ವರ್ಗಾವಣೆ ಆದೇಶದಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಕಾನ್ಸ್ಟೇಬಲ್
ಚಾಮರಾಜನಗರ, ಜನವರಿ 21: ವರ್ಗಾವಣೆ ಆದೇಶದಿಂದ ಮನನೊಂದ ಪೊಲೀಸ್ ಕಾನ್ಸ್ಟೇಬಲ್ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸ್ ಕಾನ್ಸ್ಟೇಬಲ್ ಎಚ್.ಆರ್.ಮಹೇಶ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಎಂದು ಗುರುತಿಸಲಾಗಿದೆ. ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹೇಶ್ ಅವರನ್ನು ಹನೂರು ಠಾಣೆಗೆ ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ವರ್ಗಾವಣೆ ಮಾಡಿದ್ದರು. ಜೊತೆಗೆ, ಇತರೆ ಠಾಣೆಗಳ 7 ಮಂದಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದರು.
ಈ ವರ್ಗಾವಣೆಯಿಂದ ಮನನೊಂದು ಎಚ್.ಆರ್.ಮಹೇಶ್ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದೆ. ಘಟನೆಯಲ್ಲಿ ಎಚ್.ಆರ್.ಮಹೇಶ್ ಅವರ ಪಕ್ಕೆಲುಬು, ಕೈ-ಕಾಲಿಗೆ ಸುಟ್ಟ ಗಾಯಗಳಾಗಿದ್ದು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
ಇನ್ನು, ಈ ಸಂಬಂಧ, ಎಸ್ಪಿ ಶಿವಕುಮಾರ್ ಪ್ರತಿಕ್ರಿಯಿಸಿದ್ದು, "ವಿಚಾರ ಗಮನಕ್ಕೆ ಬಂದಿದ್ದು, ಯಾವ ಕಾರಣಕ್ಕೆ ಆತ್ಮಹತ್ಯೆ ಯತ್ನಿಸಿದರು ಎಂದು ತಿಳಿದುಬಂದಿಲ್ಲ, ಕೆಲವರಿಗೆ ಎಚ್ಚರಿಕೆ ಕೊಡುವ ಉದ್ದೇಶದಿಂದ ವರ್ಗಾವಣೆ ಮಾಡಲಾಗಿತ್ತು, ಪರಿಶೀಲನೆ ನಡೆಸಿ ಬಳಿಕ ಹೆಚ್ಚಿನ ವಿವರ ಹಂಚಿಕೊಳ್ಳುತ್ತೇನೆ" ಎಂದು ತಿಳಿಸಿದ್ದಾರೆ.
ಸಾಯಿಮಂದಿರದ ಬಳಿ ಸರಗಳ್ಳತನ
ಸಂಚು ಹಾಕಿ ಕೂತಿದ್ದ ಖದೀಮನೊಬ್ಬ ಮಹಿಳೆಯ ಸರ ಕಸಿದು ಪದಾರಿಯಾಗಿರುವ ಘಟನೆ ಕೊಳ್ಳೇಗಾಲದ ಸಾಯಿಮಂದಿರ ರಸ್ತೆಯಲ್ಲಿ ನಡೆದಿದೆ. ನಗರದ ಸಾಯಿಮಂದಿರ ರಸ್ತೆಯ ನಿವಾಸಿ ನಾಗರತ್ನ ಸರ ಕಳೆದುಕೊಂಡವರು.
ನಾಗರತ್ನದಿನಸಿ ಅಂಗಡಿಗೆ ತೆರಳಿ ಪದಾರ್ಥಗಳನ್ನು ಖರೀದಿ ಮಾಡುತ್ತಿದ್ದರು. ಈ ವೇಳೆ ಬೈಕ್ನಲ್ಲಿ ಬಂದ ಕಿಡಿಗೇಡಿಗಳು 57 ಗ್ರಾಂ ತೂಕದ ಚಿನ್ನದ ಸರ ಕದ್ದು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಕೊಳ್ಳೇಗಾಲ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ನಡೆದಿದೆ.
ಅನುಮಾನಸ್ಪದವಾಗಿ ನಿಂತಿದ್ದ ಆಟೋ ಪೊಲೀಸರ ವಶ
ಚಾಮರಾಜನಗರ ತಾಲೂಕಿನ ಚಿಕ್ಕಹೊಳೆ ಬಳಿ ಕಳೆದ ಮೂರು ದಿನಗಳಿಂದ ಅನುಮಾನಸ್ಪದವಾಗಿ ನಿಂತಿದ್ದ ಆಟೋವೊಂದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚಿಕ್ಕಹೊಳೆ ಬಳಿ ಗುರುವಾರದಿಂದ ಪಾಸೆಂಜರ್ ಆಟೋವೊಂದು ಅನುಮಾನಾಸ್ಪದವಾಗಿ ನಿಂತಿರುವುದು ಕಂಡುಬಂದಿದೆ. ಮೂರು ದಿನ ಕಳೆದರೂ ಆಟೋ ಅಲ್ಲೇ ಇದೆ. ಹೊಯ್ಸಳ ಪೊಲೀಸರ ಗಮನಕ್ಕೆ ಈ ವಿಚಾರ ಶನಿವಾರ ತಿಳಿದು ಬಂದಿದ್ದು, ಆಟೋವನ್ನು ಚಾಮರಾಜನಗರ ಪೂರ್ವ ಠಾಣೆ ಪೊಲೀಸರ ವಶಕ್ಕೆ ನೀಡಿದ್ದಾರೆ.
ಆಟೋ ಮೈಸೂರು ನೋಂದಣಿಯಾಗಿದ್ದು ಆಟೋ ಗಾಜು ಹಾಗೂ ಸೀಟ್ ಗಳು ಹರಿದು ಹೋಗಿದ್ದು ಕಳೆದ 3 ದಿನಗಳಿಂದಲೂ ನಿಂತಿದೆ ಎಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಸದ್ಯ ಚಾಮರಾಜನಗರ ಪೂರ್ವ ಠಾಣೆ ಪೊಲೀಸರು ಈ ಸಂಬಂಧ ತನಿಖೆ ಕೈಗೊಂಡಿದ್ದಾರೆ.