ದಾವಣಗೆರೆಯಲ್ಲಿ ಯೂರಿಯಾ ಬೆರೆತ ನುಚ್ಚು ತಿಂದು ಜೋಡೆತ್ತುಗಳ ಸಾವು
ದಾವಣಗೆರೆ, ಜುಲೈ 17: ಯೂರಿಯಾ ಬೆರೆತಿದ್ದ ಅಕ್ಕಿನುಚ್ಚನ್ನು ತಿಂದ ಜೋಡೆತ್ತುಗಳು ಸಾವನ್ನಪ್ಪಿರುವ ಘಟನೆ ದಾವಣಗೆರೆ ತಾಲ್ಲೂಕಿನ ಮಲ್ಲಾಪುರದಲ್ಲಿ ನಡೆದಿದೆ.
ರೈತ ಅಣ್ಣಪ್ಪ ಎಂಬಾತ 'ಮಂಜ-ನಾಗ' ಎಂಬ ಜೋಡೆತ್ತುಗಳು ಸಾಕಿ ಸಲುಹಿದ್ದರು. ಸುಮಾರು 10 ವರ್ಷಗಳಿಂದ ರೈತನ ಕಷ್ಟಕ್ಕೆ ಹೆಗಲು ಕೊಟ್ಟಿದ್ದ ಎತ್ತುಗಳು ಅಚಾತುರ್ಯದಿಂದ ಸಾವನ್ನಪ್ಪಿವೆ.
ಮೆಕ್ಕೆಜೋಳ ಹೊಲಕ್ಕೆ ಯೂರಿಯಾ ಗೊಬ್ಬರ ಹಾಕಿ, ಉಳಿದ 1 ಕೆಜಿಯಷ್ಟು ಗೊಬ್ಬರವನ್ನು ಮೆಣಸಿನ ಗಿಡಕ್ಕೆ ಹಾಕಲು ಪ್ಯಾಕೆಟ್ ಒಂದರಲ್ಲಿ ಶೇಖರಿಸಿಡಲಾಗಿದೆ. ಅದೇ ಖಾಲಿ ಪ್ಯಾಕೇಟ್ ನಲ್ಲಿ ಗೊತ್ತಾಗದೇ ಅಕ್ಕಿನುಚ್ಚು ಹಾಕಿದ್ದಾರೆ. ಬೆಳಿಗ್ಗೆ ಎಂದಿನಂತೆ ಹಸುವಿಗೆ ತಿಂಡಿ ತಿನ್ನಿಸಿ ಕುಂಟೆ ಹೊಡೆಯಲು ರೈತ ಅಣಿಯಾಗುತ್ತಿದ್ದ ಸಂದರ್ಭ ಎತ್ತುಗಳು ನರಳಾಡಲು ಶುರುಮಾಡಿವೆ. ತಕ್ಷಣವೇ ಪಶು ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಎತ್ತುಗಳು ಕೊನೆಯುಸಿರು ಎಳೆದಿವೆ.

ಬಲವಾದ ಈ ಎತ್ತುಗಳ ಸಾವಿನ ಸುದ್ದಿ ತಿಳಿದ ಕೂಡಲೇ ಸುತ್ತಮುತ್ತಲಿನ ಗ್ರಾಮಸ್ಥರು ಬಂದು ಅಂತಿಮ ದರ್ಶನ ಪಡೆದಿದ್ದಾರೆ. ರೈತ ತನ್ನ ಪ್ರೀತಿಯ ಎತ್ತುಗಳನ್ನು ಧಾರ್ಮಿಕ ವಿಧಿವಿಧಾನಗಳ ಮೂಲಕ ಪೂಜೆ ಸಲ್ಲಿಸಿ ತನ್ನ ಹೊಲದಲ್ಲೆ ಅಂತ್ಯಕ್ರಿಯೆ ಮಾಡಿದ್ದಾನೆ.












Click it and Unblock the Notifications