆ ನಡೆಸಲು ಮುಂದಾಗಿರುವುದು ದುರಂತ. ಇಂತಹ ಕೃತ್ಯಕ್ಕೆ ಮುಂದಾಗಿದ್ದ ಇಬ್ಬರನ್ನು ಬಂಧಿಸಲಾಗಿದೆ. ಪರಾರಿಯಾಗಿರುವ ಮತ್ತೊಬ್ಬನನ್ನು ಸಹ ಬಂಧಿಸಿ ಇದರ ಹಿಂದಿರುವ ಕಾಣದ ಕೈಯನ್ನು ಬಯಲಿಗೆಳೆಯಬೇಕೆಂದು ಒತ್ತಾಯಿಸಿದರು.
ಜೆಡಿಎಸ್ ಮುಖಂಡ ಜೆ.ಅಮಾನುಲ್ಲಾ ಖಾನ್ ಮಾತನಾಡಿ, ಎಚ್.ಎಸ್ ಶಿವಶಂಕರ್ ಅವರು ಪರಿಷತ್ ಸದಸ್ಯರಾಗಿ, ಶಾಸಕರಾಗಿ ಸಾಕಷ್ಟು ಉತ್ತಮ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಹರಿಹರದಲ್ಲಿ ಗ್ರೀನ್ ಸಿಟಿ ಲೇಔಟ್ ಕಳಪೆ ಕಾಮಗಾರಿ ವಿರುದ್ಧ ಮಾಜಿ ಶಾಸಕರು ಸಾರ್ವಜನಿಕರ ಪರವಾಗಿ ನಗರಸಭೆಯಿಂದ ಸ್ಟೇ ತಂದಿದ್ದರಿಂದ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿದೆ ಎಂದು ತಿಳಿಸಿದರು.
ಪೊಲೀಸರು ಜನಸ್ನೇಹಿಯಾಗಿ ಕೆಲಸ ನಿರ್ವಹಿಸಬೇಕು: ಗೃಹ ಸಚಿವ ಬೊಮ್ಮಾಯಿ
ಯಾವುದೇ ಇಲಾಖೆಯಿಂದ ಕಾನೂನು ರೀತಿ ಅನುಮೋದನೆ ಪಡೆಯದೇ ಕಾಮಗಾರಿ ನಡೆಸಿದ್ದನ್ನು ಪ್ರಶ್ನೆ ಮಾಡಿದ್ದರಿಂದ ಗುತ್ತಿಗೆದಾರ ಮಂಜುನಾಥ್ ಹಾಗೂ ಆತನ ಸಹಚರರಾದ ವಿನಯ್, ರಾಕೇಶ್ ಎಂಬುವವರು ಕೃತ್ಯ ನಡೆಸಲು ಮುಂದಾಗಿದ್ದರು. ಇದರ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂದು ಆರೋಪಿಸಿದರು.
ಇದರ ಹಿಂದೆ ಪ್ರಭಾವಿಗಳ ಕೈವಾಡವಿರುವ ಶಂಕೆಯಿದ್ದು, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಟಿ.ಗಣೇಶ್ ದಾಸಕರಿಯಪ್ಪ, ಅಂಜಿನಪ್ಪ ಕಡತಿ, ಟಿ.ಅಸ್ಗರ್, ಶೀಲಾಕುಮಾರ್, ವಸಂತಮ್ಮ, ಮನ್ಸೂರ್ ಅಲಿ, ವಿರೇಂದ್ರಚಾರಿ ಮತ್ತಿತರರಿದ್ದರು.