ಚಾಮರಾಜನಗರ: ನ್ಯಾಯಾಲಯಕ್ಕೆ ಕರೆದೊಯ್ಯುವಾಗ ವಿಚಾರಣಾ ಕೈದಿ ಪರಾರಿ, ಹತ್ತಾರು ಕಳವು ಪ್ರಕರಣಗಳ ಆರೋಪಿಗಾಗಿ ಶೋಧಕಾರ್ಯ
ಚಾಮರಾಜನಗರ, ಆಗಸ್ಟ್, 04: ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯೋರ್ವ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿರುವ ಘಟನೆ ತಮಿಳುನಾಡಿನ ಆಸನೂರು ಹೋಟೆಲ್ ಸಮೀಪ ನಡೆದಿದೆ.
ಚಾಮರಾಜನಗರದ 25 ವರ್ಷದ ಯುವಕ ಪರಾರಿಯಾಗಿರುವ ಆರೋಪಿ. ದೇವಾಲಯ ಹುಂಡಿ ಕಳವು, ರಾಬರಿ ಸೇರಿದಂತೆ ಚಾಮರಾಜನಗರದ ಗ್ರಾಮಾಂತರ ಠಾಣೆ, ಪೂರ್ವ ಠಾಣೆ ವ್ಯಾಪ್ತಿಯಲ್ಲಿ ಈತನ ವಿತುದ್ಧ ಹಲವು ಪ್ರಕರಣ ದಾಖಲಾಗಿತ್ತು. ಅದೇ ರೀತಿ, ತಮಿಳುನಾಡಿನ ಈರೋಡ್ ಜಿಲ್ಲಾ ವ್ಯಾಪ್ತಿಯಲ್ಲೂ ಈತನ ವಿರುದ್ಧ ಕಳವು ಪ್ರಕರಣಗಳು ದಾಖಲಾಗಿತ್ತು.

ಆರೋಪಿಗಾಗಿ ಶೋಧಕಾರ್ಯ
ಕೆಲ ದಿನಗಳ ಹಿಂದೆ ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು ಈತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಆದರೆ ಈರೋಡ್ ನ್ಯಾಯಾಲಯಕ್ಕೆ ಇಂದು ವಿಚಾರಣೆಗೆ ಹಾಜರಾಗುವ ಸಂದರ್ಭದಲ್ಲಿ ಆಸನೂರು ಹೋಟೆಲ್ ಬಳಿ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದಾನೆ. ಸದ್ಯ, ಚಾಮರಾಜನಗರ ಪೊಲೀಸರು ಆಸನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ.
ಗಾರೆ ಕೆಲಸಗಾರರು ತೆರಳುತ್ತಿದ್ದ ವಾಹನ ಪಲ್ಟಿ
ಮತ್ತೊಂದೆಡೆ ಗಾರೆ ಕೆಲಸಗಾರರು ತೆರಳುತ್ತಿದ್ದ ಟಾಟಾ ಏಸ್ ವಾಹನ ಪಲ್ಟಿಯಾಗಿ ಓರ್ವ ಮೃತಪಟ್ಟು 8 ಮಂದಿ ಗಾಯಗೊಂಡ ಘಟನೆ ಚಾಮರಾಜನಗರ ತಾಲೂಕಿನ ಉಗೇನದಹುಂಡಿ ಬಳಿ ನಡೆದಿತ್ತು.
ಮೂಡಲ ಅಗ್ರಹಾರ ಗ್ರಾಮದ ಕೆಂಪರಾಜು(27) ಅಪಘಾತದಲ್ಲಿ ಮೃತಪಟ್ಟಿದ್ದು, ರಾಚಪ್ಪ ,ಮಹೇಶ, ದರ್ಶನ್, ಮಂಟೇಲಿಂಗ, ಮಹದೇವಸ್ವಾಮಿ, ನಾಗರಾಜು ಮಹದೇವ ಪ್ರಸಾದ್, ಕುಮಾರ್ ಎಂಬವರು ಗಾಯಗೊಂಡಿದ್ದಾರೆ. ಮನೆಯೊಂದಕ್ಕೆ ತಾರಸಿ ಕೆಲಸ ಮಾಡಲು ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದ್ದು ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಚಾಮರಾಜನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.












Click it and Unblock the Notifications